ಸಿದ್ದರಾಮಯ್ಯ ಮೇಲೆ ಗಣಿ ಬಾಂಬ್ ಹಾಕಿದ ಕುಮಾರಸ್ವಾಮಿ
Recommended Video
ಬೆಂಗಳೂರು, ಜನವರಿ 13: ರಾಜ್ಯದಲ್ಲಿ 5450 ಕೋಟಿ ಅಕ್ರಮ ಗಣಿಗಾರಿಕೆ ನಡೆದಿದೆ. ಈ ಅಕ್ರಮಕ್ಕೆ ಮುಖ್ಯಮಂತ್ರಿಗಳ ಕಚೇರಿ ಬೆಂಬಲ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ನಗರದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಸಂಸ್ಥೆಯಿಂದ 3 ಕಂಪೆನಿಗಳಿಗೆ ಸಂಡೂರು ಬಳಿಯ ಸುಬ್ಬರಾಯನಹಳ್ಳಿ ಬಳಿ ಗಣಿಗಾರಿಕೆ ಮಾಡಿ 30 ಲಕ್ಷ ಟನ್ ಅದಿರು ಗಣಿಗಾರಿಕೆ ಮಾಡಲು ಅವಕಾಶ ನೀಡಲಾಗಿತ್ತು ಆದರೆ ಈ ಕಂಪೆನಿಗಳು ನಿಯಮಕ್ಕೆ ವಿರುದ್ಧವಾಗಿ 60 ಲಕ್ಷಕ್ಕೂ ಹೆಚ್ಚು ಟನ್ ಅದಿರು ಉತ್ಖನನ ಮಾಡಿವೆ ಎಂದು ಅವರು ಗಂಭೀರ ಆರೋಫ ಮಾಡಿದ್ದಾರೆ.
ಸಿಎಂ ಬೇಕಾದ್ರೆ ಅವರಪ್ಪನ ಮೇಲೆ ಆಣೆ ಹಾಕೊಳ್ಳಿː ಎಚ್ಡಿಕೆ
'ಎಂಎಂಎಲ್ ಅಧಿಕಾರಿಗಳ ತಂಡವೇ ನಡೆಸಿರುವ ತನಿಖೆಯಿಂದ ಹಗರಣ ಬಯಲಿಗೆ ಬಂದಿದೆ. ತನಿಖಾ ವರದಿಯ ಪ್ರತಿ ಪಡೆದುಕೊಂಡಿದ್ದೇನೆ. ಅದರಲ್ಲಿರುವ ಪ್ರಮುಖ 14 ಪುಟಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದೇನೆ' ಎಂದು ಕುಮಾರಸ್ವಾಮಿ ಹೇಳಿದರು.
ತುಷಾರ್ ಮೇಲುಸ್ತುವಾರಿಯಲ್ಲೇ ಹಗರಣ
ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನೆಪಮಾತ್ರಕ್ಕೆ ವಿನಯ ಕುಲಕರ್ಣಿ ಸಚಿವರಾಗಿದ್ದು, ಮುಖ್ಯಮಂತ್ರಿ ಕಾರ್ಯದರ್ಶಿಯಾಗಿರುವ ತುಷಾರ್ ಗಿರಿನಾಥ್ ಅವರೇ ಖಾತೆಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಅಕ್ರಮಗಳಲ್ಲಿ ಅವರ ಪಾತ್ರವೂ ಇದೆ ಎಂದೂ ಆಪಾದಿಸಿದರು. ಎಲ್ಲಾ ಅಕ್ರಮಗಳು ಅಧಿಕಾರಿ ತುಷಾರ್ ಅವರ ಸಮಯದಲ್ಲೇ ಆಗಿದ್ದು, ಎಲ್ಲಾ ಅಕ್ರಮಗಳಿಗೂ ಸಿಎಂ ಕಚೇರಿಯ ಬೆಂಬಲ ಇದೆ, ಸಿಎಂ ಕಚೇರಿಯಲ್ಲಿಯೇ ಸುಳ್ಳು ದಾಖಲೆಗಳನ್ನು ತಯಾರಿಸಲಾಗಿದೆ, ಹೀಗಾಗಿ ತುಷಾರ್ ಅವರನ್ನು ಸಿಎಂ ಕಚೇರಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮೂರು ವರ್ಷದಲ್ಲಿ 8 ಅಧಿಕಾರಿಗಳ ವರ್ಗ
ಈ ಅಕ್ರಮದ ಬಗ್ಗೆ ತನಿಖೆಗೆ ಮುಂದಾಗಿದ್ದ ಅಧಿಕಾರಿ ಹೇಮಲತಾ ಅವರನ್ನು ವರ್ಗಾವಣೆ ಮಾಡಲಾಯಿತು ಅಷ್ಟೆ ಅಲ್ಲದೆ 3 ವರ್ಷದಲ್ಲಿ 8 ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ, ಭ್ರಷ್ಟಾಚಾರವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಹಿರಿಯ ಅಧಿಕಾರಿಗಳ ಸಹಾಯ ಪಡೆಯಲಾಗಿದೆ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿ ವಿರುದ್ಧ ತನಿಖೆ ಆಗಬೇಕು
ಬಿಜೆಪಿ ಕಾಲದಲ್ಲಿ ಆಗಿದ್ದ ಗಣಿ ಹಗರಣಕ್ಕಿಂತಲೂ ದೊಡ್ಡ ಪ್ರಮಾಣದ ಹಗರಣ ಇದು, ಯಡಿಯೂರಪ್ಪ ಚೆಕ್ನಲ್ಲಿ ಲಂಚ ಪಡೆದರು ಎಂದು ಆರೋಪಿ ಮಾಡಿದರು, ಆದರೆ ಇದ್ದರಾಮಯ್ಯ ಅವರು ಬುದ್ಧಿವಂತರು ತಾವು ಸಿಕ್ಕಿಹಾಕಿಕೊಳ್ಳದ ರೀತಿ ಹಗರಣ ಮಾಡಿದ್ದಾರೆ ಎಂದರು.
ದಾಖಲೆ ಸಹಿತ ಆರೋಪ
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಹಿಟ್ ಅಂಡ್ ರನ್ ಎಂದು ಪದೇ ಪದೇ ಟೀಕಿಸುತ್ತಾರೆ, ಸುಳ್ಳು ಆರೋಪ ಮಾಡುತ್ತೇನೆ ಎಂದಿದ್ದಾರೆ. ಬಿಜೆಪಿ ಬೆಂಬಲಿಗರು ಹಣ ಪಡೆದು ಸುಮ್ಮನಾಗಿದ್ದೇನೆ ಸುಮ್ಮನಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಣಕುತ್ತಿದ್ದಾರೆ. ಹೀಗಾಗಿ ದಾಖಲೆಗಳ ಸಹಿತ ಆರೋಪ ಮಾಡುತ್ತಿದ್ದೇನೆ ಕುಮಾರಸ್ವಾಮಿ ಹೇಳಿದರು.
ತನಿಖೆಗೆ ಆದೇಶಿಸಿ
ಬಿಜೆಪಿಯವರು ಮಾಡಿದ ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ ಈಗ ತಮ್ಮದೇ ಕಾಲದಲ್ಲಿ ಆಗಿರುವ ಗಣಿ ಹಗರಣಕ್ಕೆ ಉತ್ತರ ನೀಡಬೇಕು. ಪ್ರಕರಣ ಕುರಿತು ಈ ಕೂಡಲೇ ತನಿಖೆಗೆ ಆದೇಶಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.