ಹೈಕಮಾಂಡ್ ಗೆ ಕಪ್ಪ ವಿವಾದ: ಕುಮಾರಸ್ವಾಮಿ ಹೇಳಿದ್ದೇನು?
ಯಡಿಯೂರಪ್ಪ- ಅನಂತ ಕುಮಾರ್ ಸಂಭಾಷಣೆಯಿರುವ ಸಿಡಿ ಬಿಡುಗಡೆ ಮಾಡಿದ ಕಾಂಗ್ರೆಸ್; ಸಿಡಿ ಬಿಡುಗಡೆ ನಂತರ ಪ್ರತಿಕ್ರಿಯಿಸಿರುವ ಕುಮಾರ ಸ್ವಾಮಿ.
ಬೆಂಗಳೂರು, ಫೆಬ್ರವರಿ 13: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ, ತಮ್ಮ ಹೈಕಮಾಂಡ್ ಗಳಿಗೆ ಕಪ್ಪ ಕಾಣಿಕೆ ಸಲ್ಲಿಸಿವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ರು. ಹಣ ನೀಡಿದ್ದಾರೆಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಸಿಡಿಸಿದ್ದ ಬಾಂಬ್ ಗೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಪಕ್ಷ ಸೋಮವಾರ ಮಧ್ಯಾಹ್ನ ಸಿಡಿಯೊಂದನ್ನು ಬಿಡುಗಡೆ ಮಾಡಿದೆ.[ಅರ್ಕಾವತಿ ಹಗರಣ : ಎಚ್ಡಿಕೆಯಿಂದ 490 ಪುಟದ ಪುಸ್ತಕ ಬಿಡುಗಡೆ]
ಇದರಲ್ಲಿ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಇಬ್ಬರೂ ಕಾಂಗ್ರೆಸ್ ಪಕ್ಷವನ್ನು ಹಣಿಯಲು ನಿರ್ಧರಿಸಿದ್ದು, ಚುನಾವಣೆಯ ಹೊಸ್ತಿಲಲ್ಲಿರುವಾಗ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕಪ್ಪ ವಿಚಾರವನ್ನು ಪ್ರಸ್ತಾಪಿಸಬೇಕೆಂದು ಮಾತನಾಡಿಕೊಂಡಿದ್ದಾರೆನ್ನಲಾಗಿದೆ.
ಈ ವೇಳೆಯ ಮಾತುಕತೆಯಲ್ಲಿ ಯಡಿಯೂರಪ್ಪ ಅವರು, ''ಹೈಕಮಾಂಡ್ ಗೆ ನಾವೂ ನೀಡಿದ್ದೇವೆ (ಹಣ). ಆದರೆ, ಸಾವಿರವಲ್ಲ (ಸಾವಿರ ಕೋಟಿಯಷ್ಟಲ್ಲ)'' ಎಂಬ ಮಾತುಗಳನ್ನಾಡಿರುವುದಾಗಿ ಹೇಳಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿಯೂ ಆದ ಕುಮಾರ ಸ್ವಾಮಿ, ''ಅನಂತ ಕುಮಾರ್ ಹಾಗೂ ಯಡಿಯೂರಪ್ಪ ಅವರ ನಡುವಿನ ಸಂಭಾಷಣೆಯಿಂದ ಹಾಗೂ ಯಡಿಯೂರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಮಾಡಿರುವ ಆರೋಪಗಳಿಂದ ಎರಡೂ ಪಕ್ಷಗಳು ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ತಮ್ಮ ಪಕ್ಷಗಳ ಹೈಕಮಾಂಡ್ ಗೆ ಹಣ ಸಂದಾಯ ಮಾಡಿರುವುದು ತಿಳಿಯುತ್ತದೆ'' ಎಂದರು.
ಆನಂತರ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, ''ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಆರ್ಥಿಕ ಅವ್ಯವಹಾರಗಳನ್ನು ನಡೆಸಿದ್ದಾರೆ. ಅರ್ಕಾವತಿ ಬಡಾವಣೆ ವಿಚಾರದಲ್ಲಿ ಅವರಿಗೆ 350 ಕೋಟಿ ರು. ಸಂದಾಯವಾಗಿದೆ'' ಎಂದು ತಿಳಿಸಿದರು.