KSRTC ಬಸ್ ಆಂಬುಲೆನ್ಸ್: 16 ಜಿಲ್ಲೆಗಳಿಗೆ ಯೋಜನೆ ವಿಸ್ತರಣೆ
ಬೆಂಗಳೂರು, ಜನವರಿ 13: ಬಸ್ ಅಪಘಾತ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿ ತಕ್ಷಣದ ಪ್ರಥಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬಸ್ ಆಂಬುಲೆನ್ಸ್ ಸೇವೆಯನ್ನು ಕೆಎಸ್ ಆರ್ ಟಿಸಿ ಪರಿಚಯಿಸಿದೆ.
ರಸ್ತೆಗಳಲ್ಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ 1062 ಕರೆ ಮಾಡಿದರೆ ಈ ಆಂಬುಲೆನ್ಸ್ ಸ್ಥಳಕ್ಕೆ ಸ್ಥಳಕ್ಕೆ ಧಾವಿಸಲಿದೆ, ಅದರಲ್ಲಿರುವ ನುರಿತ ಶುಶ್ರೂಶಕರು ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿ, ಸಮೀಪದ ಆಸ್ಪತ್ರೆಗೆ ದಾಖಲಿಸಲಿದ್ದಾರೆ.
ಬೆಂಗಳೂರಿನ 198 ವಾರ್ಡ್ ಗಳಿಗೆ ಬೈಕ್ ಆಂಬುಲೆನ್ಸ್!
ಈ ಸೇವೆ ಒದಗಿಸಲು ಕೆಎಸ್ ಆರ್ಟಿಸಿಯು ಗೋಲ್ಡನ್ ಅವರ್ ಟ್ರಸ್ಟ್ ಜೊತೆ ಶುಕ್ರವಾರ ಒಪ್ಪಂದ ಮಾಡಿಕೊಂಡಿತು. ಸದ್ಯ ಬೆಂಗಳೂರಿನಲ್ಲಿ ಒಂದು ಆಂಬುಲೆನ್ಸ್ ಕಾರ್ಯಾರಂಭ ಮಾಡಿದೆ. 16 ಜಿಲ್ಲೆಗಳಿಗೆ ಈ ಯೋಜನೆ ವಿಸ್ತರಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.
ವಿಶೇಷ ಪ್ರಥಮ ಚಿಕಿತ್ಸಾ ಕಿಟ್: ಅಪಘಾತ ಸಂದರ್ಭದಲ್ಲಿ ನೀಡುವ ಪ್ರಥಮ ಚಿಕಿತ್ಸೆಯೇ ಗಾಯಾಳುವಿನ ಜೀವ ಉಳಿಸುತ್ತದೆ. ಈ ನಿಟ್ಟಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಇಡಲು ವಿಶೇಷವಾದ ಗೋಲ್ಡನ್ ಅವರ್ ಪ್ರಥಮ ಚಿಕಿತ್ಸೆ ಕಿಟ್ ಗಳನ್ನು ವಿತರಿಸಿದ್ದಾರೆ. ಗೋಲ್ಡನ್ ಅವರ್ ಸಂಸ್ಥೆ ಉಚಿತವಾಗಿ ಕಿಟ್ ಗಳನ್ನು ವಿತರಣೆ ಮಾಡಿದೆ. ಉಳಿದೆಲ್ಲಾ ಬಸ್ ಗಳಿಗೆ ಕಿಟ್ ಖರೀದಿಸಿ ಅಳವಡಿಸಲು ನಿಗಮ ನಿರ್ಧರಿಸಿದೆ.
ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ: 5-7 ವರ್ಷ ಅಪಘಾತರಹಿತ ಬಸ್ ಚಾಲನೆ, ಶಿಸ್ತು ಬದ್ಧ ಕರ್ತವ್ಯ ಮಾಡಿದ ಚಾಲಕರಿಗೆ ನಿಗಮ ಬೆಳ್ಳಿ ಪದಕ ನೀಡಿ ಗೌರವಿಸಿದೆ. 2013 ರಿಂದ 16 ರ 4 ವರ್ಷದ ಅವಧಿಯಲ್ಲಿ ಒಟ್ಟು 86 ಚಾಲಕರು ಪದಕ ಪಡೆಯಲು ಅರ್ಹರಾಗಿದ್ದರು.
10 ಆಂಬುಲೆನ್ಸ್ ಗಳು ನಿರ್ವಹಿಸು ವಷ್ಟು ಕೆಲಸವನ್ನು ಬಸ್ ಆಂಬುಲೆನ್ಸ್ ನಿರ್ವಹಿಸಲಿದೆ. ತೀವ್ರವಾಗಿ ಗಾಯಗೊಂಡ ಎಂಟು ಜನರನ್ನು ಹಾಗೂ ಸಣ್ಣಪುಟ್ಟ ಗಾಯಗೊಂಡ 16 ಮಂದಿಯನ್ನು ಇದರಲ್ಲಿ ಏಕಕಾಲದಲ್ಲಿ ಸಾಗಿಸಬಹುದು.
ತುರ್ತು ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು, ಗಾಲಿಕುರ್ಚಿ ಇರುತ್ತವೆ. ಆಟೋಮೇಟೆಡ್ ಎಕ್ಸ್ಟರ್ನಲ್ ಡಿಫೈಬ್ರಿಲೇಟರ್ಸ್ ಇಸಿಜಿ, ಪಲ್ಸ್ ಆಕ್ಸಿ ಮೆಟ್ರಿ ಮೀಟರ್, ಕೇಂದ್ರೀಕೃತ ಸಕ್ಷನ್ ಸೌಲಭ್ಯ, ಪ್ರಥಮ ಚಿಕಿತ್ಸೆ ಕಿಟ್, ಜಂಬೊ ಆಕ್ಸಿಜನ್ ಸಿಲಿಂಡರ್, ಎಕ್ಸ್ಟ್ರಿಕೇಷನ್ ಉಪಕರಣಗಳೂ ಇದರಲ್ಲಿ ಇರಲಿವೆ.
ಜಿಪಿಎಸ್ ವ್ಯವಸ್ಥೆ, ವೈರ್ಲೆಸ್ ಸಂವಹನ ಸಾಧನ ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನೂ ಇದರಲ್ಲಿ ಅಳವಡಿಸಲಾಗಿದೆ. ತುರ್ತು ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಒಳಗೊಂಡ ಗೋಲ್ಡನ್ ಅವರ್ ಕಿಟ್ ಕೂಡಾ ಇದರಲ್ಲಿದೆ.
ಅಪಘಾತ ಸಂಭವಿಸಿದಾಗ ಕಬ್ಬಿಣದ ಸರಳುಗಳ ನಡುವೆ ಕೈ-ಕಾಲು ಸಿಲುಕಿಕೊಂಡರೆ ಬಿಡಿಸಲು ನೆರವಾಗುವ ಕಟರ್ಗಳೂ ಇರುತ್ತವೆ. ಕಂಪ್ಯೂಟರ್ಗಳನ್ನು ಅಳವಡಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಬಸ್ನೊಳಗೆ ಏನಾಗುತ್ತಿದೆ ಎಂಬುದನ್ನು ತಿಳಿಯಲು ಸಹಾಯವಾಗುತ್ತದೆ.