ಪ್ರಯಾಣಕ್ಕೆ ಅವಕಾಶ ನೀಡದ ಕೆಎಸ್ ಆರ್ ಟಿಸಿಗೆ 10 ಸಾವಿರ ದಂಡ
ಬೆಂಗಳೂರು, ಜನವರಿ 23: ಬೆಂಗಳೂರಿನ ನಿವಾಸಿ ಜಿ.ಎಂ.ಪಂಚಾಕ್ಷರಿ ಮತ್ತು ಕುಟುಂಬದವರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಗ್ರಾಹಕರ ವೇದಿಕೆಯು ಕೆಎಸ್ ಆರ್ ಟಿಸಿಗೆ 10 ಸಾವಿರ ರುಪಾಯಿ ದಂಡ ವಿಧಿಸಿದೆ. ಈ ತೀರ್ಮಾನ ದೂರು ದಾಖಲಿಸಿದ ನಾಲ್ಕು ವರ್ಷಗಳ ನಂತರ ಬಂದರೂ ಗ್ರಾಹಕರ ಹಕ್ಕು ವಿಚಾರವಾಗಿ ಮಹತ್ವದ್ದಾಗಿದೆ.
ಈ ತೀರ್ಪಿನ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಪ್ರಕಟವಾಗಿದೆ. ಪಂಚಾಕ್ಷರಿ ಅವರು ತೋರಣ ಎಂಟರ್ ಪ್ರೈಸಸ್ ಎಂಬ ಫ್ರಾಂಚೈಸಿಯಿಂದ ಬೆಂಗಳೂರಿನಿಂದ ತಿರುಪತಿಗೆ ತೆರಳಲು ಅಕ್ಟೋಬರ್ 12, 2012ರ ರಾತ್ರಿಗೆ ಕೆಎಸ್ ಆರ್ ಟಿಸಿಯ ನಾಲ್ಕು ಟಿಕೆಟ್ ಕಾಯ್ದಿರಿಸಿದ್ದರು. ಅದಕ್ಕಾಗಿ 744 ರುಪಾಯಿ ಪಾವತಿಸಿದ್ದರು.[ಬೈಂದೂರಿನ ಗೋಪಾಲ ಪೂಜಾರಿಗೆ ಕೆಎಸ್ಆರ್ ಟಿಸಿ ಅಧ್ಯಕ್ಷ ಪಟ್ಟ]
ಪಂಚಾಕ್ಷರಿ ಮತ್ತು ಕುಟುಂಬದವರು ಆ ದಿನ ಬಸ್ ನಲ್ಲಿ ತೆರಳಲು ಮೆಜೆಸ್ಟಿಕ್ ಗೆ ಹೋಗಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ, ಇದು ಕೆಎಸ್ ಆರ್ ಟಿಸಿ ಟಿಕೆಟ್ ಅಲ್ಲ ಎಂದು ಪ್ರಯಾಣಕ್ಕೆ ಅವಕಾಶ ಕೊಟ್ಟಿಲ್ಲ. ಮತ್ತೆ ಹೊಸದಾಗಿ ಟಿಕೆಟ್ ಖರೀದಿಸಿದ ಪಂಚಾಕ್ಷರಿ, ತಿರುಪತಿಗೆ ತೆರಳಿದ್ದಾರೆ.
ಅಲ್ಲಿಂದ ಹಿಂತಿರುಗಿದ ಮೇಲೆ, ಕೆಎಸ್ ಆರ್ ಟಿಸಿ ನೌಕರರು ಎಲ್ಲರ ಮುಂದೆ ಅವಮಾನ ಮಾಡಿದರು ಎಂದು ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಕೆಎಸ್ ಆರ್ ಟಿಸಿಯು ಟಿಕೆಟ್ ಕಾಯ್ದಿರಿಸಿದ ಕೆಲ ನಿಮಿಷದಲ್ಲೇ ತಾಂತ್ರಿಕ ಕಾರಣದಿಂದ ರದ್ದಾಗಿದೆ ಎಂದು ತಿಳಿಸಿದೆ.[5,500 ಹೊಸ ಬಸ್ಗಳ ಖರೀದಿಗೆ ಸಾರಿಗೆ ಇಲಾಖೆ ನಿರ್ಧಾರ]
ಈ ಸಮಜಾಯಿಷಿಯನ್ನು ತಿರಸ್ಕರಿಸಿ, ತೀರ್ಪು ನೀಡಿರುವ ಅಧ್ಯಕ್ಷೆ ಟಿ ಶೋಭಾದೇವಿ ಹಾಗೂ ಸದಸ್ಯ ಅನೂರಾಧಾ, ತಾಂತ್ರಿಕ ಸಮಸ್ಯೆಗೆ ದೂರುದಾರರು ಹೊಣೆಯಲ್ಲ ಎಂದು ಹೇಳಿದ್ದಾರೆ. ಜೊತೆಗೆ ಕೆಎಸ್ ಆರ್ ಟಿಸಿಗೆ ಸೂಚನೆ ನೀಡಿರುವ ವೇದಿಕೆ, ದೂರುದಾರರಿಗೆ 744 ರುಪಾಯಿ ಟಿಕೆಟ್ ಹಣ, ದಂಡವಾಗಿ 8 ಸಾವಿರ ಹಾಗೂ 2 ಸಾವಿರ ರುಪಾಯಿ ಕೋರ್ಟ್ ಖರ್ಚು ಎಂದು ಕಟ್ಟಿಕೊಡಲು ಸೂಚನೆ ನೀಡಿದ್ದಾರೆ.
ತಾಂತ್ರಿಕ ಸಮಸ್ಯೆಗೆ ಕಾರಣರಾದವರ ವಿರುದ್ಧ ಕೆಎಸ್ ಆರ್ ಟಿಸಿ ಕ್ರಮ ತೆಗೆದುಕೊಳ್ಳಬೇಕು. ದೂರುದಾರರು ತಾಂತ್ರಿಕ ತೊಂದರೆ ಹೊಣೆಗಾರರಲ್ಲ ಎಂದು ಹೇಳಲಾಗಿದೆ.