ಲಾಲ್ ಬಾಗ್ ಕೃಂಬಿಗಲ್ ಕಟ್ಟಡದ ಪಳೆಯುಳಿಕೆ ಮರು ಬಳಕೆ
ಬೆಂಗಳೂರು, ಡಿಸೆಂಬರ್ 06 : ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಪುರಾತನ ಕೃಂಬಿಗಲ್ ಕಟ್ಟಡವನ್ನು ನೆಲಸಮಗೊಳಿಸಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ತೋಟಗಾರಿಕೆ ಇಲಾಖೆ ಇದೀಗ ಪುರಾತನ ಶಿಲೆ ಹಾಗೂ ಕಂಬಗಳನ್ನು ರಕ್ಷಿಸಲು ಮುಂದಾಗಿದೆ.
ಬಾಲಕಿ ಪ್ರಾಣ ತೆಗೆದ ಲಾಲ್ ಬಾಗ್ ನ ಜೇನ್ನೊಣ
ಪ್ರತಿ ವರ್ಷವು ಲಾಲ್ ಬಾಗ್ ಒಳ್ಳೆಯ ಕಾರ್ಯದ ಜತೆಗೆ ಹಲವು ಟೀಕೆಗಳಿಗೂ ಗುರಿಯಾಗುತ್ತಿದೆ, ಕಳೆದ ಎರಡು ವರ್ಷಗಳಿಂದ ಜೇನು ಧಾಳಿ ನಡೆದು ಎರಡು ಮುಗ್ದ ಜೀವ ಬಲಿಯಾಗಿತ್ತು. ಎಲ್ಲದಕ್ಕೂ ತೋಟಗಾರಿಕೆ ಇಲಾಖೆಯ ಬೇಜವಾಬ್ದಾರಿಯೇ ಕಾರಣವಾಗಿತ್ತು. ಆದರೆ ಇದೀಗ ಬಂದಿರುವ ಟೀಕೆಗೆ ಬೇಜವಾಬ್ದಾರಿ ಎನ್ನಬೇಕೋ ಅಥವಾ ತಿಳಿದೂ ಮಾಡಿದ ತಪ್ಪು ಎನ್ನಬೇಕೋ ಅರ್ಥವಾಗುವುದಿಲ್ಲ,
ಕೃಂಬಿಗಲ್ ಹಾಲ್ ಪುನರ್ ನಿರ್ಮಾಣ ಕಾರ್ಯದಲ್ಲಿ ವಿಳಂಬ: ಸ್ಪಷ್ಟನೆ
ಶತಮಾನದ ಪರಂಪರೆ ಹೊಂದಿರುವ ಕೃಂಬಿಗಲ್ ಕಟ್ಟವನ್ನು ನೆಲಸಮಮಾಡಲಾಗಿದೆ. ಲಾಲ್ ಬಾಗ್ ಗೆ ಬರುವವರು ಕೃಂಬಿಗಲ್ ಹಾಲ್ ನ್ನು ನೋಡದೆ ತೆರಳುವುದೇ ಇಲ್ಲ. ಏಕೆಂದರೆ ಲಾಲ್ ಬಾಗ್ ನಲ್ಲಿರುವ ಪ್ರತಿಯೊಂದು ಸ್ಥಳವೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಆದರೆ ತೋಟಗಾರಿಕೆ ಇಲಾಖೆ ಕೃಂಬಿಗಲ್ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಎಂದು ಕಟ್ಟಡವನ್ನು ನೆಲಸಮ ಮಾಡಿದ್ದರು.
ಇದರಿಂದ ಸಾರ್ವಜನರಿಕರು, ಲಾಲ್ ಬಾಗ್ ನಡಿಗೆದಾರರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ತೋಟಗಾರಿಕೆ ಇಲಾಖೆ ನೆಲಸಮ ಮಾಡಿದ ಸಂದರ್ಭದಲ್ಲಿ ದೊರೆತ ಶಿಲೆಗಳು, ಕಂಬಗಳು ಮತ್ತು ಕೆಲವು ಇಟ್ಟಿಗೆಗಳನ್ನು ಮರು ಬಳಕೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೃಂಬಿಗಲ್ ಯಾರು?
ಕೃಂಬಿಗಲ್ ಅವರ ಪೂರ್ಣ ಹೆಸರು ಗುಸ್ತವ್ ಹರ್ಮನ್ ಕೃಂಬಿಗಲ್, ಇವರು ಜೆರ್ಮನಿಯ ಸಸ್ಯಶಾಸ್ತ್ರಜ್ಞರು. ಅದರೆ ಜತೆಗೆ ಉದ್ಯಾನ ವಿನ್ಯಾಸಕಾರರು ಕೂಡ, ಸಂಶೋಧನೆಗಾಗಿ ಭಾರತಕ್ಕೆ ಬಂದಾಗ ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್ ಸ್ಥಾಪಿಸಿದರು. ಅದರೊಂದಿಗೆ ಅವರ ನಂತರದ ಜೀವನ 1932 ರ ನಂತರ ಬೆಂಗಳೂರಿನಲ್ಲೇ ಕಳೆದರು. ಲಾಲ್ ಬಾಗ್ ಸಸ್ಯಕಾಶಿಯಾಗಿ ನಿರ್ಮಾಣವಾಗಲು ಕೃಂಬಿಗಲ್ ಅವರ ಶ್ರಮವೇ ಕಾರಣ.
ಬಾಳಿಕೆಗೆ ಬರಲಿರುವ ಪಳೆಯುಳಿಕೆಗಳು:
ಶತಮಾನದಷ್ಟು ಹಳೆಯದಾದ ಕೃಂಬಿಗಲ್ ಸಭಾಂಗಣವು ಮೈಸೂರು ಅರಸರ ಲಾಂಛನವಾದ ಎರಡು ತಲೆಗಳ ಗಂಡಬೇರುಂಡನನ್ನು ಒಳಗೊಂಡಿತ್ತು. ಇದೀಗ ಅವೆಲ್ಲ ಪಳೆಯುಳಿಕೆಗಳಾಗಿವೆ. ಈ ಪೈಕಿ ಹಲವಾರು ಶಿಲಾಕಂಬಗಳು, ಗಟ್ಟಿಯಾದ ಇಟ್ಟಿಗೆಗಳು, ಲೈಮ್ ಮಾರ್ಟರ್ ನಿಂದ ಮಾಡಿದ ಭಾಗಗಳು ಮರು ಬಳಕೆಗೆ ಯೋಗ್ಯವಾಗಿದ್ದುಮುಂದಿನ ನೂರು ವಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರಲಿದೆ.
ಕೃಂಬಿಗಲ್ ಕಟ್ಟಡಕ್ಕೆ ಮರುಜೀವ:
ಶತಮಾನದ ಕೃಂಬಿಗಲ್ ಕಟ್ಟಡವನ್ನು ನೆಲಸಮ ಮಾಡಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿರುವ ತೋಟಗಾರಿಕೆ ಇಲಾಖೆ ಇದೀಗ ಸದ್ಯದಲ್ಲೇ ಕೃಂಬಿಗಲ್ ಕಟ್ಟಡವನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದೆ. ಅಷ್ಟೇ ಅಲ್ಲದೆ ಹಳೆಯ ಕಟ್ಟಡದ ವಿನ್ಯಾಸದ ರೀತಿಯಲ್ಲೇ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಕಟ್ಟಡದ ಭಾಗಗಳ ಸಂರಕ್ಷಣೆ:
ಉತ್ತಮ ಸ್ಥಿತಿಯಲ್ಲಿರುವ ಕಟ್ಟಡ ಭಾಗಗಳನ್ನು ಸಂರಕ್ಷಿಸಿ ಇಡಲಾಗಿದೆ. ಕೃಂಬಿಗಲ್ ಸ್ಮಾರಕಕ್ಕೆ ಬಳಸಲಾಗಿದ್ದ ಶಿಲೆಗಳು ಹಾಗೂ ಕಂಬಗಳು ಕೂಡ ಉತ್ತಮ ಸ್ಥಿತಿಯಲ್ಲಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಈಗಾಗಲೇ ಪರಿಶೀಲನೆ ನಡೆಸಿ ಮರು ಬಳಕೆಗೆ ನಿಶಾನೆ ನೀಡಿದ್ದಾರೆ. ಹೀಗಾಗಿ ಮೂಲ ಸ್ವರೂಪದಲ್ಲೇ ಹೊಸ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ನಿರ್ದೇಶಕ ಎಂ. ಜಗದೀಶ್ .
ಕೃಂಬಿಗಲ್ ಕಟ್ಟಡ ಪುನರ್ ನಿರ್ಮಾಣ ವಿಚಾರ ಸಭೆ:
ತೋಟಗಾರಿಕೆ ಇಲಾಖೆ ಹಾಗೂ ಪುರಾತತ್ವ ಇಲಾಖೆಗಳು ಜಂಟಿಯಾಗಿ ಕೃಂಬಿಗಲ್ ಸ್ಮಾರಕ ಪುನರ್ ನಿರ್ಮಾಣದ ಕಾಮಗಾರಿ ಕೈಗೊಳ್ಳುತ್ತಿದ್ದು, ಈ ಕುರಿತು ಗುರುವಾರ ಡಿ.೦೭ರಂದು ಮಹತ್ವದ ಸಭೆ ನಡೆಸಲಿದೆ. ಕೃಂಬಿಗಲ್ ಹಾಲ್ ಇದ್ದ ಕಟ್ಟಡ 1 ಸಾವಿರ ಚದರಡಿ ವಿಸ್ತೀರ್ಣವನ್ನು ಹೊಂದಿತ್ತು. ಅಲ್ಲದೇ ಬಿಡಿಎ ಪ್ರಕಟಿಸಿರುವ 2031ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ನ್ನು ಪುರಾತನ ಕಟ್ಟಡಗಳ ಪಟಿಟಯಲ್ಲಿ ಕೃಂಬಿಗಲ್ ಸ್ಮಾರಕ ಕೈಬಿಡಲಾಗಿತ್ತು. ಇದೀಗ ಕಟ್ಟಡವನ್ನು ಮೂಲಸ್ವರೂಪದಲ್ಲೇ ಪುನರ್ ರೂಪಿಸಲು ಯೋಜನೆ ಕೈಗೊಳ್ಳಲಾಗುತ್ತಿದೆ.