ಸಂಶೋಧನೆಗಳ ಕುರಿತು ರೈತರಿಗೆ ಅರಿವು ಮೂಡಿಸಬೇಕಿದೆ: ವಜುಭಾಯಿ ವಾಲಾ
ಬೆಂಗಳೂರು, ನವೆಂಬರ್ 15 : ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಗಳು ವಿಶ್ವ ವಿದ್ಯಾನಿಲಯದ ಆವರಣದೊಳಗೆ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗದೆ ಹಳ್ಳಿಗಳಿಗೆ ಭೇಟಿನೀಡಿ ರೈತರೊಂದಿಗೆ ಸಂವಾದಗಳನ್ನು ಏರ್ಪಡಿಸಿ ಅವರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ರಾಜ್ಯಪಾಲ ವಜೂಭಾಯಿ ವಾಲಾ ಅವರು ಹೇಳಿದರು.
ಇಂದು ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣಲ್ಲಿ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಹಮ್ಮಿಕೊಂಡಿದ್ದ ಕೃಷಿ ಮೇಳ- 2018 ಅನ್ನು ಉದ್ಫಾಟಿಸಿ ಅವರು ಮಾತನಾಡಿದರು.
ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ದೇಶದಲ್ಲಿಯೇ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದ್ದು ಇನ್ನೂರಕ್ಕೂ ಹೆಚ್ಚು ವಿವಿಧ ಹೊಸ ತಳಿಗಳನ್ನು ಕೊಡುಗೆ ನೀಡಿದ ವಿ.ವಿ. ಆಗಿದೆ ಎಂದು ಕೃಷಿ ವಿವಿಯನ್ನು ಹೊಗಳಿದರು.
ರೈತರ ಶ್ರಮವನ್ನು ಹಾಡಿ ಹೊಗಳಿದ ವಜುಭಾಯಿ ವಾಲಾ
ಕೃಷಿ ಮೇಳ ಆಯೋಜಿಸುತ್ತಿರುವುದಕ್ಕಾಗಿ ವಿ.ವಿ. ಗೆ ಧನ್ಯವಾದ ತಿಳಿಸಿದ ಅವರು ಯಾವುದೇ ಉತ್ತಮ ಕಾರ್ಯಗಳನ್ನು ಮಾಡುವವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ಭಾರತ ಕೃಷಿ ರಾಷ್ಟ್ರ. ಇಲ್ಲಿನ ಬಹುತೇಕ ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದು ಅವರ ಮೂಲ ಕಸುಬು ಕೃಷಿಯಾಗಿದೆ. ಈ ದೇಶದ ಮುಕ್ಕಾಲು ಪಾಲು ಜನರ ಕಸುಬು ಆಗಿರುವ ಕೃಷಿಗೆ ಹೆಚ್ಚಿನ ಒತ್ತನ್ನು ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಕೈಗಾರಿಕೆ-ಕೃಷಿ ಸಮತೋಲಿತವಾಗಿರಬೇಕು
ದೇಶದ ಅಭಿವೃದ್ಧಿಯಲ್ಲಿ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಜೊತೆಯಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ಸಹ ಸಮತೋಲನವನ್ನು ಕಾಪಾಡಿಕೊಳ್ಳುವತ್ತ ಸಾಗಿದಲ್ಲಿ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಕರ್ನಾಟಕ ಸಂಶೋಧನೆಗಳ ನಾಡು ಎಂಬ ಹೆಮ್ಮೆ ಇದೆ. ನವೀನ ಸಂಶೋಧನೆಗಳಿಂದ ರೈತರ ಬದುಕು ಸುಧಾರಿಸುವಂತಾಗಬೇಕು ಎಂದರು.
ಕೃಷಿ ಮೇಳದಲ್ಲಿ ವಸ್ತು ಪ್ರದರ್ಶನವೇ ಹೈಲೆಟ್
ನದಿ ಜೋಡಣೆ ಬಗ್ಗೆ ಗಂಭೀರ ಯೋಚನೆ ಬೇಕು
ನದಿ ಜೋಡಣೆ ಕುರಿತು ಗಂಭೀರವಾಗಿ ಯೋಚಿಸಬೇಕಾದ ಅವಶ್ಯಕತೆ ಇದೆ. ನೀರಿನ ಸದ್ಬಳಕೆ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಅವಶ್ಯಕತೆ ಇದ್ದಷ್ಟು ಮಾತ್ರ ನೀರನ್ನು ಬಳಸಬೇಕು ನಮ್ಮ ಹಾಗೇ ಪ್ರಕೃತಿ ನೀಡುವ ನೀರಿನ ಮೇಲೆ ಇತರ ಪ್ರಾಣಿ ಪಕ್ಷಿಗಳಿಗೂ ಸಹ ಹಕ್ಕಿದೆ ಇದೆ ಎಂದರು.
ಮತ್ತೆ ಬಂದಿದೆ ರೈತರ ಮಾಹಿತಿ ಕಣಜ 'ಕೃಷಿ ಮೇಳ': ಏನೇನು ವಿಶೇಷತೆ
ಕೃಷಿ ವಿವಿಗೆ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ
ಕೃಷಿ ವಿ.ವಿ. ಗಳಲ್ಲಿ ಈ ಹಿಂದೆ ಮಹಿಳಾ ವಿದ್ಯಾರ್ಥಿಗಳ ಸಂಖ್ಯೆ ಹುಡುಗರಿಗೆ ಹೋಲಿಸಿದಲ್ಲಿ ಕಡಿಮೆ ಇರುತ್ತಿತ್ತು. ಆದರೆ ಇಂದು ಶೇ 60 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮಹಿಳೆಯರೇ ಆಗಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.
ಕೃಷಿ ಸಚಿವ ಶಿವಶಂಕರ ರೆಡ್ಡಿ
ಕೃಷಿ ಸಚಿವ ಎನ್. ಎಚ್. ಶಿವಶಂಕರರೆಡ್ಡಿ ಅವರು ಮಾತನಾಡಿ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಕೃಷಿ ಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಕೃಷಿ ಮೇಳದಲ್ಲಿ ಹೊಸತಳಿ, ತಂತ್ರಜ್ಞಾನ, ಅವಿಷ್ಕಾರಗಳನ್ನು ರೈತರಿಗೆ ಪರಿಚಯಿಸುವ ದೃಷ್ಟಿಯಿಂದ 650 ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.'
ಕೃಷಿ ಶಿಕ್ಷಣದಲ್ಲಿ ಖಾಸಗಿಗೆ ಅವಕಾಶ ಇಲ್ಲ
ಸರ್ಕಾರ ರೈತರ ಪರವಾಗಿ ಅನೇಕ ಉತ್ತಮ ನಿಲುವುಗಳನ್ನು ತೆಗೆದುಕೊಂಡಿದೆ. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕೃಷಿ ವಿ.ವಿ.ಗಳಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಮೌಲ್ಯಮಾಪನ ಸಮಿತಿ ರಚಿಸಲಾಗಿದೆ. ಕೃಷಿ ಶಿಕ್ಷಣದಲ್ಲಿ ಖಾಸಗಿ ವಿ.ವಿ. ಗಳಿಗೆ ಅವಕಾಶವಿಲ್ಲ ಎಂದು ಅವರು ಹೇಳಿದರು.
ಇಸ್ರೇಲ್ ಮಾದರಿ ಕೃಷಿ
ಪ್ರಸ್ತುತ ಸರ್ಕಾರ ಕೃಷಿಗಾಗಿ ಪ್ರತ್ಯೇಕವಾಗಿ ಕೃಷಿ ಅಗ್ರಿ ಕ್ಯಾಬಿನೆಟ್ ಮಾಡಲು ಯೋಜಿಸಿದೆ. ರೈತರಿಗಾಗಿ ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿ ತಂತ್ರಜ್ಞಾನ ಜಾರಿಗೆ ತರಲು ಸಿದ್ಧತೆಗಳು ನಡೆದಿದ್ದು, ಜೊತೆಯಲ್ಲಿ ಸಿರಿಧಾನ್ಯ ಸಾವಯವ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.