ಕೆಪಿಎಸ್ ಸಿ: ವ್ಯಕ್ತಿತ್ವ ಪರೀಕ್ಷೆ ನಿಯಮ ಅಂತಿಮಗೊಳಿಸಿದ ಸರಕಾರ
ಸಂದರ್ಶನದ ನಿಯಮಾವಳಿ ಅಂತಿಮಗೊಂಡಿದ್ದರಿಂದ ಜನವರಿ ಎರಡನೇ ವಾರದಲ್ಲಿ ವ್ಯಕ್ತಿತ್ವ ಪರೀಕ್ಷೆ ನಡೆಸಲು ಕೆಪಿಎಸ್ ಸಿ ಸಿದ್ಧತೆ ನಡೆಸಿದೆ.
ಬೆಂಗಳೂರು, ಡಿಸೆಂಬರ್ 17: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ನಡೆಸುವ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ತಿದ್ದುಪಡಿ ನಿಯಮಗಳ ಅಂತಿಮ ಅಧಿಸೂಚನೆಯ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ನಿಯಮಾವಳಿ ಅಂತಿಮಗೊಂಡಿದ್ದರಿಂದ ಜನವರಿ ಎರಡನೇ ವಾರದಲ್ಲಿ ವ್ಯಕ್ತಿತ್ವ ಪರೀಕ್ಷೆ ನಡೆಸಲು ಕೆಪಿಎಸ್ ಸಿ ಸಿದ್ಧತೆ ನಡೆಸಿದೆ. ಇದರಿಂದಾಗಿ ಎಂಟು ತಿಂಗಳುಗಳಿಂದ ಕಾಯುತ್ತಿದ್ದ 2014ನೇ ಸಾಲಿನ 1,389 ಅಭ್ಯರ್ಥಿಗಳು ಉದ್ಯೋಗ ದೊರೆಯುವ ಸಾಧ್ಯತೆಯಿದೆ.[ಕರ್ನಾಟಕ ಲೋಕಸೇವಾ ಆಯೋಗದಿಂದ 823 ಹುದ್ದೆಗಾಗಿ ಅರ್ಜಿ ಆಹ್ವಾನ]
ಸರಕಾರ ನಿಯಮಾವಳಿಯ ಅಧಿಸೂಚನೆಯನ್ನು ಶುಕ್ರವಾರ ಹೊರಡಿಸಿದ್ದು, ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ತೊಡೆದು ಹಾಕಲು ಹೋಟಾ ಸಮಿತಿ 'ವ್ಯಕ್ತಿತ್ವ ಪರೀಕ್ಷಾ ಮಂಡಳಿ'ಯ ಸ್ವರೂಪಕ್ಕೆ ಸಂಬಂಧಿಸಿದಂತೆ ಮಾಡಿದ ಕೆಲವು ಶಿಫಾರಸ್ಸುಗಳನ್ನು ನೀಡಿತ್ತು ಅದರೆ ಅದನ್ನು ಸರ್ಕಾರ ತಳ್ಳಿಹಾಕಿದೆ.
ವ್ಯಕ್ತಿತ್ವ ಪರೀಕ್ಷೆಗೆ ಅಭ್ಯರ್ಥಿಗಳ ಅನುಪಾತ ಹೆಚ್ಚಳ ಮತ್ತು ಸಂದರ್ಶನ ಮಂಡಳಿಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಹೋಟಾ ಸಮಿತಿ ಶಿಫಾರಸ್ಸಿನಂತೆ ಜೂನ್ 13ರಂದು ಕರಡು ನಿಯಮಾವಳಿಯ ಅಧಿಸೂಚನೆ ಹೊರಡಿಸಿತ್ತು. ಅಲ್ಲದೆ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಈಗ ಸರ್ಕಾರದ ನಿಲುವಿನಲ್ಲಿ ಮತ್ತೆ ಬದಲಾವಣೆ ಮಾಡಿದ್ದು ವ್ಯಕ್ತಿತ್ವ ಪರೀಕ್ಷೆಯ ಅಧಿಸೂಚನೆಯನ್ನು ಪಟ್ಟಿಯನ್ನು ಪ್ರಕಟಿಸಿದೆ.
2014ನೇ ಸಾಲಿನ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಹೊಸತಾಗಿ 403 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ತೊಡಕಾಗಿದೆ. ಹೊಸ ನೇಮಕಾತಿ ಸಂಬಂಧಿಸಿದ ಕಡತಕ್ಕೆ ಮುಖ್ಯಮಂತ್ರಿ ಸಹಿ ಹಾಕಿದ್ದಾರೆ. ಅದರೆ ಅಂಗವಿಕಲರಿಗೆ ಸಹಾಯಕ ಆಯುಕ್ತ ಹುದ್ದೆ ನೀಡುವ ಸಂಬಂಧ ಗೊಂದಲ ಮುಂದುವರೆದಿದೆ. ಕಾರ್ಮಿಕ ಇಲಾಖೆ ಕೂಡಾ ಅಂಗವಿಕಲರ ನೇಮಕಾತಿಗೆ ಸಂಬಂಧಿಸಿ ಇನ್ನೂ ಅಧಿಸೂಚನೆ ಹೊರಡಿಸಿಲ್ಲ.