ಕೆಪಿಎನ್ ಟ್ರಾವೆಲ್ಸ್ ನ ಮೂವತ್ತಕ್ಕೂ ಹೆಚ್ಚು ಬಸ್ ಗೆ ಬೆಂಕಿ
ಬೆಂಗಳೂರು, ಸೆಪ್ಟೆಂಬರ್ 12: ಹೊಸಕೆರೆಹಳ್ಳಿ ಬಳಿ ನೈಸ್ ರಸ್ತೆಯ ಸಮೀಪದ ದ್ವಾರಕನಾಥ ನಗರದಲ್ಲಿ ನಿಲ್ಲಿಸಿದ್ದ ಕೆಪಿಎನ್ ಟ್ರಾವೆಲ್ಸ್ ಗೆ ಸೇರಿದ ಮೂವತ್ತಕ್ಕೂ ಹೆಚ್ಚು ಬಸ್ ಗಳು ಬೆಂಕಿಗೆ ಆಹುತಿಯಾಗಿವೆ. ಉದ್ರಿಕ್ತರು ಆಕ್ರೋಶದಿಂದ ಎರಡು ಬಸ್ಸುಗಳಿಗೆ ಹೊತ್ತಿಸಿದ ಬೆಂಕಿ ದೊಡ್ಡ ಅನಾಹುತ ಮಾಡಿದೆ.
ಕೆಪಿಎನ್ ಟ್ರಾವೆಲ್ಸ್ ಗೆ ಸೇರಿದ ತಮಿಳುನಾಡು ನೋಂದಣಿಯ ಎರಡು ಬಸ್ ಗಳಿದ್ದವು. ಅವುಗಳಿಗೆ ಉದ್ರಿಕ್ತರು ಬೆಂಕಿ ಹೊತ್ತಿಸಿದ್ದಾರೆ. ಆ ಬೆಂಕಿ ವ್ಯಾಪಿಸಿ ಮೂವತ್ತಕ್ಕೂ ಹೆಚ್ಚು ಬಸ್ ಗೆ ತಗುಲಿದೆ. ನೂರಾರು ಅಡಿ ದೂರದಿಂದಲೂ ಬಸ್ ಗಳಿಗೆ ಹಚ್ಚಿದ ಬೆಂಕಿಯ ಹೊಗೆ ವ್ಯಾಪಿಸಿರುವುದು ಕಾಣುತ್ತಿತ್ತು. [ಬೆಂಗಳೂರಿನಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ]
ನಾಯಂಡಹಳ್ಳಿ, ಹೊಸಕೆರೆಹಳ್ಳಿ, ಕತ್ತರಿಗುಪ್ಪೆ ಮತ್ತಿತರ ಕಡೆ ಉದ್ರಿಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮಂಜುನಾಥ್ ಮಾಹಿತಿ ನೀಡಿದರು. ಇದೇ ವೇಳೆ ನ್ಯೂ ಟಿಂಬರ್ ಯಾರ್ಡ್ ನಲ್ಲಿ ಎಸ್ ಅರ್ ಎಸ್ ಟ್ರಾವೆಲ್ಸ್ ನ ಬಸ್ ಗೂ ಬೆಂಕಿ ಹಚ್ಚಲಾಗಿದೆ.
ಇಬ್ಬರ ಮೇಲೆ ಪೊಲೀಸ್ ಫೈರಿಂಗ್ : ರಾಜಗೋಪಾಲನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಹೊಯ್ಸಳ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ಇಬ್ಬರ ಮೇಲೆ ಸಶಸ್ತ್ರಪಡೆ ಗುಂಡು ಹಾರಿಸಿದ್ದರಿಂದ ಇಬ್ಬರೂ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೆ ಎರಡು ಲಾರಿಗಳಿಗೆ ಬೆಂಕಿ : ನಾಯಂಡಹಳ್ಳಿ ಫ್ಲೈ ಓವರ್ ಬಳಿ ಸಂಜೆ ತಮಿಳುನಾಡು ರಿಜಿಸ್ಟ್ರೇಷನ್ ನಂಬರ್ ಇರುವ ಮತ್ತೆರಡು ಲಾರಿಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದೆ.