ಟಿಕೆಟ್ ಬೇಕೊ, ಬೇಡ್ವೊ?: ಇಬ್ಬರು ಶಾಸಕರಿಗೆ ಪರಮೇಶ್ವರ್ ತರಾಟೆ
ಬೆಂಗಳೂರು, ಫೆಬ್ರವರಿ 23: ನಗರದಲ್ಲಿ ಕಾಂಗ್ರೆಸ್ ಶಾಸಕರ ಆಪ್ತರ ದೌರ್ಜನ್ಯ ವಿಚಾರಕ್ಕೆ ಬೇಸರಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭೈರತಿ ಬಸವರಾಜು ಆಪ್ತ ನಾರಾಯಣಸ್ವಾಮಿ, ಪಾಲಿಕೆ ಕಚೇರಿಗೆ ಪೆಟ್ರೋಲ್ ಸುರಿದು ಸುದ್ದಿ ಆಗಿದ್ದರೆ, ಸೋಮಶೇಖರ್ ಆಪ್ತರು ಜಮೀನು ವಿವಾದದಲ್ಲಿ ಜಗಳ ಮಾಡಿ ಮಾಧ್ಯಮಗಳಿಗೆ ಹಾಗೂ ವಿರೋಧ ಪಕ್ಷಗಳಿಗೆ ಆಹಾರವಾಗಿದ್ದರು. ಇದಲ್ಲದೆ ಇದೇ ಸಮಯದಲ್ಲಿ ಶಾಸಕ ಹ್ಯಾರಿಸ್ ಪುತೃ ಮೊಹಮ್ಮದ್ ನಲಪಾಡ್ ಪ್ರಕರಣ ಸೇರಿ ಸರ್ಕಾರಕ್ಕೆ ಭಾರಿ ಮುಜುಗರ ಉಂಟಾಗುವಂತೆ ಆಯಿತು.
ವಿಧಾನಸಭೆ ಕಪಾದಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿ ಸರ್ಕಾರಕ್ಕೆ ಮುಜುಗರ ಉಂಟಾದ ಕಾರಣ ಪರಮೇಶ್ವರ್ ಅವರು ಇಬ್ಬರೂ ಶಾಸಕರಿಗೆ ಬೈದು ಬುದ್ಧಿ ಹೇಳಿದ್ದಾರೆ. ಹ್ಯಾರಿಸ್ ಅವರಿಗೂ ಪರಮೇಶ್ವರ್ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿಯೇ ಶಾಸಕ ಭೈರತಿ ಬಸವರಾಜುಗೆ ಕರೆ ಮಾಡಿದ್ದ ಪರಮೇಶ್ವರ್ ಅವರು 'ಕೂಡಲೇ ನಾರಾಯಣಸ್ವಾಮಿ ಪೊಲೀಸರಿಗೆ ಶರಣಾಗಬೇಕು, ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇವೆ' ಎಂದು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಹಾಗಾಗಿ ಇಂದು ಮುಂಜಾನೆ ನಾರಾಯಣಸ್ವಾಮಿ ಪೊಲೀಸರ ಮುಂದೆ ಶರಣಾಗಿದ್ದಾರೆ.
ಎಸ್.ಟಿ.ಸೋಮಶೇಖರ್ ಅವರಿಗೂ ತರಾಟೆ ತೆಗೆದುಕೊಂಡ ಪರಮೇಶ್ವರ್ ಅಣ್ಣ ತಮ್ಮಂದಿರ ಆಸ್ತಿ ವಿಚಾರದಲ್ಲಿ ನಿಮ್ಮ ಪಾತ್ರವೇನು? ನಿಮ್ಮ ಬೆಂಬಲಿಗರು ಅಲ್ಲಿಗೆ ಏಕೆ ಹೋಗ್ತಾರೆ? ಮಚ್ಚು, ಲಾಂಗ್, ಓಡುವುದು, ಟಿವಿಯಲ್ಲಿ ನೋಡಿದ್ದೇನೆ. ಇದೆಲ್ಲ ಬೇಡ. ಆಶಿಸ್ತು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
'ಚುನಾವಣೆಯ ಹೊಸ್ತಲಿನಲ್ಲಿ ಈ ರೀತಿಯ ರಂಪಾ ರಾದ್ಧಂತ ಮಾಡಬೇಡಿ ಕಾಂಗ್ರೆಸ್ ಪಕ್ಷವನ್ನು ಏನು ಮಾಡಬೇಕು ಅಂದುಕೊಂಡಿದ್ದೀರಿ? ಮುಂದೆ ಟಿಕೆಟ್ ಬೇಕು, ಪುನರಾಯ್ಕೆ ಆಗಬೇಕೆಂದ್ರೆ ಅಚ್ಚುಕಟ್ಟಾಗಿ ಕೆಲಸ ಮಾಡಿ. ದೌರ್ಜನ್ಯ, ದಾಂಧಲೆ ಮಾಡುವುದು, ಪಕ್ಷದ ವರ್ಚಿಸ್ಸಿಗೆ ಧಕ್ಲೆ ತರುವುದನ್ನು ಸಹಿಸುವುದಿಲ್ಲ' ಎಂದು ಇಬ್ಬರೂ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.