ಮೈತ್ರಿ ಸರ್ಕಾರದ ವಿರುದ್ಧ ಮಾತನಾಡಿದ್ದ ಕೈ ನಾಯಕರಿಗೆ ನೋಟಿಸ್
ಬೆಂಗಳೂರು, ಜು.23: ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದಕ್ಕೆ ಕಾಂಗ್ರೆಸ್ ಪ್ರಾದೇಶಿಕ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಮಾಜಿ ಶಾಸಕ ಕೆ.ಬಿ. ಕೋಳಿವಾಡ ಹಾಗೂ ಕೆ.ಎಸ್. ರಾಜಣ್ಣ ಅವರಿಗೆ ನೋಟಿಸ್ ನೀಡಿದೆ.
ಮುಖ್ಯಮಂತ್ರಿಗಳು ಕಣ್ಣೀರು ಹಾಕಲು ಕೆಲವು ಕಾಂಗ್ರೆಸ್ ನಾಯಕರೇ ಕಾರಣರೆಂದು ಆರೋಪಿಸಿ ಹೇಳಿಕೆಯನ್ನು ನೀಡುತ್ತಿದ್ದೀರಿ ಎಂದು ಹೇಳಿ ಕೆಬಿ ಕೋಳಿವಾಡ ಅವರಿಗೆ ನೋಟಿಸ್ ಜಾರಿ ಮಾಡಿದೆ. ಪಕ್ಷಕ್ಕೆ ಮುಜುಗರವಾಗುವಂತಹ ಈ ಎಲ್ಲಾ ಹೇಳಿಕೆಗಳನ್ನು ನೀಡಿರುವುದು ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಸಿಎಂ ಕುಮಾರಸ್ವಾಮಿಗೆ ಕಿರುಕುಳ ನೀಡುತ್ತಿರುವ ಕಾಂಗ್ರೆಸ್ ನಾಯಕರ್ಯಾರು?!
ತಮ್ಮ ಅಸಮಧಾನವನ್ನು ಸಾರ್ವಜನಿಕವಾಗಿ ಪತ್ರಿಕಗಳ ಮೂಲಕ ವ್ಯಕ್ತಪಡಿಸಿ ಪಕ್ಷದ ತತ್ವ-ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ, ಇದರಿಂದ ಪಕ್ಷದ ಗೌರವಕ್ಕೆ ಧಕ್ಕೆಯಾಗಿದೆ ಎಂದು ತಿಳಿಸಿದೆ. ಈ ನಡವಳಿಕೆಯು ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ಇನ್ನು ಮೈತ್ರಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಟೀಕೆ ಮಾಡಿ ಮೈತ್ರಿ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ ಎಂದೂ, ಜೆಡಿಎಸ್ ಪಕ್ಷ ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಹಾಗೂ ಲೋಕಸಭೆಗೆ ಹೊಂದಾಣಿಕೆ ಮಾಡಿಕೊಂಡರೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿರುವ ಕಾರಣ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರಿಗೂ ಕೆಪಿಸಿಸಿ ನೋಟಿಸ್ ಜಾರಿ ಮಾಡಿದೆ.
ಕೂಡಲೇ ಒಂದು ವಾರದೊಳಗೆ ತಮ್ಮ ಸಮಜಾಯಿಷಿಯನ್ನು ನೀಡಬೇಕು ತಪ್ಪಿದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ ಘೋರ್ಪಡೆ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.