ಟಿಪ್ಪು ನಿರ್ಮಾಣದ ಅದ್ಭುತ ಶಿಲ್ಪಕಲೆಯ ದೇವನಹಳ್ಳಿಯ ಐತಿಹಾಸಿಕ ಕೋಟೆ
ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್ ಮಾರ್ಗವಾಗಿ ಕೇವಲ 16 ಕಿ.ಮೀ ಚಲಿಸಿದರೆ ನಮಗೆ ಸಿಗುವುದೇ ಚಕ್ಕೊತ್ತ ಹಣ್ಣಿನ ಪಟ್ಟಣ ಎಂದೇ ಹೆಸರುವಾಸಿಯಾದ ದೇವನಹಳ್ಳಿ. ಮಾತ್ರವಲ್ಲ ಇಲ್ಲಿನ ಮತ್ತೊಂದು ಆಕರ್ಷಣೀಯ ಸ್ಥಳ ದೇವನಹಳ್ಳಿಯ ಐತಿಹಾಸಿಕ ಕೋಟೆ.
18 ನೇ ಶತಮಾನದ ಮೈಸೂರು ಪ್ರಾಂತ್ಯದ ಸೇನಾ ವಾಸ್ತುಶಿಲ್ಪಕ್ಕೆ ಈ ಕೋಟೆ ಉತ್ತಮ ಉದಾಹರಣೆಯಾಗಿದೆ. ಬೆಂಗಳೂರಿನಿಂದ ಸುಮಾರು 35 ಕಿ.ಮೀ ದೂರದಲ್ಲಿದೆ. ವಿಜಯನಗರ ರಾಜರ ಆಳ್ವಿಕೆಯ ಸಮಯದಲ್ಲಿ ಆವತಿಯ ಪಾಳೆಗಾರ ರಣಬೈರೇಗೌಡ ಕ್ರಿ.ಶ 1501 ರಲ್ಲಿ ದೇವನ ದೊಡ್ಡಿಯ ದೇವರಾಯನಿಂದ ಅನುಮತಿ ಪಡೆದು ಇಲ್ಲಿ ಕೋಟೆಯನ್ನು ಆಮೆಯಾಕೃತಿಯಲ್ಲಿ ನಿರ್ಮಿಸಿದನು ಎನ್ನುತ್ತದೆ ಇತಿಹಾಸ.
ಕ್ಷೇತ್ರ ಪರಿಚಯ : ತುಂಡು ಭೂಮಿಗಿಲ್ಲಿ ಬಂಗಾರದ ಬೆಲೆ!
ಆಂಧ್ರ ಪ್ರದೇಶದಿಂದ ಶಿಲ್ಪಶಾಸ್ತ್ರ ತಜ್ಞರನ್ನು ಕರೆಸಿ ಕೋಟೆಯನ್ನು ನಿರ್ಮಿಸಿರುವ ಮಾಹಿತಿ ಸಿಗುತ್ತದೆ. ಇಂದಿಗೂ ಕೋಟೆ ನಿರ್ಮಾಣ ಮಾಡಲು ಬಂದ ವಂಶಸ್ಥರು ದೇವನಹಳ್ಳಿ ಪಟ್ಟಣದಲ್ಲಿ ಶಿಲ್ಪಕಲಾಶಾಲೆ ನಡೆಸುತ್ತಿದ್ದಾರೆ.
ಬಾಯಿ ರುಚಿ ತಣಿಸುವ ವಿಜಯಪುರದ ನಾಣಿ ಹೋಟೆಲ್ ನ ತಿಂಡಿ ಮಜಬೂತು
ಕೋಟೆ ಕ್ರಿ.ಶ 1747 ರಲ್ಲಿ ಮೈಸೂರಿನ ಒಡೆಯರ ಅಧೀನಕ್ಕೆ ಬಂದಿತು. ಇದನ್ನು ಮರಾಠರು ಹಲವು ಬಾರಿ ಗೆದ್ದುಕೊಂಡಿದ್ದರು. ನಂತರ ಇದು ಹೈದರಾಲಿ ಮತ್ತು ಟಿಪ್ಪುವಿನ ವಶವಾಯಿತು. ಈಗಿರುವ ಕೋಟೆಯು ಹೈದರಾಲಿ ಮತ್ತು ಟಿಪ್ಪುವಿಗೆ ಸೇರಿದುದೆಂದು ಹೇಳಲಾಗುತ್ತದೆ. ಇದು ಟಿಪ್ಪುವಿನ ಅಚ್ಚುಮೆಚ್ಚಿನ ಬೇಟೆಯಾಡುವ ಪ್ರದೇಶ. ಟಿಪ್ಪುವಿನ ಜನ್ಮಸ್ಥಳವೂ ಇದೆ.
ಈ ಕೋಟೆಯ ವಿಶೇಷ
ವಿರೋಧಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಕೋಟೆಯನ್ನು ನಿರ್ಮಿಸಲಾಗಿದೆ. ಸ್ಥೂಲವಾಗಿ ಮತ್ತು ಅಂಡಾಕಾರವಾಗಿ ಪೂರ್ವಾಭಿಮುಖವಾಗಿರುವ ಈ ಕೋಟೆಯ ಕೆತ್ತನೆಗೊಳಿಸಿರುವ ಕಲ್ಲುಗಳಿಂದ ಹೊರ ಹೊದಿಕೆಯನ್ನು ಹೊಂದಿದೆ. ಸಮಾಂತರದಲ್ಲಿರುವ 12 ಅರ್ಧ ವೃತ್ತಾಕಾರದ ಬುರುಜಗಳನ್ನು ಹೊಂದಿದೆ. ಕೋಟೆಯ ಮೇಲೆ ಒಳಭಾಗದ ಕಡೆ ಕಂಡಿಗಳುಳ್ಳ ಕೈಪಿಡಿ ಗೋಡೆಯನ್ನು ಅಳವಡಿಸಲಾಗಿದೆ.
ಫಿರಂಗಿ ದಾಳಿ ತಡೆಯುತ್ತದೆ
ಕೋಟೆ 18 ನೇ ಶತಮಾನದ ಮೈಸೂರು ಪ್ರಾಂತ್ಯದ ಸೇನಾ ವಾಸ್ತು ಶಿಲ್ಪಕ್ಕೆ ಒಳ್ಳೆಯ ಉದಾಹರಣೆ. ಕೋಟೆಯಲ್ಲಿ ದಪ್ಪವಾದ ಜಲ್ಲಿ ಹಾಗೂ ಕಲ್ಲಿನ ಕೆಲಸದ ಗೋಡೆಗಳನ್ನು ಫಿರಂಗಿಯು ಬೆಂಕಿಯನ್ನು ತಡೆಯುವುದಕ್ಕಾಗಿಯೇ ನಿರ್ಮಿಸಲಾಗಿದೆ. ಕೋಟೆಯ ಸುತ್ತಲು ಕಂದಕವೂ ಹಾಗೆಯೇ ಬೇಕಾದಾಗ ತೆಗೆದು ಹಾಕಬಹುದಾದ ಸೇತುವೆಯೂ ಇತ್ತು. ತೆಗೆದು ಹಾಕಬಹುದಾದ ಸೇತುವೆಯನ್ನು ಎಳೆಯಲು ಬಳಸುವ ರಾಟೆಯನ್ನು ಕೋಟೆಯ ಮಹಾದ್ವಾರದ ಮೇಲೆ ನಾವು ನೋಡಬಹುದಿತ್ತು. ಆದರೆ, ಈಗ ಅದು ಕಾಣಸಿಗುವುದಿಲ್ಲ. ಕಂದಕದ ಮೇಲಿನ ಗೋಡೆಯ ಹಿಂದೆ ಕಾಲಾಳುಗಳು ನಿಂತು ಗುಂಡು ಹಾರಿಸಲು ಹಾಗೂ ಮದ್ದು ಗುಂಡುಗಳನ್ನು ಬಂದೂಕಿಗೆ ತುಂಬಲು ಸಹಾಯವಾಗುವ ಕಟ್ಟೆ ಇದೆ.
ಕೆಆರ್ಎಸ್ಗೂ ದೇವನಹಳ್ಳಿ ಕೋಟೆಗೂ ಸಾಮ್ಯತೆ
ಶ್ರೀರಂಗಪಟ್ಟಣದ ಕೃಷ್ಣರಾಜ ಸಾಗರ ಅಣೆಕಟ್ಟೆಗೂ ದೇವನಹಳ್ಳಿ ಕೋಟೆಗೆ ಸಾಮ್ಯತೆಯಿದೆ. ಎರಡು ಸ್ಥಳಗಳಲ್ಲೂ ಇಟ್ಟಿಗೆಯ ಪುಡಿ ಹಾಗೂ ಸುಣ್ಣದಿಂದ ಮಾಡಿದ ಸುರ್ಕಿಯನ್ನು ಬಳಸಲಾಗಿದೆ. ಕೋಟೆಯಲ್ಲಿ ಈ ಸಾಂಪ್ರದಾಯಿಕ ವಿಧಾನವನ್ನು ನೀರು ಇಳಿಯುವ ಸ್ಥಳಗಳಲ್ಲಿ ಬಳಸಲಾಗಿದೆ. ದಿಡ್ಡಿ ಗೋಡೆಯ ಒಳಭಾಗ ಹಾಗೂ ಪ್ರಾಕಾರದ ನೆಲಗಳಲ್ಲಿ ಇದರ ಅಂಶವಿದೆ. ಆದರೆ ಕೆಆರ್ಎಸ್ ಅಣೆಕಟ್ಟು ಸಂಪೂರ್ಣವಾಗಿ ಸುರ್ಕಿಯಿಂದಲೇ ಮಾಡಲ್ಪಟ್ಟಿದೆ.
ಬ್ರಿಟಿಷರ ವಶಕ್ಕೆ
ಕ್ರಿ.ಶ. 1791 ರಲ್ಲಿ ಬ್ರಿಟಿಷ್ ಸೈನ್ಯ ಟಿಪ್ಪು ಸುಲ್ತಾನನಿಂದ ಬೆಂಗಳೂರು ಕೋಟೆಯನ್ನು ವಶಪಡಿಸಿಕೊಂಡಾಗ ದೇವನಹಳ್ಳಿಯ ಸೈನಿಕರು ಹೆದರಿ ಕೋಟೆಯಿಂದ ಓಡಿ ಹೋದರು. ಬ್ರಿಟಿಷರು ಒಂದು ವಾರದ ನಂತರ ದೇವನಹಳ್ಳಿಗೆ ಬಂದಾಗ ಯುದ್ದವೇ ಇಲ್ಲದೆ ಈ ಕೋಟೆ ಅವರ ವಶವಾಯಿತು.
ಸೊರಗುತ್ತಿದೆ ಕೋಟೆ
ಐತಿಹಾಸ ಪ್ರಸಿದ್ಧ ದೇವನಹಳ್ಳಿ ಕೋಟೆ ಮೇಲೆ ನೆಪ ಮಾತ್ರಕ್ಕೆ ಒಂದೆರಡು ನಾಮಫಲಕಗಳು ಮತ್ತು ಮಾಹಿತಿ ಫಲಕಗಳು ಇವೆ. ಆದರೆ, ಅಪರೂಪದ ವಾಸ್ತುಶಿಲ್ಪವನ್ನು ಉಳಿಸುವಂತಹ ಕೆಲಸಕ್ಕೆ ಮುಂದಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೋಟೆಯನ್ನು ಮುಂದಿನ ಪೀಳಿಗೆಗೆ ಉಳಿಸುವಂತೆ ಅಭಿವೃದ್ಧಿ ಮಾಡಬೇಕದೆ.