ಸುದೀಪ್ ದಂಪತಿಗೆ ಅಂತಿಮ ಎಚ್ಚರಿಕೆ ನೀಡಿದ ಫ್ಯಾಮಿಲಿ ಕೋರ್ಟ್
ಬೆಂಗಳೂರು, ಜೂನ್ 15: ನಟ ಕಿಚ್ಚ ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ವಿರುದ್ಧ ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶರು ಮತ್ತೊಮ್ಮೆ ಗರಂ ಆಗಿದ್ದಾರೆ.
'ದಂಪತಿ ರಾಜಿ ಆಗಿದ್ರೆ ಅರ್ಜಿ ಹಿಂಪಡೆಯಿರಿ, ಕೋರ್ಟ್ ಸಮಯ ಏಕೆ ವ್ಯರ್ಥ ಮಾಡ್ತೀರಿ, ಆಗಸ್ಟ್ 24ರಂದು ಇಬ್ಬರು (ಕಿಚ್ಚ ಸುದೀಪ್ ಹಾಗೂ ಪ್ರಿಯಾ ರಾಧಾಕೃಷ್ಣನ್) ಎಲ್ಲೇ ಇದ್ದರೂ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಬೇಕು' ಎಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶರು ಬುಧವಾರ (ಜೂನ್ 14) ದಂದು ಆದೇಶಿಸಿದ್ದಾರೆ.
ಕೋರ್ಟ್ ಸಮಯ ವ್ಯರ್ಥ: ಕಿಚ್ಚ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಸುದೀಪ್, ಪತ್ನಿ ಪ್ರಿಯಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರುವ ಸುದ್ದಿ 2015ರಷ್ಟು ಹಳೆಯದು. ಸದ್ಯದ ಮಾಹಿತಿಯಂತೆ ಇಬ್ಬರು ಬೇರೆ ಬೇರೆ ಇದ್ದರೂ ಪರಸ್ಪರ ಚೆನ್ನಾಗಿದ್ದಾರೆ.
ಡಿವೋರ್ಸಿಗೆ ಅಸಲಿ ಕಾರಣವೇನು?
ಡಿವೋರ್ಸ್ ಪಡೆಯುವುದಕ್ಕೆ ಅಸಲಿ ಕಾರಣ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಒಟ್ಟಿಗೆ ಇರಲು ಮಾತ್ರ ಮಗಳು ಸಾನ್ವಿ ಮಾತ್ರ ಕಾರಣ ಎಂಬುದು ಎಲ್ಲರಿಗೂ ತಿಳಿದಿದೆ. ಇಬ್ಬರ ನಡುವೆ ರಾಜಿ ಸಂಧಾನವಾಗಿದೆ. ಮಗಳಿಗಾಗಿ ಇಬ್ಬರು ಒಟ್ಟಿಗೆ ವಾಸಿಸಲು ಅಥವಾ ವಿಚ್ಛೇದನ ಪಡೆಯದೆ ಬೇರೆ ಬೇರೆ ವಾಸಿಸಿ ಮಗಳನ್ನು ಪೋಷಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಇದಕ್ಕೆಲ್ಲ ಕಾನೂನಿನ ಮುದ್ರೆ ಬಿದ್ದಿಲ್ಲ.
2015ರಿಂದ ನಡೆದಿರುವ ಕೇಸ್
2015ರ ಸೆಪ್ಟೆಂಬರ್ ನಲ್ಲಿ ವಿವಾಹ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ದಂಪತಿ ಅರ್ಜಿ ಹಾಕಿದರು. ಅರ್ಜಿ ವಿಚಾರಣೆ ಆರಂಭವಾಗಿ ಜೂನ್ 14, 2017ರ ತನಕ ಮುಂದುವರೆದಿದೆ. ಆದರೆ, ನಟ ಸುದೀಪ್ ಹಾಗೂ ಪ್ರಿಯಾ ಅವರು ಕೋರ್ಟಿಗೆ ಇಲ್ಲಿ ತನಕ ಹಾಜರಾಗಿಲ್ಲ. ಸತತವಾಗಿ 9 ಸಲ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಕೋರ್ಟ್ ಆದೇಶ ನೀಡಿದರೂ, ದಂಪತಿ ವಿಚಾರಣೆಗೆ ಹಾಜರಾಗದ ಕಾರಣ ಆಗಸ್ಟ್ 24 ರೊಳಗೆ ಹಾಜರಾಗುವಂತೆ ಅಂತಿಮ ಗಡುವು ನೀಡಲಾಗಿದೆ
ಸರಣಿ ಟ್ವೀಟ್ ಮಾಡಿದ್ದ ಸುದೀಪ್
ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದಾಗ ಸರಣಿ ಟ್ವೀಟ್ ಮಾಡಿದ್ದ ಸುದೀಪ್ ಅವರು ನಂತರ ಈ ಬಗ್ಗೆ ಹೆಚ್ಚು ಮಾತನಾಡಿಲ್ಲ. ಪತ್ನಿ ಪ್ರಿಯಾಗೆ ಅನ್ಯಾಯವಾಗಿದೆ ಎಂದು ಒಮ್ಮೆ ಹೇಳಿದ್ದು ಬಿಟ್ಟರೆ, ಇದು ನನ್ನ ವೈಯಕ್ತಿಕ ವಿಚಾರ ಮಾಧ್ಯಮಗಳು, ಅಭಿಮಾನಿಗಳು, ಸಾರ್ವಜನಿಕರು ನನ್ನ ಖಾಸಗಿತನಕ್ಕೆ ಬೆಲೆ ನೀಡುವ ಭರವಸೆ ಇದೆ ಎಂದಿದ್ದರು.
ಸುದೀಪ್ ಗೈರು ಹಾಜರಿ ಏಕೆ?
ಕೌಟುಂಬಿಕ ನ್ಯಾಯಾಲಯಕ್ಕೆ ಸುದೀಪ್ ಪರವಾಗಿ ಅವರ ಸಹೋದರಿ ಕೆಲವೊಮ್ಮೆ ಹಾಜರಾಗಿದ್ದರು. ಸುದೀಪ್ ದಂಪತಿ ಕಾರಣಾಂತರದಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ, ಅವರು ಅನ್ಯೋನ್ಯವಾಗಿದ್ದಾರೆ. ಇದೇ ಕಾರಣಕ್ಕೆ ವಿಚಾರಣೆಗೆ ಗೈರು ಹಾಜರಾಗಿದ್ದಾರೆ ಎಂದು ಹೇಳಿದ್ದಾರೆ.