ನ.27ಕ್ಕೆ ಕೆಜಿ ಕೃಪಾಲ್ ಷೇರು ಸಂಪತ್ತು ಪುಸ್ತಕ ಬಿಡುಗಡೆ
ಬೆಂಗಳೂರು, ನವೆಂಬರ್ 25: ಷೇರು ಪೇಟೆ ತಜ್ಞರು ಹಾಗೂ ಅಂಕಣಕಾರರಾದ ಕೆ.ಜಿ.ಕೃಪಾಲ್ ಅವರ ಹೊಸ ಪುಸ್ತಕ 'ಷೇರು ಸಂಪತ್ತು' ನವೆಂಬರ್ 27ರಂದು ಬಿಡುಗಡೆ ಆಗಲಿದೆ. ಬೆಂಗಳೂರಿನ ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಬಳಿಯಿರುವ ಸಹ್ಯಾದ್ರಿ ಸಭಾಂಗಣ, ರೀಜನಲ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಅಂದು ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ.
ಸ್ನೇಹ ಬುಕ್ ಹೌಸ್ ನಿಂದ ಈ ಪುಸ್ತಕ ಹೊರಬರುತ್ತಿದ್ದು, ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ-ಗೋವಾದ ಪ್ರಿನ್ಸಿಪಾಲ್ ಚೀಫ್ ಕಮಿಷನರ್ ಆಫ್ ಇನ್ ಕಂಟ್ಯಾಕ್ಸ್ ಆದ ನೂತನ್ ಒಡೆಯರ್ ಪುಸ್ತಕ ಬಿಡುಗಡೆ ಮಾಡುವರು.
ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಸೀನಿಯರ್ ಜನರಲ್ ಮ್ಯಾನೇಜರ್ ಸಿ.ವಾಸುದೇವನ್, ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಚೆನ್ನೈ ರೀಜನಲ್ ಮ್ಯಾನೇಜರ್ ವಿಷ್ಣುವರ್ಧನ್ ಹಾಗೂ ಲೇಖಕರಾದ ಕೆ.ಜಿ,ಕೃಪಾಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಲೇಖಕಿ ಹಾಗೂ ಮಾಧ್ಯಮ ತಜ್ಞೆ ಸುಧಾಶರ್ಮ ಚವತಿ ಕೃತಿಯ ಪರಿಚಯ ಮಾಡುತ್ತಾರೆ.
ಆ ಪುಸ್ತಕದಲ್ಲಿ ಷೇರು ಪೇಟೆಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ, ಈಗಾಗಲೇ ಹೂಡಿಕೆ ಮಾಡಿರುವವರಿಗೆ ಉಪಯುಕ್ತವಾದ ಮಾಹಿತಿಗಳು ಖಂಡಿತ ದೊರೆಯುತ್ತವೆ ಎಂದು ಭರವಸೆ ನೀಡುತ್ತಾರೆ ಕೆ.ಜಿ.ಕೃಪಾಲ್. ಪುಸ್ತಕದಿಂದ ಆಯ್ದ ಸಣ್ಣ ಭಾಗವೊಂದನ್ನು ಒನ್ ಇಂಡಿಯಾದಲ್ಲಿ ಪ್ರಕಟಿಸಲು ನೀಡಿದ್ದಾರೆ. ಕೃಪಾಲ್ ಸಂಪರ್ಕ ಸಂಖ್ಯೆ- 9886313380.
ಪೇಟೆಗೆ ತೇಲಿ ಬರುವ ವಿವಿಧ ವಿಶ್ಲೇಷಣೆಗಳು ಹೇಗೆ ಪ್ರಭಾವಿಯಾಗುತ್ತದೆ ಎಂಬುದಕ್ಕೆ ಕೋಲ್ ಇಂಡಿಯಾ ಲಿಮಿಟೆಡ್ ಕಂಪನಿಯ ಆರಂಭಿಕ ಷೇರು ವಿತರಣೆಯ ಸಂದರ್ಭದಲ್ಲಿ ವಿವಿಧ ಬ್ರೋಕಿಂಗ್ ಕಂಪನಿಗಳು ನೀಡಿದ 'ನಿರೀಕ್ಷಿತ ಪೇಟೆಯ ಬೆಲೆ' ಉತ್ತಮ ಉದಾಹರಣೆಯಾಗಬಹುದು.
2011ರ ಅಕ್ಟೋಬರ್ ನಲ್ಲಿ ಪ್ರತಿ ಷೇರಿಗೆ ರೂ.245 ರಂತೆ ಸಾರ್ವಜನಿಕ ವಿತರಣೆ ಮಾಡಿದ ಕೋಲ್ ಇಂಡಿಯಾ ಷೇರು ಆರಂಭದ ದಿನ ಯಾವ ದರದಲ್ಲಿರಬಹುದೆಂದು ವಿವಿಧ ಸ್ಥಳೀಯ ಮತ್ತು ವಿದೇಶಿ ಬ್ರೋಕಿಂಗ್ ಸಂಸ್ಥೆಗಳು ವೈವಿಧ್ಯಮಯ ದರಗಳನ್ನು ರೂ.286 ರಿಂದ ರೂ.346 ರವರೆಗೂ ನೀಡಿವೆ.
ಆದರೆ, ವಾಸ್ತವವಾಗಿ ರೂ.287.45 ರಿಂದ ರೂ.344.75 ರವರೆಗೂ ಏರಿಳಿತ ಪ್ರದರ್ಶಿಸಿದ ಕಾರಣ ಎಲ್ಲಾ ಸಂಸ್ಥೆಗಳ ಭವಿಷ್ಯವಾಣಿಯು ಸರಿಯಾಗಿತ್ತು ಎಂಬುದು. ಆದರೆ ಅಂದು ಚಟುವಟಿಕೆ ನಡೆಸಿದವರು ಎಲ್ಲರೂ ಹಣ ಗಳಿಸಿರಲಿಕ್ಕಾಗದು. ಕೆಲವರು ಅವಕಾಶದ ಲಾಭ ಪಡೆದುಕೊಂಡರೆ ಕೆಲವರು ಊಹಿಕೆ ಚಟುವಟಿಕೆಯಿಂದ ಹಾನಿಗೊಳಗಾಗುವರು.
ವಿಶ್ಲೇಷಣೆಯೇ ಬೇರೆ, ಚಟುವಟಿಕೆಯೇ ಬೇರೆ. ಕೇವಲ ವಿಶ್ಲೇಷಣೆಯನ್ನಾಧರಿಸಿ ನಿರ್ಧರಿಸುವುದಕ್ಕಿಂತ ವಾಸ್ತವ ಸ್ಥಿತಿಯನ್ನು ಅರಿತು ನಿರ್ಧರಿಸುವುದು ಲಾಭಕರವಾಗಬಹುದು.