ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ 2 ತಿಂಗಳು ಮುಂದಕ್ಕೆ
ಬೆಂಗಳೂರು, ಮಾರ್ಚ್ 28: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ 5 ಸಾವಿರ ನಿವೇಶನ ಹಂಚಿಕೆ ಪ್ರಕ್ರಿಯೆ ಮತ್ತೆ ಎರಡು ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಸದ್ಯಕ್ಕೆ ಸೈಟ್ ಹಂಚಿಕೆಗೆ ಅನುಮತಿ ಸಿಗುವುದು ಅನುಮಾನವಿದೆ. ಹೀಗಾಗಿ ಬಿಡಿಎ ನಡೆಸಿದ್ದ ಸಿದ್ಧತೆಗೆ ತಡೆ ಬಿದ್ದಿದೆ. ಸರ್ಕಾರದ ಯಾವುದೇ ಸವಲತ್ತು ನಾಗಕರಿಕರಿಗೆ ನೀಡುವಂತಿದ್ದರೆ ಅದು ನೀತಿ ಸಂಹಿತೆ ಅಡಿ ಬರುತ್ತದೆ.
ಕೆಂಪೇಗೌಡ ಬಡಾವಣೆ ಸೈಟ್: ವಿಕಲಚೇತನರಿಗೆ ಕೋಟಾ ಹೆಚ್ಚಳ
ನಿವೇಶನ ವಿತರಣೆ ಚುನಾವಣೆ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ. ಮತದಾರರನ್ನು ಸೆಳೆಯುವ ಕಸರತ್ತಿಗೆ ಅವಕಾಶ ಮಾಡಿಕೊಡಲಿದೆ. ಈ ಕುರಿತು ಮಮಗಳವಾರ ಬಿಡಿಎ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದು ಚುನಾವಣೆ ಆಯೋಗದ ಮೊರೆ ಹೋಗಲು ನಿರ್ಧರಿಸಿದೆ.
ಈಗಾಗಲೇ ಎರಡನೇ ಹಂತಕ್ಕೆ ಅರ್ಜಿ ಆಹ್ವಾನಿಸಿ ಅವುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಸಂಹಿತೆ ವ್ಯಾಪ್ತಿಗೆ ಬಾರದು ಎಂಬ ಮಾತುಗಳು ಕೇಳಿಬರುತ್ತಿದೆ. ಹಳೆಯ ಅಧಿಸೂಚನೆ ಆಗಿರುವ ಕಾರಣ ಪ್ರಕ್ರಿಯೆ ಮುಂದುವರೆಸಬಹುದೆಂದು ಸಲಹೆ ವ್ಯಕ್ತವಾಗಿದ್ದು, ಆಯೋಗದ ಸ್ಪಷ್ಟನೆ ಕೋರುವ ಇಂಗಿತ ವ್ಯಕ್ತವಾಗಿದೆ.