ಕೆಂಪೇಗೌಡ ಲೇಔಟ್: ಠೇವಣಿದಾರರಿಗೆ ಅ.1ರಿಂದ ಹಣ ವಾಪಸ್
ಬೆಂಗಳೂರು, ಸೆ.28: ಕೆಂಪೇಗೌಡ ಬಡಾವಣೆಯಲ್ಲಿ ಈಗಾಗಲೇ ಎರಡನೇ ಹಂತದ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ. ಠೇವಣಿ ನೀಡಿ ನಿವೇಶನ ದೊರೆಯದಿರುವವರಿಗೆ ಅ.1 ರಿಂದ ಠೇವಣಿ ವಾಪಸ್ ನೀಡಲಾಗುತ್ತದೆ.
ಹಣ ಹಿಂದಿರುಗಿಸಬೇಕಾದವರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಅರ್ಜಿಗಳೊಂದಿಗೆ ತಾಳೆ ಹಾಕಿದ ಬಳಿಕ ಹಣ ಪಾವತಿಸುವಂತೆ ಆರ್ಥಿಕ ವಿಭಾಗದ ಮುಖ್ಯಸ್ಥರು, ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದ ಪಟ್ಟಿ ಪರಾಮರ್ಶಿಸಿ ಮುಂದುವರೆಯಲು ನಿರ್ದೇಶಿಸಲಾಗಿದೆ.
ಕೆಂಪೇಗೌಡ ಬಡಾವಣೆ: 5 ಸಾವಿರ ಜನರಿಗೆ ಹೊಡೆಯಿತು 'ಲಾಟರಿ'!
ಠೇವಣಿ ವಾಪಸ್ ನೀಡುವ ಪ್ರಕ್ರಿಯೆ ಮೇಲೆ ನಿಗಾ ಇಡಲು ಐದು ತಂಡಗಳನ್ನು ರಚಿಸಲಾಗಿದೆ. ಮೇಲ್ವಿಚಾರಕರ ನಿಗಾದಲ್ಲಿ ಸೈಟು ಪಡೆದವರು ಹಾಗೂ ಪಡೆಯದವರ ಪಟ್ಟಿಯನ್ನು ಪರಿಶೀಲಿಸಲಾಗುತ್ತದೆ. ನಿವೇಶನ ಕೋರಿ 15,220 ಅರ್ಜಿಗಳು ಸ್ವೀಕೃತವಾಗಿತ್ತು, ಆ ಪೈಕಿ 4970 ಜನರಿಗೆ ಠೇವಣಿ ಹಣವನ್ನು ಅಕ್ಟೋಬರ್ ತಿಂಗಳೊಳಗೆ ಹಿಂದಿರುಗಿಸಲು ಪ್ರಾಧಿಕಾರ ನಿರ್ಧರಿಸಿದೆ.
ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ
ಕಳೆದ ಬಾರಿ ಠೇವಣಿ ವಾಪಸ್ ಮಾಡುವ ವೇಳೆ ಗೊಂದಲಗಳು ಸೃಷ್ಟಿಯಾಗಿದ್ದವು, ಕೆಲವರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರೂ, ಹಣ ಅರ್ಜಿದಾರರ ಕೈ ಸೇರಿರಲಿಲ್ಲ. ಬ್ಯಾಂಕ್ ಗಳ ಐಎಫ್ ಎಸ್ ಸಿ ಕೋಟ್ ಸಂಖ್ಯೆ ತಾಳೆಯಾಗದೆ ಹಣ ವಾಪಸ್ ಬಿಡಿಎಗೆ ಬಂದಿತ್ತು. ಈ ಬಾರಿ ಇಂಥದ್ದೇ ಘಟನೆಗಳು ನಡೆಯದ ಹಾಗೆ ಮುನ್ನೆಚ್ಚರಿಕೆ ವಹಿಸಲು ಬಿಡಿಎ ಮುಂದಾಗಿದೆ.