'ನಮ್ಮ ಮೆಟ್ರೋ'ದ ಕನ್ನಡೇತರ ಉದ್ಯೋಗಿಗಳು ಕೆಲಸ ಕಳೆದುಕೊಳ್ತಾರಾ?
ಬೆಂಗಳೂರು, ಜುಲೈ 28: 'ನಮ್ಮ ಮೆಟ್ರೋ' ದಲ್ಲಿ ಕನ್ನಡೇತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರಾ? ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆಯ ಕುರಿತು ಎದ್ದಿದ್ದ ವಿವಾದವೇನೋ ಸದ್ಯಕ್ಕೆ ತಣ್ಣಗಾಗಿದೆ. ಆದರೆ ಇದೀಗ ಹೊಸ ವಿವಾದವೊಂದು ಹುಟ್ಟಿಕೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.
ಜುಲೈ 25 ರಂದು ಬಿಎಂಆರ್ ಸಿಎಲ್(ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಲಿಮಿಟೆಡ್) ಕಚೇರಿಗೆ ಭೇಟಿ ನೀಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ(ಕೆಡಿಎ)ದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರು, ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು.
ಕನ್ನಡಿಗರ ಹೋರಾಟಕ್ಕೆ ಜಯ: ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಕತ್ತರಿ!
ಈ ಸಂದರ್ಭದಲ್ಲಿ ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆಯನ್ನು ನಿಲ್ಲಿಸುವುದಾಗಿ ಖರೋಲ ಭರವಸೆ ನೀಡಿದ್ದರು. ಆದರೆ ಇದೇ ಸಂದರ್ಭದಲ್ಲಿ ನಮ್ಮ ಮೆಟ್ರೋದಲ್ಲಿ ಕೆಲಸ ಮಾಡುವ ಬಹುತೇಕ ಸಿಬ್ಬಂದಿಗಳಿಗೆ ಕನ್ನಡ ಬರುವುದಿಲ್ಲ ಎಂಬುದನ್ನು ಮನಗಂಡ ಎಸ್.ಜಿ.ಸಿದ್ದರಾಮಯ್ಯ ಅವರು, ಕನ್ನಡೇತರ ಇಂಜಿನಿಯರ್ ಗಳನ್ನು ನಮ್ಮ ಮೆಟ್ರೋದ ಉದ್ಯೋಗದಿಂದ ಮುಕ್ತಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
'ನಮ್ಮ ಮೆಟ್ರೋ'ದಲ್ಲಿ ಹಿಂದಿ ಬಳಕೆ ನಿರ್ಧಾರ ಸರ್ಕಾರದ್ದಲ್ಲವೇ ಅಲ್ಲ!
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಮಯ್ಯ ಅವರಿಗೆ ಕೆಡಿಎ ಅಧ್ಯಕ್ಷ ಸಿದ್ದರಾಮಯ್ಯ ಅವರು ಪತ್ರ ಸಹ ಬರೆದಿದ್ದಾರೆ. ಸರೋಜಿನಿ ಮಹಿಷಿ ವರದಿಯ ಪ್ರಕಾರ ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದಿದೆ. ಆದರೆ ಇದನ್ನು ಕರ್ನಾಟಕದ ಸರ್ಕಾರಿ ಸಂಸ್ಥೆಗಳೇ ಪಾಳಿಸುತ್ತಿಲ್ಲ ಎಂಬುದು ಹಲವರ ವಿಷಾದದ ಮಾತು.
ಸರೋಜಿನಿ ಮಹಿಷಿ ವರದಿ ಎಲ್ಲಿಹೋಯ್ತು?
1986 ರ ಸರೋಜಿನ ಮಹಿಷಿ ವರದಿಯ ಶಿಫಾರಸ್ಸಿನಂತೆ ಕರ್ನಾಟಕದ ಸಾರ್ವಜನಿಕ ಇಲಾಖೆ ಮತ್ತು ಕೇಂದ್ರ ಸರ್ಕಾರದ ಕೆಲ ಇಲಾಖೆಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು. ಆದರೆ ಯಾರೂ ಇದನ್ನು ಪಾಲಿಸುತ್ತಿಲ್ಲ!
ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ಏಕಿಲ್ಲ?
ದೇಶದಲ್ಲಲೇ ಅತ್ಯಂತ ಹೆಚ್ಚು ಇಂಜಿನಿಯರಿಂಗ್ ಕಾಲೇಜ್ ಗಳು ಕರ್ನಾಟಕದಲ್ಲಿವೆ. ಹೀಗಿರುವಾಗ ಕನ್ನಡದ ಸ್ಥಳೀಯ ಪ್ರತಿಭೆಗಳನ್ನೇ ಏಕೆ ಕೆಲಸಕ್ಕೆ ತೆಗೆದುಕೊಳ್ಳಬಾರದು ಎಂದು ಎಸ್.ಜಿ.ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಕನ್ನಡಿಗರಿಗೆ ಅನ್ಯಾಯ
ಕಳೆದ ಒಂದು-ಒಂದೂವರೆ ತಿಂಗಳಿನಿಂದ ನಮ್ಮ ಮೆಟ್ರೋದಲ್ಲಿ ಹಿಂದಿ ಸೈನ್ ಬೋರ್ಡ್ ಬಳಸುವ ಕುರಿತು ವಿವಾದವೆದ್ದಿತ್ತು. ತನ್ನಿಮಿತ್ತ ಅರಿವು ಮೂಡಿಸಿ, ಹಿಂದಿ ಹೇರಿಕೆಯನ್ನು ತಡೆಯುವುದಕ್ಕಾಗಿ ಆನ್ ಲೈನ್ ಅಭಿಯಾನಗಳೂ ನಡೆದಿದ್ದವು. ಕನ್ನಡಪರ ಹೋರಾಟಗಾರರು ಹಲವು ಮೆಟ್ರೋ ನಿಲ್ದಾಣಗಳಲ್ಲಿನ ಹಿಂದಿ ಸೈನ್ ಬೋರ್ಡ್ ಗಳಿಗೆ ಮಸಿ ಬಳಿಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಪ್ರದೀಪ್ ಸಿಂಗ್ ಖರೋಲ ಅವರ ಭರವಸೆಯ ನಂತರ ಸುಮ್ಮನಾಗಿದ್ದರು. ಆದರೆ ಇದೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಎತ್ತಿರುವ ಹೊಸ ಪ್ರಶ್ನೆ ಕರ್ನಾಟಕದಲ್ಲಿ ಕನ್ನಡಿಗರಿಗಾಗುತ್ತಿರುವ ಅನ್ಯಾಯಕ್ಕೆ ಹಿಡಿದ ಕನ್ನಡಿ ಎನ್ನಿಸಿದೆ.
ಕನ್ನಡದ ನೆಲದಲ್ಲೇ ಕನ್ನಡಿಗರಿಗೆ ಬೆಲೆಯಿಲ್ಲ!
ನಾವು ಉದಾರಿಗಳು ಎನ್ನುತ್ತಲೇ ದೇಶದ ವಿವಿಧ ಭಾಗದ ಜನರನ್ನು ಭರಮಾಡಿಕೊಂಡು, ಬೆಂಗಳೂರಿನಲ್ಲಿ ನೆಲೆಸುವುದಕ್ಕೆ ಅನುವು ಮಾಡಿಕೊಟ್ಟ ಕನ್ನಡಿಗರೇ ಇಂದು ಕನ್ನಡದ ನೆಲದಲ್ಲಿ ಅಪರಿಚಿತರಾಗುವ, ನಿರುದ್ಯೋಗಿಗಳಾಗುವ ಪರಿಸ್ಥಿತಿ ಬಂದಿರುವುದು ದುರಂತ. ಬೇರೆ ಭಾಷಿಕ ಜನಾಂಗದೊಂದಿಗೆ ಸೌಹಾರ್ದದಿಂದಿರುವುದು, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವುದು ಎಷ್ಟು ಮುಖ್ಯವೂ ನಮ್ಮ ಅಸ್ಮಿತೆಯನ್ನು ಕಾಯ್ದುಕೊಳ್ಳುವುದು ಮತ್ತು ಕನ್ನಡವನ್ನು ಉಳಿಸಿ, ಬೆಳೆಸುವುದೂ ಅಷ್ಟೇ ಮುಖ್ಯ ಎಂಬುದು ಕನ್ನಡ ಪರ ಹೋರಾಟಗಾರರ ಕಾಳಜಿಯ ಮಾತು.