ಮಾಟ-ಮಂತ್ರಕ್ಕೆ ಬ್ರೇಕ್ ಹಾಕಲಿದೆ ಸರ್ಕಾರ!
ಸೋಮವಾರ ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ಮಹಾರಾಷ್ಟ್ರದಲ್ಲಿ ಜಾರಿಗೆ ತಂದಂತೆ, ಮಾಟ, ಮಂತ್ರ ಹಾಗೂ ಭೂತ ಬಿಡಿಸುವ ಹೆಸರಿನಲ್ಲಿ ಜನರಿಗೆ ವಂಚಿಸುವುದಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ರಚಿಸಲಾಗುವುದು ಎಂದರು.
ಅಜ್ಞಾನ ಮತ್ತು ಅನಕ್ಷರತೆಯನ್ನು ಬಂಡವಾಳ ಮಾಡಿಕೊಂಡು, ಕೆಲವು ವ್ಯಕ್ತಿಗಳು ಮಾಟ, ಮಂತ್ರದ ಹೆಸರಿನಲ್ಲಿ ಜನರಿಗೆ ವಂಚಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ರೂಪಿಸಲು ಚಿಂತಿಸಲಾಗುತ್ತಿದೆ ಎಂದು ಹೇಳಿದರು.
ಈ ಹೊಸ ಕಾನೂನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದ ಕಾನೂನುಗಿಂತಲೂ ವಿಭಿನ್ನವಾಗಿರಲಿದೆ ಎಂದು ಜಯಚಂದ್ರ ವಿವರಣೆ ನೀಡಿದರು. ರಾಷ್ಟ್ರೀಯ ಕಾನೂನು ಶಾಲೆಯ ತಜ್ಞರ ಅಭಿಪ್ರಾಯ ಪಡೆದು ಶೀಘ್ರದಲ್ಲೇ ಹೊಸ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕೆಲವು ನಕಲಿ ಜ್ಯೋತಿಷಿಗಳು ಹುಟ್ಟಿಕೊಂಡಿದ್ದಾರೆ. ಜನರ ಅಜ್ಞಾನವನ್ನು ಬಂಡವಾಳ ಮಾಡಿಕೊಂಡು, ಅವರಿಗೆ ಭಯ ಹುಟ್ಟಿಸಿ, ಹಣ ಪಡೆದು ವಂಚಿಸುತ್ತಿದ್ದಾರೆ. ಈ ಕಾನೂನು ಜಾರಿಗೆ ತರುವ ಮೂಲಕ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲಾಗುವುದು ಎಂದರು.
ಡಾಲರ್ಸ್ ಕಾಲೋನೊ ನಿವಾಸಕ್ಕೆ ತೆರಳಿದರೆ ನಿಮ್ಮ ಜೀವಕ್ಕೆ ಆಪಾಯವಿದೆ ಎಂದು ನನಗೆ ಒಬ್ಬರು ಜ್ಯೋತಿಷಿಗಳು ಹೇಳಿದ್ದರು. ನಾನು ನಂಬಲಿಲ್ಲ, ಆ ಜ್ಯೋತಿಷಿ ಈಗ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ ಎಂದು ಜಯಚಂದ್ರ ಅನುಭವ ಹಂಚಿಕೊಂಡರು.
ಮಹಾರಾಷ್ಟ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಮೂಢನಂಬಿಕೆಗಳಿಗೆ ಕಡಿವಾಣ ಹಾಕಿದೆ. ಕರ್ನಾಟದಲ್ಲೂ ಈ ಕಾಯ್ದೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಸಚಿವರು ಹೇಳಿದರು. ಕಳೆದ ತಿಂಗಳು ಮಹಾರಾಷ್ಟ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಾಟ-ಮಂತ್ರಕ್ಕೆ ನಿಷೇಧ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೂಢನಂಬಿಕೆ ವಿರೋಧಿ ಕಾರ್ಯಕರ್ತ, ಪತ್ರಕರ್ತ ನರೇಂದ್ರ ಧಾಬೋಲ್ಕರ್ ಅವರನ್ನು ಪುಣೆಯಲ್ಲಿ ಹತ್ಯೆ ಮಾಡಿದ ನಂತರ ಮಹಾರಾಷ್ಟ್ರದಲ್ಲಿ ಮಾಟ-ಮಂತ್ರಗಳ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಇದರಿಂದ ಎಚ್ಚರಗೊಂಡ ಮಹಾರಾಷ್ಟ್ರ ಸರ್ಕಾರ ಮಾಟ-ಮಂತ್ರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. (ಧಾಬೋಲ್ಕರ್ ಹತ್ಯೆ ಮಾಡಿದ್ದು ಯಾರು?)