ಸತ್ಯನಾರಾಯಣ ರಾವ್ ಗೆ ನಿವೃತ್ತಿ ಕೊನೆ ದಿನ ಬಂತು ನೇಮಕಾತಿ ಆರ್ಡರ್!
ಕಾರಾಗೃಹ ಇಲಾಖೆಯ ಮಾಜಿ ಡಿಜಿಪಿ ಸತ್ಯನಾರಾಯಣ ರಾವ್ ಗೆ ಅಗ್ನಿಶಾಮಕ ದಳದ ಮುಖ್ಯಸ್ಥರ ಹುದ್ದೆ. ಪರಪ್ಪನ ಅಗ್ರಹಾರದ ಕೇಂದ್ರೀಯ ಕಾರಾಗೃಹದ ಪ್ರಕರಣದಲ್ಲಿ ಎತ್ತಂಗಡಿಯಾಗಿದ್ದ ಸತ್ಯನಾರಾಯಣ ರಾವ್.
ಬೆಂಗಳೂರು, ಜುಲೈ 31: ಪರಪ್ಪನ ಅಗ್ರಹಾರ ಜೈಲು ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಕಾರಾಗೃಹ ಡಿಜಿಪಿ ಸ್ಥಾನದಿಂದ ಎತ್ತಂಗಡಿಯಾಗಿದ್ದ ಸತ್ಯನಾರಾಯಣ ರಾವ್ ಅವರಿಗೆ ಅವರ ನಿವೃತ್ತಿಯ ಕೊನೆಯ ದಿನ ಹೊಸ ಹುದ್ದೆಯನ್ನು ನೀಡಲಾಗಿದೆ!
ಅಚ್ಚರಿಯಾದರೂ ಇದು ಸತ್ಯ. ಕಾರಾಗೃಹ ಡಿಜಿಪಿ ಸ್ಥಾನದಿಂದ ಎತ್ತಂಗಡಿಯಾಗಿದ್ದ ಸತ್ಯನಾರಾಯಣ ರಾವ್ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸಿರಲಿಲ್ಲ. ಆದರೆ, ಇದೀಗ ರಾವ್ ಅವರನ್ನು ಅಗ್ನಿಶಾಮಕ ದಳ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಅದೂ ಅವರ ಸರ್ಕಾರಿ ಸೇವೆಯ ನಿವೃತ್ತಿಯ ದಿನದಂದು ಈ ಹುದ್ದೆ ನೀಡಲಾಗಿದೆ. ಅದರಂತೆ, ನಾಳೆ (ಆಗಸ್ಟ್ 1) ಅಗ್ನಿಶಾಮಕ ದಳದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿರುವ ಅವರು ಸಂಜೆ ವೇಳೆಗೆ ನಿವೃತ್ತಿಯಾಗಲಿದ್ದಾರೆ.
ರಾಜ್ಯ ಅಗ್ನಿಶಾಮಕ ದಳದ ಮುಂದಿನ ಮುಖ್ಯಸ್ಥರನ್ನಾಗಿ, ನೀಲಮಣಿ ಎನ್. ರಾಜು ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಲಾಗಿದೆ. ನೀಲಮಣಿ ಅವರು ಆಂತರಿಕ ಭದ್ರತಾ ವಿಭಾಗದ ಡಿಡಿಪಿಯಾಗಿ ದ್ದಾರೆ.
ಆಗಸ್ಟ್ 1ರ ಸಂಜೆ ವೇಳೆ ನಿವೃತ್ತರಾಗಲಿರುವ ಸತ್ಯನಾರಾಯಣ ರಾವ್ ಅವರಿಂದ ನೀಲಮಣಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.