ನ್ಯಾಯಾಲಯದ ಸಮಯ ಹಾಳು ಮಾಡಿದರೆ ದಂಡ: ಹೈಕೋರ್ಟ್ ಎಚ್ಚರಿಕೆ
ಅನಗತ್ಯವಾಗಿ ವಾದ ಮಾಡುತ್ತ ನ್ಯಾಯಾಲಯದ ಸಮಯವನ್ನು ಹಾಳುಮಾಡಿದರೆ, ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಿಗೆ ಖಡಕ್ ಎಚ್ಚರಿಕೆ ನೀಡಿದ ಕರ್ನಾಟಕ ಉಚ್ಚ ನ್ಯಾಯಾಲಯ.
ಬೆಂಗಳೂರು, ಆ 9: ರಾಮಚಂದ್ರಾಪುರ ಮಠದ ಗಿರಿನಗರದ ನಿವೇಶನಕ್ಕೆ ಸಂಬಂಧಪಟ್ಟಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟಿನ ವಿಭಾಗೀಯ ಪೀಠ ವಜಾಗೊಳಿಸಿದೆ.
ಕರ್ಣಂ ಪವನ್ ಪ್ರಸಾದ್ ಹಾಗೂ ಕಮಿಟಿ ಆಫ್ ಜುಡಿಶಿಯಲ್ ಅಕೌಂಟೇಬ್ಲಿಟಿಯ ಶಿವಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಪ್ರಸ್ತುತ ಜಾಗದ ಕುರಿತಾದ ಸಮಗ್ರ ದಾಖಲೆಗಳನ್ನು ಪರಿಶೀಲಿಸಿ ಈ ಆದೇಶ ನೀಡಿದೆ.
ರಾಘವೇಶ್ವರ ಶ್ರೀಗಳ ತೇಜೋವಧೆ ಮಾಡದಂತೆ ಕೋರ್ಟ್ ಆದೇಶ
ಜಾಗದ ವಿಚಾರವಾಗಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ದಾಖಲೆ ಸಹಿತವಾಗಿ ಬಿಬಿಎಂಪಿ ಆಯುಕ್ತರ ಮುಂದೆ ಲಿಖಿತವಾಗಿ ಹೇಳಿಕೆಯನ್ನು ಸಲ್ಲಿಸಬೇಕು ಹಾಗೂ ಮಠಕ್ಕೆ ಸೂಕ್ತ ನೊಟೀಸು ಮತ್ತು ವಾದ ಮಂಡಿಸಲು ಸರಿಯಾದ ಅವಕಾಶವನ್ನು ಕೊಡಬೇಕು ಎಂದು ಸೂಚಿಸಿದೆ.
ಅನಗತ್ಯವಾಗಿ ವಾದಮಾಡುತ್ತ ನ್ಯಾಯಾಲಯದ ಸಮಯವನ್ನು ಹಾಳುಮಾಡಿದರೆ, ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಿಗೆ ಖಡಕ್ ಎಚ್ಚರಿಕೆ ನೀಡಿರುವ ನ್ಯಾಯಾಲಯ, ಅನಗತ್ಯವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ವಿವಾದ ಎಬ್ಬಿಸದಂತೆ ಸ್ಪಷ್ಟ ಸೂಚನೆ ರವಾನಿಸಿದೆ.
ಪ್ರಸ್ತುತ ಜಾಗವು 1978ನೇ ಇಸವಿಯಲ್ಲಿ ರಾಮಚಂದ್ರಾಪುರ ಮಠಕ್ಕೆ ಕ್ರಯಪತ್ರದ ಮೂಲಕ ನೋಂದಾಯಿತವಾಗಿದ್ದು, ಮಠದ ಹೆಸರಿನಲ್ಲಿ ಖಾತಾ ಆಗಿ, ಕಂದಾಯವನ್ನೂ ಕಟ್ಟಿಕೊಂಡು ಬರಲಾಗುತ್ತಿದೆ. ಜಾಗವು ಮಠದ ಸ್ವಾಧೀನದಲ್ಲೇ ಇದ್ದು, ಎರಡು ಮಹಡಿಯ ಕಟ್ಟಡವು ಇತ್ತು.
ಆ ಜಾಗದಲ್ಲಿ ನೂತನ ಧರ್ಮಶಾಲಾ ಕಟ್ಟಡವನ್ನು ನಿರ್ಮಿಸಲು ಬಿಬಿಎಂಪಿಯಿಂದ ಅಧಿಕೃತ ಕಟ್ಟಡ ನಕಾಶೆಗೆ ಪರವಾನಗಿಯನ್ನು ಪಡೆದು, ಕಾಮಗಾರಿಯನ್ನು ಆರಂಭಿಸಲು ಮುಂದಾಗಿತ್ತು. ಆನಂತರದ ದಿನಗಳಲ್ಲಿ ಜಾಗವನ್ನು ವಿವಾದಿತ ಜಾಗವಾಗಿಸುವ ಪ್ರಯತ್ನಗಳು ನಡೆಯಿತು.
ಕಳೆದ ವರ್ಷ ಕರ್ಣಂ ಪವನ್ ಪ್ರಸಾದ್ ಅವರು ಮಠ ಜಾಗವನ್ನು ಅತಿಕ್ರಮಿಸಿಕೊಂಡಿದೆ ಎಂದು ದೂರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು, ಇದರ ಆಧಾರದ ಮೇಲೆ ಪ್ರಸ್ತುತ ಜಾಗದಲ್ಲಿ ಕಟ್ಟಡ ಕಟ್ಟದಂತೆ ಮಧ್ಯಂತರ ತಡೆಯನ್ನು ಹೈಕೋರ್ಟ್ ನೀಡಿತ್ತು.
ಹಾಗೆಯೇ ಕಮಿಟಿ ಆಫ್ ಜುಡಿಶಿಯಲ್ ಅಕೌಂಟೇಬ್ಲಿಟಿಯ ಶಿವಕುಮಾರ್ ಅವರು ಕೆಲ ದಿನಗಳ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು. ಇದೇ ಜಾಗಕ್ಕೆ ಸಂಬಧಿಸಿದಂತೆ ಬಿಬಿಎಂಪಿ ಕಟ್ಟಡ ನಕ್ಷೆ ರದ್ಧುಪಡಿಸಿತ್ತು,
ಈ ಕುರಿತಾಗಿ ಮಠ ನ್ಯಾಯಾಲಯದ ಮೆಟ್ಟಿಲೇರಿದಾಗ; ಹೈಕೋರ್ಟ್ ಸಂಬಂಧಿತ 4 ಅಧಿಕಾರಿಗಳಿಗೆ ತಲಾ 50,000 ದಂಡ ಸ್ವರೂಪದ ಠೇವಣಿ ಸಲ್ಲಿಸಲು ಸೂಚಿಸಿತ್ತು. ಆನಂತರ ಬಿಬಿಎಂಪಿ ತನ್ನಿಂದಾದ ತಪ್ಪಾಗಿದೆ ಎಂಬರ್ಥದಲ್ಲಿ ಕಟ್ಟಡ ನಕ್ಷೆಯನ್ನು ಹಿಂಪಡೆದಿದ್ದ ತನ್ನ ಕ್ರಮದಿಂದ ಹಿಂದೆ ಸರಿದು, ಈ ಕುರಿತಾಗಿ ಮಠಕ್ಕೆ ಪತ್ರವನ್ನೂ ಬರೆದಿತ್ತು.
ಇದೀಗ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟಿನ ವಿಭಾಗೀಯ ಪೀಠ ವಜಾಗೊಳಿಸಿದೆ.