ಲಿಂಗ ಪರಿವರ್ತನೆ ದೌರ್ಜನ್ಯಕ್ಕೆ ನೊಂದ ಬಾಲಕನಿಗೆ ನೆರವು
ಬೆಂಗಳೂರು, ಸೆ 28: ಈಚೆಗೆ ಬಲವಂತ ಲಿಂಗ ಪರಿವರ್ತನೆ ನಡೆದ ವಿದ್ಯಾರ್ಥಿಗೆ ನೆರವು ನೀಡಲು ಸರಕಾರ ಮುಂದಾಗಿದೆ. ಆತನ ಕುಟುಂಬಕ್ಕೆ ಸಹಾಯ ಮಾಡುವ ಜೊತೆಗೆ ವಿದ್ಯಾರ್ಥಿಯ ಶಿಕ್ಷಣಕ್ಕೆ, ವೈದ್ಯಕೀಯ ವೆಚ್ಚಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಒದಗಿಸಲು ನಿರ್ಧರಿಸಲಾಗಿದೆ.
ಕುಟುಂಬಕ್ಕೆ ಪಡಿತರ ಚೀಟಿ, ವಸತಿ ಸೇರಿ ಅಗತ್ಯ ಜೀವನ ಭದ್ರತೆ ಒದಗಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ನಿಯಂತ್ರಣ ವರದಿ ಮಾಡುವ ಸಮಿತಿ ಅಧ್ಯಕ್ಷ ವಿ ಎಸ್ ಉಗ್ರಪ್ಪ ತಿಳಿಸಿದ್ದಾರೆ.[ಬೆಂಗಳೂರಿನ ವಸಂತನಗರದಲ್ಲಿ ಅತ್ತೆ-ಸೊಸೆ ಡಬಲ್ ಮರ್ಡರ್]
ಬೆಂಗಳೂರಿನ ಪುಲಕೇಶಿ ನಗರ ಪೊಲೀಸ್ ಠಾಣೆಗೆ ಮಂಗಳವಾರ ಭೇಟಿ ನೀಡಿ, ವಿದ್ಯಾರ್ಥಿಯೊಬ್ಬನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ವಿಚಾರಣೆ ನಡೆಸಿ, ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಭರವಸೆ ನೀಡಿದರು. ಆ ನಂತರ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ ಶಂಕರ್ ಅವರಿಗೆ ಕರೆ ಮಾಡಿ, ನೊಂದ ಬಾಲಕನ ಕುಟುಂಬದವರಿಗೆ ಅಗತ್ಯ ನೆರವು ನೀಡುವಂತೆ ಸೂಚಿಸಿದರು.
ಕ್ರೌರ್ಯಕ್ಕೆ ತುತ್ತಾದ ಬಾಲಕ ಅನುಭವಿಸಿದ ಹಿಂಸಾಕೃತ್ಯಗಳ ಬಗ್ಗೆ ಆಲಿಸಿದ ನಂತರ ಉಗ್ಗಪ್ಪ ಅವರು ಕೆಲ ಕ್ಷಣ ಮೌನವಾದರು. ನಾಗರಿಕ ಸಾಮಾಜ ತಲೆ ತಗ್ಗಿಸುವಂಥ ಕ್ರೌರ್ಯ ಇದು ಎಂದು ಆತಂಕ ವ್ಯಕ್ತ ಪಡಿಸಿದರು. ಈ ರೀತಿ ಘಟನೆಗಳು ನಡೆಯದಂತೆ ಎಚ್ಚರ ವಹಿಸಿ ಎಂದು ಪೋಲೀಸ್ ಅಧಿಕಾರಿಗಳಿಗೆ ಸೂಚಿಸಿದರು.[ಬೆಂಗಳೂರಿನ ಗಿರಿನಗರದ ಭರತ್ ನೇತ್ರಾವತಿ ಪಾಲು]
ಸಭೆಯಲ್ಲಿದ್ದ ಬಾಲಕನ ತಾಯಿಯು ಮಗ ನೀಡಿದ ವಿವರಣೆಗಳನ್ನು ಆಲಿಸುತ್ತಾ ಕಣ್ಣೀರಿಟ್ಟ ದೃಶ್ಯ ಅಲ್ಲಿದ್ದವರನ್ನು ಭಾವುಕರನ್ನಾಗಿ ಮಾಡಿತು. ಬಾಲಕ ನೀಡಿದ ಮಾಹಿತಿ ಆಧರಿಸಿ, ಈ ರೀತಿ ಅಮಾನುಷ ಕೃತ್ಯ ಎಸಗಿವರು ಹಾಗೂ ಪ್ರೇರಣೆ ನೀಡುತ್ತಿರುವ ತಂಡಗಳ ವಿಚಾರಣೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಭೇಟಿ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ರಾಣಿ ಸತೀಶ್, ಮೋಟಮ್ಮ ಮತ್ತು ವಸುಂಧರಾ ಭೂಪತಿ ಸೇರಿದಂತೆ ಸಮಿತಿ ಸದಸ್ಯರು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.