ಸಿ.ವಿ.ರಾಮನ್ ನಗರದ ಕದನ : ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಜಯ?
ಬೆಂಗಳೂರು, ಮೇ 08 : ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಾಲಿ ಮೇಯರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ ವಶದಲ್ಲಿರುವ ಕ್ಷೇತ್ರ 'ಕೈ'ವಶವಾಗಲಿದೆಯೇ? ಕಾದು ನೋಡಬೇಕು.
2008ರಲ್ಲಿ ಕ್ಷೇತ್ರ ಮರು ವಿಂಗಡಣೆ ಬಳಿಕ ರಚನೆಯಾದ ಕ್ಷೇತ್ರ ಸಿ.ವಿ.ರಾಮನ್ ನಗರ. ನಮ್ಮ ಮೆಟ್ರೋ ಅಂತಿಮ ನಿಲ್ದಾಣವಾದ ಬೈಯಪ್ಪನಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಕಳೆದ ಎರಡು ಚನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ಸಿ.ವಿ. ರಾಮನ್ನಗರ ಕ್ಷೇತ್ರ: ಇಲ್ಲಿ ಬಂಡಾಯದ ಬಾವುಟದ್ದೇ ಹಾರಾಟ
ಕ್ಷೇತ್ರದ ವ್ಯಾಪ್ತಿಯಲ್ಲಿ ಕನ್ನಡಿಗರ ಜೊತೆ ತಮಿಳು, ತೆಲಗು ಸೇರಿದಂತೆ ಅನ್ಯ ಭಾಷೆಗಳನ್ನು ಮಾತನಾಡುವ ಜನರು ಸಾಕಷ್ಟಿದ್ದಾರೆ. ಒಟ್ಟು ಮತದಾರರು 2,60,559. ಈ ಬಾರಿ ಚುನಾವಣೆಯಲ್ಲಿ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಿರೀಕ್ಷೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪಿ.ರಮೇಶ್ ಈ ಬಾರಿ ಜೆಡಿಎಸ್ ಸೇರಿದ್ದು, ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಎಸ್.ರಘು, ಕಾಂಗ್ರೆಸ್ನಿಂದ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅಭ್ಯರ್ಥಿಗಳಾಗಿದ್ದಾರೆ.
ಚುನಾವಣೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ
ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿ.ವಿ.ರಾಮನ್ ಅವರ ಹೆಸರಿನ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಾಲಿ ಮೇಯರ್ ಸಂಪತ್ ರಾಜ್ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಹೊಸ ದಾಳ ಉರುಳಿಸಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ 50 ಅಡಿ ಎತ್ತರದ ಆಂಜನೇಯ ವಿಗ್ರಹ ಸ್ಥಾಪನೆ ವಿಚಾರವಾಗಿ ಕೆಲವು ದಿನಗಳ ಹಿಂದೆ ಭಾರೀ ವಿವಾದ ಎದ್ದಿತ್ತು. ಕ್ಷೇತ್ರದ ಜನರು ಯಾರನ್ನು ಬೆಂಬಲಿಸಲಿದ್ದಾರೆ? ಎಂಬುದನ್ನು ಕಾದು ನೋಡಬೇಕು.
ಹ್ಯಾಟ್ರಿಕ್ ಗೆಲುವಿನ ಉತ್ಸಾಹ
2008, 2013ರ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿಯ ಎಸ್.ರಘು ಅವರು ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ರಘು ಅವರ ಗೆಲುವಿನ ಓಟಕ್ಕೆ ತಡೆ ಹಾಕಲು ತಂತ್ರ ರೂಪಿಸಿವೆ.
ಎರಡು ಬಾರಿ ಗೆದ್ದಿರುವ ಅಂಶವೇ ಎಸ್.ರಘು ಅವರ ಪ್ರಮುಖ ಅಸ್ತ್ರ. ನಿರೀಕ್ಷಿತವಾಗಿ ಕೆಲಸ ಮಾಡಿಲ್ಲ ಎಂಬ ಆರೋಪಗಳು ಇವೆ. ಎದುರಾಗಳಿಗಳು ಇಬ್ಬರು ಪ್ರಬಲವಾಗಿರುವುದು ಕ್ಷೇತ್ರದ ಚುನಾವಣಾ ಕಣದ ರಂಗನ್ನು ಮತ್ತಷ್ಟು ಹೆಚ್ಚಿಸಿದೆ.
ಬಿಬಿಎಂಪಿ ಮೇಯರ್ ಅಭ್ಯರ್ಥಿ
ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿಬಿಎಂಪಿ ಮೇಯರ್ ಸಂಪತ್ ರಾಜ್. ಭಾರೀ ಲೆಕ್ಕಾಚಾರ ಹಾಕಿಯೇ ಕಾಂಗ್ರೆಸ್ ಸಂಪತ್ ರಾಜ್ ಅವರನ್ನು ಕಣಕ್ಕಿಳಿಸಿದೆ. ಮೇಯರ್ ಎಂಬ ಪ್ರಭಾವ, ರಾಜ್ಯ ಸರ್ಕಾರದ ಸಾಧನೆ ಮುಂತಾದ ಅಂಶಗಳು ಸಹಾಯಕವಾಗಬಹುದು ಎಂಬ ನಿರೀಕ್ಷೆ ಇದೆ.
ಆದರೆ, ಕಾಂಗ್ರೆಸ್ಗೆ ಮತ ವಿಭಜನೆ ಆತಂಕ ಎದುರಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 44,982 ಮತ ಪಡೆದು ಸೋತಿದ್ದ ಪಿ.ರಮೇಶ್ ಈ ಬಾರಿ ಜೆಡಿಎಸ್ ಸೇರಿದ್ದಾರೆ. ರಮೇಶ್ ಅವರಿಗೆ ಟಿಕೆಟ್ ನೀಡಲಿಲ್ಲ ಎಂಬ ಅಸಮಾಧಾನವೂ ಇದೆ. ಆದ್ದರಿಂದ, ಕಾಂಗ್ರೆಸ್ಗೆ ಹಿನ್ನಡೆ ಉಂಟಾಗಬಹುದು ಎಂಬ ನಿರೀಕ್ಷೆ ಇದೆ.
ಜೆಡಿಎಸ್ ಅಭ್ಯರ್ಥಿಯೂ ಪ್ರಬಲ
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಪಿ.ರಮೇಶ್ ಜೆಡಿಎಸ್ ಸೇರಿದ್ದಾರೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ 44 ಸಾವಿರ ಮತ ಪಡೆದಿರುವುದು, ಕ್ಷೇತ್ರದಲ್ಲಿ ನಾಲ್ಕು ವರ್ಷಗಳ ಕಾಲ ಪಕ್ಷವನ್ನು ಸಂಘಟನೆ ಮಾಡಿರುವುದು ಅವರಿಗೆ ಸಹಾಯಕವಾಗಬಹುದು.
ಕ್ಷೇತ್ರದಲ್ಲಿ ಏಳು ವಾರ್ಡ್ಗಳಿವೆ. 1 ವಾರ್ಡ್ನಲ್ಲಿ ಜಯಗಳಿಸಿರುವ ಪಕ್ಷೇತರ ಅಭ್ಯರ್ಥಿ ಪಿ.ರಮೇಶ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಪಿ.ರಮೇಶ್ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಆದ್ದರಿಂದ, ಗೆಲುವು ಸುಲಭವಾಗಲಿದೆ ಎಂಬುದು ಲೆಕ್ಕಾಚಾರ.
ಅಂಕಿ-ಸಂಖ್ಯೆಗಳ ಲೆಕ್ಕ
ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿ ಕನ್ನಡ, ತಮಿಳು, ತೆಲಗು ಸೇರಿದಂತೆ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಸಿಗುತ್ತಾರೆ. ಒಟ್ಟು ಮತದಾರರು 2,60,559. ಇವರಲ್ಲಿ 1,37,650 ಪುರುಷರು, 1,22,811 ಮಹಿಳಾ ಮತದಾರರು ಇದ್ದಾರೆ.
ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮತಗಳೇ ನಿರ್ಣಾಯಕವಾಗಿವೆ. ದಲಿತ ಸಂಘಟನೆಗಳ ಹೋರಾಟದಲ್ಲಿ ಸಕ್ರಿಯರಾಗಿರುವ ಆರ್.ಮೋಹನ್ ರಾಜ್ ಅವರು ಆರ್ಪಿಐ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಆದ್ದರಿಂದ, ಎಲ್ಲಾ ಅಭ್ಯರ್ಥಿಗಳ ಮತ ಬುಟ್ಟಿಗೆ ಕೈ ಹಾಕುವುದಂತೂ ಖಚಿತ.