ಮಹಾಲಕ್ಷ್ಮೀ ಲೇಔಟ್ : ಬಿಜೆಪಿ ಬಂಡಾಯ, ರೆಬೆಲ್ ಅಭ್ಯರ್ಥಿ ಕಣಕ್ಕೆ!
ಬೆಂಗಳೂರು, ಏಪ್ರಿಲ್ 19 : 'ನೆ.ಲ.ನರೇಂದ್ರ ಬಾಬು ಅವರನ್ನು ಪಕ್ಷಕ್ಕೆ ಕರೆತಂದು ತಪ್ಪು ಮಾಡಿದ್ದೇನೆ. ಅವರು ಮುಂದಿನಿಂದ ಚಾಕು ಹಾಕಿ, ಹಿಂದಿನಿಂದ ಕತ್ತು ಕೊಯ್ದಿದ್ದಾರೆ. ನಾನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ' ಎಂದು ಎಂ.ನಾಗರಾಜ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಂ.ನಾಗರಾಜ್ ಅವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ನೆ.ಲ.ನರೇಂದ್ರಬಾಬು ಅವರನ್ನು ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿದೆ. ಇದರಿಂದಾಗಿ ಎಂ.ನಾಗರಾಜ್ ಅವರು ಅಸಮಾಧಾನಗೊಂಡಿದ್ದಾರೆ.
ವಿಡಿಯೋ : ಬಿಜೆಪಿ ಅಭ್ಯರ್ಥಿ ನೆ.ಲ.ನರೇಂದ್ರ ಬಾಬು ಸಂದರ್ಶನ
ಗುರುವಾರ ಎಂ.ನಾಗರಾಜ್ ಪತ್ರಿಕಾಗೋಷ್ಠಿ ನಡೆಸಿದರು. 'ಪಕ್ಷದ ನಾಯಕರಿಗೆ ಅವಕಾಶ ಕೊಡಿ ಎಂದು ಹೇಳಿದ್ದೆ. ಆದರೆ, ಅವಕಾಶ ನೀಡಲಿಲ್ಲ ಎಂದರು. ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ಏ.23ರಂದು ನಾಮಪತ್ರವನ್ನು ಸಲ್ಲಿಸುತ್ತೇನೆ' ಎಂದು ಹೇಳಿದರು.
'ಇವರು ಗೋಮುಖ ವ್ಯಾಘ್ರ, ನರೇಂದ್ರ ಬಾಬು ಅವರು ಜೆಡಿಎಸ್ ಅಭ್ಯರ್ಥಿ ಗೋಪಾಲಯ್ಯ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹಾಗಾಗಿ ನಾವು ಅವರ ಪರವಾಗಿ ಕೆಲಸ ಮಾಡುವುದಿಲ್ಲ' ಎಂದು ನಾಗರಾಜ್ ಸ್ಪಷ್ಟಪಡಿಸಿದರು.
'ನೆ.ಲ.ನರೇಂದ್ರ ಬಾಬು ಅವರು ಮಗನಿಗೆ ಫೀಸ್ ಕಟ್ಟಲು ದುಡ್ಡಿಲ್ಲ ಎಂದು ಹೇಳಿ ಪಕ್ಷಕ್ಕೆ ಸೇರಿಸಿಕೊಳ್ಳಲು ದಂಬಾಲು ಬಿದ್ದಿದ್ದರು. ಅದಕ್ಕೆ ಯಡಿಯೂರಪ್ಪ ಅವರ ಬಳಿ ಕರೆದುಕೊಂಡು ಹೋದೆ. ಆಗ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು' ಎಂದರು.
ಮಹಾಲಕ್ಷ್ಮೀ ಲೇಔಟ್ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಕಸರತ್ತು!
'ಮಂಡಲದ ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರು, ನಗರದ ಪದಾಧಿಕಾರಿಗಳು, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರು ಸೇರಿ 300 ಜನರು ಬಿಜೆಪಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ' ಎಂದು ನಾಗರಾಜ್ ಹೇಳಿದರು.