ಗೆಲುವಿನ ಸಿಕ್ಸರ್ ಬಾರಿಸಲಿರುವ ಬಿಜೆಪಿ : ಡಿವಿ ಸದಾನಂದಗೌಡ
ಬೆಂಗಳೂರು, ಏಪ್ರಿಲ್ 28 : ರಾಜ್ಯದಲ್ಲಿ ಬಿಜೆಪಿ ಪರ ಒಲವು ಹೆಚ್ಚಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಗೆಲುವಿನ ಸಿಕ್ಸರ್ ಬಾರಿಸಲಿದೆ ಎಂದು, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಐಪಿಎಲ್ ಕ್ರಿಕೆಟ್ ಶೈಲಿಯಲ್ಲಿಯೇ ಕಾಮೆಂಟರಿ ಹೇಳಿದ್ದಾರೆ.
ನಗರದ ಪಶು ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಶನಿವಾರ ಬಿರುಸಿನ ಪ್ರಚಾರದ ನಡುವೆ ಕ್ರಿಕೆಟ್ ಆಡಿದ ಅವರು, ಹೆಬ್ಬಾಳದ ಬಿಜೆಪಿ ಅಭ್ಯರ್ಥಿ ಡಾ. ವೈ ಎ ನಾರಾಯಣಸ್ವಾಮಿ ಅವರ ಪರ ಮತ ಯಾಚಿಸಿದರು.
ಎಚ್.ಆಂಜನೇಯ ಕಾಂಗ್ರೆಸ್ ಪಕ್ಷದ ಏಜೆಂಟ್ : ಸದಾನಂದಗೌಡ
ರಾಜ್ಯದಲ್ಲಿ ಬಿಜೆಪಿ ಗೆಲುವಿನ ಸಿಕ್ಸರ್ ಬಾರಿಸಲಿದೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಎದ್ದಿದೆ. ದೇಶದ ಪ್ರಧಾನಿ ಮೋದಿಯವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಲಿದ್ದಾರೆ ಎಂದರು. ಮೋದಿಯವರು ಏಪ್ರಿಲ್ 29ರಿಂದ ಮೇ 7ರವರೆಗೆ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಮಾಡಲಿದ್ದಾರೆ.
ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆಗಳನ್ನು ನೀಡುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ತಾವು ನೀಡಿದ ಭರವಸೆಗಳನ್ನು ಈಡೇರಿಸದ ಅವರು ಈ ಹೊಸ ಭರವಸೆಗಳನ್ನು ಹೇಗೆ ಈಡೇರಿಸಲು ಸಾಧ್ಯ ಎಂದು ಸದಾನಂದ ಗೌಡರು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಸಮರ್ಪಕವಾಗಿ ಕರ್ನಾಟಕದ ಜನರ ಮುಂದಿಡುವ ಕಾರ್ಯವನ್ನು ಭಾರತೀಯ ಜನತಾ ಪಕ್ಷ ಯಶಸ್ವಿಯಾಗಿ ಮಾಡುತ್ತಿದೆ ಎಂದರು. ಈ ತಿಂಗಳಾಂತ್ಯದಲ್ಲಿ ಬಿಜೆಪಿ ಕೂಡ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಹೆಬ್ಬಾಳ ಬಿಜೆಪಿ ಅಭ್ಯರ್ಥಿ ಡಾ ವೈ ಎ ನಾರಾಯಣಸ್ವಾಮಿ ಮಾತನಾಡಿ, ಅಭಿವೃದ್ದಿಗೆ ಮಾತ್ರ ನನ್ನ ಬೆಂಬಲವಿರಲಿದೆ. ಕಳೆದ 2 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಇದನ್ನು ಗುರುತಿಸಿರುವ ಬಿ-ಪ್ಯಾಕ್ ಸಂಸ್ಥೆ ನನಗೆ ಎರಡನೇ ಸ್ಥಾನ ನೀಡಿದೆ. 5 ವರ್ಷಗಳ ಕಾಲ ಶಾಸಕನಾಗುವ ಅವಕಾಶ ದೊರೆತಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನ ಕೈಗೊಳ್ಳುವುದಾಗಿ ತಿಳಿಸಿದರು.