ಹೊಸಕೋಟೆಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ
ಹೊಸಕೋಟೆ, ಏಪ್ರಿಲ್ 18: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಭರ್ಜರಿ ರೋಡ್ ಶೋ ಮಾಡಿದ್ದಾರೆ.
ಹೊಸಕೋಟೆಯಲ್ಲಿ ಈ ಬಾರಿ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ನ ಎಂಟಿಬಿ ನಾಗರಾಜು ವಿರುದ್ಧ ಕಣಕ್ಕಿಳಿದಿದ್ದು, ಶತಾಯಗತಾಯ ಈ ಬಾರಿ ಅಧಿಕಾರ ಹಿಡಿಯಲೇ ಬೇಕೆಂದು ಹಠಕ್ಕೆ ಬಿದ್ದಿರುವ ಬಚ್ಚೇಗೌಡ ಅವರು ಮಗನ ಪರವಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ ನಿಂದ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜು: ಅಮಿತ್ ಶಾ
ಹೊಸಕೋಟೆಯ ಬಸ್ ನಿಲ್ದಾಣದಿಂದ, ಕಾಲೇಜು ರಸ್ತೆ, ಜಂಕ್ಷನ್ ರಸ್ತೆ ಸೇರಿದಂತೆ ನಗರದ ಹಲವು ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಲಾಗಿದ್ದು, ರೋಡ್ ಶೋನಲ್ಲಿ ಅಮಿತ್ ಶಾ ಜೊತೆಗೆ ಯಡಿಯೂರಪ್ಪ, ಬಚ್ಚೇಗೌಡ, ಸದಾನಂದಗೌಡ, ಆರ್.ಅಶೋಕ್, ಅನಂತ್ಕುಮಾರ್, ಅಭ್ಯರ್ಥಿ ಶರತ್ ಬಚ್ಚೇಗೌಡ ಅವರುಗಳು ಭಾಗವಹಿಸಿದ್ದರು.
ಶರತ್ ಬಚ್ಚೇಗೌಡಗೆ ಮೊದಲ ಚುನಾವಣೆ
ಶರತ್ ಬಚ್ಚೇಗೌಡ ಅವರಿಗೆ ಇದೇ ಮೊದಲ ಚುನಾವಣೆ ಆಗಿದ್ದು, ಮಗನನ್ನು ಗೆಲ್ಲಿಸಲು ಬಚ್ಚೇಗೌಡ ಅವರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಯಡಿಯೂರಪ್ಪ ಅವರನ್ನು ಎರಡು ಬಾರಿ ನಗರಕ್ಕೆ ಕರೆಸಿ ಪ್ರಚಾರ ಮಾಡಿಸಿರುವ ಬಚ್ಚೇಗೌಡರು ಈಗ ಅಮಿತ್ ಶಾ ಅವರನ್ನು ಕರೆಸುವಲ್ಲಿ ಯಶಸ್ವಿ ಆಗಿದ್ದಾರೆ.
ಕುರುಬ-ಒಕ್ಕಲಿಗ ನಡುವಿನ ಯುದ್ಧ
ಕುರುಬ ಹಾಗೂ ಒಕ್ಕಲಿಗ ಮತಗಳು ಬಹುತೇಕ ಸಮಾನವಾಗಿರುವ ಹೊಸಕೋಟೆಯಲ್ಲಿ ಕಾಂಗ್ರೆಸ್ನಿಂದ ಕುರುಬ ಸಮುದಾಯಕ್ಕೆ ಸೇರಿದ ಎಂಟಿಬಿ ನಾಗರಾಜ್ ಅವರು ಕಣಕ್ಕಿಳಿದಿದ್ದು, ಅವರು ಬಚ್ಚೇಗೌಡರ ಬಹುಕಾಲದ ರಾಜಕೀಯ ವಿರೋಧಿ ಆಗಿದ್ದಾರೆ. ಹೊಸಕೋಟೆ ಚುನಾವಣೆ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದು, ಇದು ಎರಡು ದೊಡ್ಡ ಸಮುದಾಯಗಳ ನಡುವಿನ ಯುದ್ಧ ಎಂಬುವಂತೆ ಬಿಂಬಿಸಲಾಗುತ್ತಿದೆ.
In Pics: ಬಿಜೆಪಿಯ ಬಸವ ಜಯಂತಿ, ಚಿಂತಕರೊಂದಿಗೆ ಚರ್ಚೆ ಮಾಡಿದ ಶಾ
ಸತತ ಎರಡು ಸೋಲು ಕಂಡಿರುವ ಬಚ್ಚೇಗೌಡ
ಬಚ್ಚೇಗೌಡರು ಕಳೆದ ಬಾರಿ ವಿಧಾನಸಭೆ ಹಾಗೂ ಲೋಕಸಭೆ ಎರಡೂ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಮತ್ತೆ ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಅವರು ಸ್ಪರ್ಧಿಸಲಿದ್ದಾರೆ ಎನ್ನಲಾಗಿದ್ದು, ಈಗ ಮಗನನ್ನು ವಿಧಾನಸೌಧ ಮೆಟ್ಟಿಲು ಏರಿಸಲು ಪ್ರಯತ್ನಿಸುತ್ತಿದ್ದಾರೆ.
ಮೊಯ್ಲಿ ವಿರುದ್ಧ ಸೋತಿದ್ದ ಬಚ್ಚೇಗೌಡ
ಕಳೆದ ಬಾರಿ ಲೋಕಸಭೆ ಚುನಾವಣೆಗೆ ಮೋದಿಯವರು ಹೊಸಕೋಟೆಗೆ ಆಗಮಿಸಿ ಬಚ್ಚೇಗೌಡರ ಪರ ಪ್ರಚಾರ ನಡೆಸಿದ್ದರು, ಜೊತೆಗೆ ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಸಹ ಆಗಮಿಸಿ ಬಚ್ಚೇಗೌಡರ ಪರ ಪ್ರಚಾರ ನಡೆಸಿದ್ದರು. ಆದರೂ ಸಹ ಬಚ್ಚೇಗೌಡರು ವೀರಪ್ಪ ಮೊಯ್ಲಿ ವಿರುದ್ಧ ಸೋಲನುಭವಿಸಿದರು. ಬಚ್ಚೇಗೌಡರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಅವರ ಎದುರಾಳಿಯಾಗಿ ಕುಮಾರಸ್ವಾಮಿ ಹಾಗೂ ವೀರಪ್ಪ ಮೊಯ್ಲಿ ಇದ್ದರು. ವೀರಪ್ಪ ಮೊಯ್ಲಿ ಅಂತಿಮ ವಿಜಯ ಸಾಧಿಸಿದರು.