ಬಯಸದೇ ಬಂದ ಭಾಗ್ಯ, ರಾಯರ ಕೃಪೆ ಇದ್ರೆ ಗೆಲುವು : ಜಗ್ಗೇಶ್
ಬೆಂಗಳೂರು, ಏಪ್ರಿಲ್ 24: ನಟ ಜಗ್ಗೇಶ್ ಅವರು ಮಂಗಳವಾರ(ಏಪ್ರಿಲ್ 24)ದಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಜಗ್ಗೇಶ್ ಅವರಿಗೆ ಪತ್ನಿ ಪರಿಮಳಾ ಅವರು ಸಾಥ್ ನೀಡಿದರು.
ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಕೆಎಸ್ಸಾರ್ಟಿಸಿ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುವ ಜಗ್ಗೇಶ್ ಅವರು 'ಇದು ನನಗೆ ಬಯಸದೇ ಬಂದ ಭಾಗ್ಯವಾಗಿದೆ' ಎಂದರು.
'ಲಕ್ಕಿ ಸ್ಟಾರ್' ನವರಸ ನಾಯಕ ಜಗ್ಗೇಶ್ ರಾಜಕೀಯ ಪಯಣ
'ಇದು ರಾಯರನ್ನು ನಂಬಿದ್ದಕ್ಕೆ ನನಗೆ ಸಿಕ್ಕ ವರವಾಗಿದೆ. ಬಯಸದಿದ್ದರೂ ನನಗೆ ಧೈರ್ಯತುಂಬಿ ಟಿಕೆಟ್ ನೀಡಿದ್ದಾರೆ. ಎಲ್ಲರೂ ಮೆಚ್ಚುವಂತೆ ಕೆಲಸ ಮಾಡುತ್ತೇನೆ' ಎಂದರು.
ಯಶವಂತಪುರದಿಂದ ಮತ್ತೊಮ್ಮೆ ಶೋಭಾ ಕರಂದ್ಲಾಜೆ ಅವರು ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಶೋಭಾ ಅವರು ಸ್ಪರ್ಧಿಸಲು ಹಿಂದೇಟು ಹಾಕಿದ ಕಾರಣ, ಜನಪ್ರಿಯತೆ ಆಧಾರದ ಮೇಲೆ ಜಗ್ಗೇಶ್ ಅವರಿಗೆ ಟಿಕೆಟ್ ಸಿಕ್ಕಿದೆ.
ಬಿಜೆಪಿಯ 4ನೇ ಪಟ್ಟಿಯಲ್ಲಿ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಸಮಯ ಕಡಿಮೆ ಇರುವುದರಿಂದ ಜಗ್ಗೇಶ್ ಅವರು ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಕಾರ್ಯಕರ್ತದ ಜತೆ ಸಭೆ ಹಾಗೂ ಪ್ರಚಾರ ಆರಂಭಿಸಿದ್ದಾರೆ.
ಬಹಳ ಜವಾಬ್ದಾರಿ ಹೆಚ್ಚಿದೆ
'ರಾಯರ ಹೆಸರಲ್ಲಿ ನಾಮಪತ್ರ ಸಲ್ಲಿಸಿದ್ದೇನೆ, ಬಿಜೆಪಿ ಒಬ್ಬ ವ್ಯಕ್ತಿಯ ಪಕ್ಷವಲ್ಲ, ಕಾರ್ಯಕರ್ತರ ಪಕ್ಷ, ನಾನು ಯಾವ ಲಾಬಿಯೂ ಮಾಡಲಿಲ್ಲ, ನನಗೇ ಟಿಕೇಟ್ ಸಿಕ್ಕಿದ್ದು ಅನಿರೀಕ್ಷಿತ, ಯಶವಂತಪುರದಲ್ಲಿ ಚಕ್ರವ್ಯೂಹ ಆಗೋದಿಲ್ಲ, ಕುರುಕ್ಷೇತ್ರ ಆಗಲಿದೆ ಎಂದರು.
ಗುರುಗಳ ಆಶೀರ್ವಾದ ಪಡೆದುಬಂದೆವು.. pic.twitter.com/KtyhV9lDyh
— ನವರಸನಾಯಕ ಜಗ್ಗೇಶ್ (@Jaggesh2) April 24, 2018
ಬಹಳ ಶಾರ್ಟ್ ಟೈಮ್ ಆದ್ರೂ ಕೂಡ ಕೆಲಸ ಮಾಡೋದಕ್ಕೆ ಕಾರ್ಯಕರ್ತರು ಸಿದ್ಧರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಗೆ ಟಾಂಗ್ ನೀಡಿದ ಜಗ್ಗೇಶ್, ಯಶವಂತಪುರದಲ್ಲಿ ಆಮಿಷ ಒಡ್ಡಿ ಚುನಾವಣೆ ಗೆಲ್ಲಲು ಕೆಲವರು ಹೊರಟಿದ್ದಾರೆ.
ಓಂ ಪ್ರಥಮ ಕಾರ್ಯಕರ್ತರ ಸಭೆಯಲ್ಲಿ..#bjpkarnataka pic.twitter.com/mvdLMxcIjx
— ನವರಸನಾಯಕ ಜಗ್ಗೇಶ್ (@Jaggesh2) April 24, 2018
ಅವರೆಲ್ಲ ಎಂಥೆಂಥ ಡಕಾಯಿತಿ ಮಾಡಿದ್ದಾರೆ ಅನ್ನೋದು ಗೊತ್ತಿದೆ. ನಾನು ಗೆದ್ದ ಮೇಲೆ ದಾಖಲೆಗಳನ್ನು ಇಟ್ಟುಕೊಂಡು ಅವರ ಹಗರಣಗಳನ್ನೆಲ್ಲ ಹೊರತರುತ್ತೇನೆ ಎಂದರು