ಎರಡು ದಿನದ ಬಳಿಕ ಟ್ವಿಟ್ಟರ್ನಲ್ಲಿ ಮತ್ತೆ ಪ್ರತ್ಯಕ್ಷರಾದ ರಮ್ಯಾ
ಗಳೂರು, ಮೇ 15: ಚುನಾವಣಾ ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ನಾಪತ್ತೆಯಾಗಿದ್ದ ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆ ರಮ್ಯಾ ಮತ್ತೆ ಪ್ರತ್ಯಕ್ಷರಾಗಿದ್ದಾರೆ.
ಸೋಮವಾರ ಟ್ವಿಟ್ಟರ್ನಲ್ಲಿ ಕೆಲವು ಪೋಸ್ಟ್ಗಳನ್ನು ಹಾಕಿರುವ ರಮ್ಯಾ, ಬಿಜೆಪಿ ವಿರುದ್ಧದ ಎಂದಿನ ವಾಗ್ದಾಳಿ ಮುಂದುವರಿಸಿದ್ದಾರೆ.
ಮತದಾನದ ಹಿಂದಿನ ದಿನದವರೆಗೂ ಟ್ವಿಟ್ಟರ್ನಲ್ಲಿ ಸಕ್ರಿಯರಾಗಿದ್ದ ರಮ್ಯಾ, ಮತದಾನದ ದಿನದಿಂದ ಅಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸಿರಲಿಲ್ಲ. ಮತದಾನದ ಮಾಡಿದ ಚಿತ್ರವನ್ನೂ ಹಾಕಿರಲಿಲ್ಲ.
LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್
ಇದು ಅನೇಕ ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ರಮ್ಯಾ ಮತದಾನ ಮಾಡಿಲ್ಲ ಎಂದು ಅವರ ವಿರೋಧಿಗಳು ಆರೋಪಿಸಿದ್ದರು. ಮತದಾನ ಮಾಡಿದ್ದರೆ ಅದಕ್ಕೆ ಸಾಕ್ಷಿಯಾಗಿ ಕೈಬೆರಳಿನ ಶಾಯಿ ತೋರಿಸುವಂತೆ ಸವಾಲು ಹಾಕಿದ್ದರು. ಆದರೆ, ಇದಾವುದಕ್ಕೂ ರಮ್ಯಾ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.
ಸುದ್ದಿವಾಹಿನಿಯೊಂದರಲ್ಲಿ ಪ್ರಕಟವಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಂದರ್ಶನಕ್ಕೆ ಪ್ರತಿಕ್ರಿಯಿಸಿ ರಮ್ಯಾ ಟ್ವೀಟ್ ಮಾಡಿದ್ದಾರೆ.
ಬೂತ್ ಮಟ್ಟದ ಕಾರ್ಯಕರ್ತನಾಗಿ ಕೆಲಸ ಆರಂಭಿಸಿದ್ದೆ. ಪಕ್ಷ ನನ್ನನ್ನು ಈ ಸ್ಥಾನಕ್ಕೆ ತಂದಿದೆ ಎಂದು ಅಮಿತ್ ಶಾ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ರಮ್ಯಾ, ನಾನೂ ನನ್ನ ರಾಜಕೀಯ ಬದುಕನ್ನು ಬೂತ್ ಮಟ್ಟದ ಕಾರ್ಯಕರ್ತೆಯಾಗಿ ಆರಂಭಿಸಿದ್ದು. ಕಾಂಗ್ರೆಸ್ ಪಕ್ಷ ನನ್ನನ್ನು ಇಲ್ಲಿಗೆ ತಂದಿರಿಸಿದೆ ಎಂದು ಟಾಂಗ್ ನೀಡಿದ್ದಾರೆ.
ಟೀ ಮಾರುವ ವ್ಯಕ್ತಿ ಪ್ರಧಾನಿಯಾಗಿದ್ದಾರೆ. ಬಿಜೆಪಿಯಲ್ಲಿ ಮಾತ್ರ ಇದು ಸಾಧ್ಯ ಎಂದು ಶಾ ಹೇಳಿಕೆ ನೀಡಿದ್ದರು. ಅದಕ್ಕೆ ರಮ್ಯಾ, ಡಾ. ಮನಮೋಹನ್ ಸಿಂಗ್ ಕೂಡ ಸಾಮಾನ್ಯ ಹಿನ್ನೆಲೆಯಿಂದ ಬಂದು ಪ್ರಧಾನಿಯಾದರು.
ವ್ಯತ್ಯಾಸವೆಂದರೆ ಬಿಜೆಪಿ ಕಾರ್ಯಕರ್ತನ ಬಳಿ ಈಗ 16 ಸಾವಿರ ಕೋಟಿ ಇದೆ. ನಮ್ಮ ಬಳಿ ಇಲ್ಲ ಎಂದು ರಮ್ಯಾ ವ್ಯಂಗ್ಯವಾಡಿದ್ದಾರೆ.
ಇಂಗ್ಲಿಷ್ ವರ್ಣಮಾಲೆಯಲ್ಲಿ 'ಭ್ರಷ್ಟಾಚಾರ'
#CorruptBJP pic.twitter.com/J4sSkBsvj0
— Divya Spandana/Ramya (@divyaspandana) 14 May 2018
ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿಯನ್ನು ಭ್ರಷ್ಟಾಚಾರಿ ಜನತಾ ಪಾರ್ಟಿ ಎಂದು ಲೇವಡಿ ಮಾಡಿರುವ ರಮ್ಯಾ, ಬಿಜೆಪಿಯ ಭ್ರಷ್ಟಾಚಾರ ಮಾಡಿದೆ ಎಂದು ಎ-ಝೆಡ್ ಇಂಗ್ಲಿಷ್ ವರ್ಣಮಾಲೆಯಲ್ಲಿ ಆರೋಪಿಸಿದ್ದಾರೆ.
ರಮ್ಯಾ ಟ್ವೀಟ್ಗಳಿಗೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕಾಂಗ್ರೆಸ್ ಬೆಂಬಲಿಗರು ಅವರನ್ನು ಬೆಂಬಲಿಸಿದ್ದರೆ, ಕೆಲವರು ರಮ್ಯಾ ಕಾಲೆಳೆದಿದ್ದಾರೆ.
ಕಾಂಗ್ರೆಸ್ಸಿಗರ ಭ್ರಷ್ಟಾಚಾರಕ್ಕೆ ಯಾವ ವರ್ಣಮಾಲೆಯೂ ಸಾಕಾಗುವುದಿಲ್ಲ. ಚಿದಂಬರಂ, ವಾಧ್ರಾ ಕುಟುಂಬದ ಬಗ್ಗೆ ಹೇಳಿ ಎಂದು ಸವಾಲು ಹಾಕಿದ್ದಾರೆ.