ಜೀತ ಪದ್ಧತಿ ಆರೋಪಿಗಳನ್ನು ಗಡಿಪಾರು ಮಾಡಲು ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು ಸೆಪ್ಟೆಂಬರ್ 23: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಜಾನಕಿ ಎಂಬ ದಲಿತ ಮಹಿಳೆಯ ಮೇಲೆ ದೌರ್ಜನ್ಯವೆಸಗಿದವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪೊರಕೆ ಪ್ರದರ್ಶಿಸುವುದರ ಮೂಲಕ ಪ್ರತಿಭಟನೆ ಮಾಡಿದರು.
ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ ಸಿ ಎಸ್ ರಘು ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ದಲಿತ ಮಹಿಳೆಯರು ಭಾಗವಹಿಸಿದ್ದರು.
ದಲಿತರ ಮೇಲಿನ ದೌರ್ಜನ್ಯ ಸಹಿಸಲ್ಲ: ಡಿಸಿಎಂ ಪರಮೇಶ್ವರ ಎಚ್ಚರಿಕೆ
ಪ್ರತಿಭಟನೆಯ ನಂತರ ಡಾ ಸಿ ಎಸ್ ರಘು ಮಾತನಾಡಿ, ಸೆಪ್ಟೆಂಬರ್ 20 ರಂದು ಮದ್ದೂರು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡ ಕುದರಗುಂಡಿ ಗ್ರಾಮದ ನಾಗೇಶ್ ಮತ್ತು ಅವರ ಸಹಚರರು ದಲಿತ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ ಅಪರಹರಣ ಮಾಡಿ ಜೀತಕ್ಕೆ ಹೊತ್ತೊಯ್ದಿದ್ದಾರೆ. ಗಂಡನಿಲ್ಲದ ಒಂಟಿ ಅಸಹಾಯಕ ಹೆಣ್ಣುಮಗಳೊಬ್ಬಳನ್ನು ಯಾವ ಗುಜರಾತ್ ಬಿಹಾರ ಗೂಂಡಾಗಳಿಗೂ ಕಮ್ಮಿಯಿಲ್ಲದಂತೆ ನಿಂತು ನೋಡುತ್ತಿದ್ದ ಊರಿನ ಸಾರ್ವಜನಿಕರೆದುರೇ ಮನೆಯೊಳಗೆ ನುಗ್ಗಿ ತನ್ನ ಸಹಚರರ ನೆರವಿನಿಂದ ಜುಟ್ಟು ಹಿಡಿದು ಎಳೆದು ಹೊರತಂದಿದ್ದಾರೆ.
ಅಲ್ಲದೆ, ಆಕೆ ಅತ್ತು ನೋವಿನಿಂದ ಗೋಗರೆದರೂ ಬಿಡದೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಯಾವುದೋ ಪ್ರಾಣಿಯನ್ನು ಎಳೆದೊಯ್ಯವಂತೆ ಈ ಅಸಹಾಯಕ ಹೆಣ್ಣುಮಗಳನ್ನು ಕಾರಿನ ಒಳಗೆ ತುರಿಕೆ ಆಕೆ ಮಿಸುಕಾಡದಂತೆ ಆಕೆಯನ್ನು ತುಳಿದು ಕೂತಿದ್ದಾನೆ. ತನ್ನ ಇನ್ನೋಬ್ಬ ಸಹಚರನಿಗೆ ಕಾರು ಚಲಾಯಿಸಲು ಹೇಳಿ ತನ್ನ ಹೊಲಮನೆಯ ಜೀತಕ್ಕಾಗಿ ಎಳೆದುಕೊಂಡು ಜನರೆದುರೇ ಹೊತ್ತುಕೊಂಡು ಹೋಗುತ್ತಾನೆ. ಅಂದರೆ ಆತನಿಗೆ ಹಣದ ಮದ, ಜಾತಿಯ ಅಹಂಕಾರ, ನಿರ್ದಯಿ ಮಾನಸಿಕತೆ ಕಾನೂನಿನ ಮೇಲೆ ಕಿಂಚಿತ್ತೂ ಅಳುಕಿಲ್ಲದ ಆತನ ದರ್ಪ ಇವುಗಳನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ.
'ದಲಿತ' ಪದಬಳಕೆ ಮಾಡಿದರೆ ತಪ್ಪೇನು? ರಾಮದಾಸ್ ಅಠಾವಳೆ
ಮಂಡ್ಯದ ಈ ಘಟನೆಗೆ ಅಲ್ಲಿನ ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿರುತ್ತದೆ. ರಾಜ್ಯದಲ್ಲಿ ಒಬ್ಬ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಸಡ್ಡೆ ಮನೋಭಾವವೇ ಕಾರಣವಾಗಿರುತ್ತದೆ. ಈ ಘಟನೆ ಸರಕಾರದ ಕಾರ್ಯವೈಖರಿಯ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ದಲಿತರ ಮತವೋ -ಮೇಲ್ಜಾತಿ ವೋಟ್ ಬ್ಯಾಂಕೋ ಎಂಬ ಗೊಂದಲದಲ್ಲಿ ಬಿಜೆಪಿ
ಇಂತಹ ದುರುಳರನ್ನು ಬಂಧಿಸುವುದಷ್ಟೇ ಅಲ್ಲದೆ ಅವರ ಮೇಲೆ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಹಾಗೂ ಜೀತ ನಿರ್ಮೂಲನ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಹಾಗೂ ಇವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಈ ದಲಿತ ಮಹಿಳೆಯನ್ನು ಜೀತ ಮುಕ್ತರನ್ನಾಗಿಸಿ ಅವರಿಗೆ ಸರಕಾರದ ವತಿಯಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.