'ನಾನು ಬೀಫ್ ತಿನ್ನುತ್ತೀನಿ ಎಂದು ಹೇಳಿಲ್ಲ': ಸಿದ್ದರಾಮಯ್ಯ
ಬೆಂಗಳೂರು, ನ.01: ನಗರದ ಕಂಠೀರವ ಸ್ಟುಡಿಯೋ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡಾಂಬೆ ತಾಯಿಗೆ ಪೂಜೆ ಸಲ್ಲಿಸಿ, ನಂತರ ಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದರ ಬೆನ್ನಲ್ಲೇ ಮತ್ತೊಮ್ಮೆ ಗೋ ಮಾಂಸ ಸೇವನೆ ಬಗ್ಗೆ ನೀಡಿದ್ದ ಹೇಳಿಕೆಗೆ ಬದ್ಧರಾಗಿರುವುದಾಗಿ ಮತ್ತೊಮ್ಮೆ ಘೋಷಿಸಿದ್ದಾರೆ.
ಕಂಠೀರವ ಮೈದಾನದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಗೋ ಮಾಂಸ ಭಕ್ಷಣೆ ಹೇಳಿಕೆ: ಆಹಾರ ಪದ್ದತಿ ಅವರ ಇಷ್ಟ. ಮೊದಲು ಬಿಜೆಪಿಯವರು ಸಂವಿಧಾನ ಓದಿಕೊಳ್ಳಲಿ. ನನಗೆ ಇಷ್ಟವಿದ್ದರೆ ನಾನು ತಿನ್ನುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯನ್ನು ಪುನರ್ ಉಚ್ಚರಿಸಿದರು. ['ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ']
ಅದರೆ, ನಾನು ಬೀಫ್ ತಿನ್ನುತ್ತೇನೆ ಎಂದು ಹೇಳಿಲ್ಲ. ಇಷ್ಟಪಟ್ಟರೆ ಏನು ಬೇಕಾದರೂ ತಿನ್ನುತ್ತೇನೆ ನನ್ನ ಆಹಾರ ಪದ್ಧತಿಯನ್ನು ಬೇರೆಯವರು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. [ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ]
ಗೋಮಾಂಸ ಭಕ್ಷಣೆ, ಗೋಹತ್ಯೆ ನಿಷೇಧದ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ. ಇದನ್ನು ತಡೆಯಲು ನೀವು ಯಾರು?' ಎಂದು ಇತ್ತೀಚೆಗೆ ಬೆಂಗಳೂರಿನ ಟೌನ್ ಹಾಲ್ನಲ್ಲಿ ಗುರುವಾರ ನಡೆದ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ ಗೋಹತ್ಯೆ ನಿಷೇಧ ಮಸೂದೆ ಕುರಿತ ಚರ್ಚೆ ಸಂದರ್ಭದಲ್ಲೂ ನಾನು ಇದೇ ಮಾತನ್ನು ಹೇಳಿದ್ದೆ ಎಂದು ನೆನಪಿಸಿದ ಸಿದ್ದರಾಮಯ್ಯ ಅವರು, ಆಹಾರದ ಹಕ್ಕನ್ನು ಯಾರೊಬ್ಬರೂ ಕಸಿಯಲು ಸಾಧ್ಯವಿಲ್ಲ' ಎಂದಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ ಎಂದು ಬಹುಸಂಖ್ಯಾತ ಸಮಾಜದ ಭಾವನೆಗಳನ್ನು ಘಾಸಿಗೊಳಿಸಿರುವುದಕ್ಕಾಗಿ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು. ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗುತ್ತದೆ ಎಂದು ಬಿಜೆಪಿ ಮುಖಂಡರು ಗುಡುಗಿದ್ದಾರೆ.