ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲಿದೆ ಬಿಜೆಪಿ
ಬೆಂಗಳೂರು, ಏಪ್ರಿಲ್, 27: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೆಚ್ಚಳ ಮಾಡಿರುವ ಆಸ್ತಿ ತೆರಿಗೆ ವಿರೋಧಿಸಿ ಭಾರತೀಯ ಜನತಾ ಪಾರ್ಟಿ ಮಲ್ಲೇಶ್ವರಂ ಬಳಿ ಮೇ 3 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ನಂತರ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲಿದೆ.
ಬಿಬಿಎಂಪಿ ಕೌನ್ಸಿಲ್ ಏಪ್ರಿಲ್ 1ರಿಂದ ಆಸ್ತಿ ತೆರಿಗೆಯನ್ನು ಶೇ 20 ರಿಂದ ಶೇ. 25 ಕ್ಕೆ ಏರಿಕೆ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಲಿದ್ದು ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ ನಾರಾಯಣ ಪ್ರತಿಭಟನೆಯ ಮುಂದಾಳತ್ವ ವಹಿಸಲಿದ್ದಾರೆ.[ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಳ ಯಾಕೆ?]
ಮಲ್ಲೇಶ್ವರಂನಿಂದ ಆರಂಭವಾಗುವ ಪ್ರತಿಭಟನಾ ಮೆರವಣಿಗೆ ಬಿಬಿಎಂಪಿ ಕೇಂದ್ರ ಕಚೇರಿಯವರೆಗೆ ಸಾಗಲಿದ್ದು ಬೆಂಗಳೂರು ಮತ್ತು ರಾಜ್ಯ ಬಿಜೆಪಿಯ ಮುಖಂಡರು ಭಾಗವಹಿಸಲಿದ್ದಾರೆ.[ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?]
ಮಾಲ್, ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ, ಕೈಗಾರಿಕಾ ಕಟ್ಟಡ, ಕಚೇರಿ, ಮಾರುಕಟ್ಟೆಗಳು ವಸತಿಯೇತರ ಕಟ್ಟಡಗಳ ಮೇಲಿನ ತೆರಿಗೆ ಹೆಚ್ಚಳ ಮಾಡಲಾಗಿತ್ತು. ನಗರ ವ್ಯಾಪ್ತಿಯಲ್ಲಿರುವ ಕಟ್ಟಡಗಳು ಎ, ಬಿ ಹಾಗೂ ಸಿ ವಲಯಕ್ಕೆ ಸೇರುತ್ತದೆ. ಹೊಸದಾಗಿ ಸೇರ್ಪಡೆಯಾಗಿರುವ ಹಳ್ಳಿಗಳು ಇ ಹಾಗೂ ಎಫ್ ವಲಯಕ್ಕೆ ಸೇರಲಿವೆ. ಕೋರಮಂಗಲ ಹಾಗೂ ಹೆಬ್ಬಾಳದಂಥ ಪ್ರದೇಶದಲ್ಲಿಯೂ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿತ್ತು.[ಆನ್ ಲೈನ್ ನಲ್ಲೇ ತೆರಿಗೆ ಪಾವತಿ ಮಾಡಿ]
ಆಸ್ತಿ ತೆರಿಗೆ ಏರಿಕೆಯನ್ನು ವಿರೋಧಿಸಿ ಬಿಜೆಪಿ ಕೆಂಗೇರಿ ಸೇರಿದಂತೆ ನಗರದ ವಿವಿಧೆಡೆ ಪ್ರತಿಭಟನೆ ಮಾಡಿತ್ತು. ಇದೀಗ ಮಲ್ಲೇಶ್ವರಂ ಬಳಿ ಬೃಹತ್ ಪ್ರತಿಭಟನೆ ಮಾಡಲು ಸಿದ್ಧವಾಗಿದೆ.