ಶಾ ಏಟಿಗೆ ಎಚ್ಚೆತ್ತ ರಾಜ್ಯ ಬಿಜೆಪಿ ನಾಯಕರು ಶುಕ್ರವಾರದಿಂದ ಬೀದಿಗೆ
ಬೆಂಗಳೂರು, ಆಗಸ್ಟ್ 14 : ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ತ ಮೂರು ದಿನಗಳ ವರೆಗೆ ಬೆಂಗಳೂರಿನಲ್ಲಿ ಠಿಕಾಣಿ ಹೂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪಕ್ಷದ ನಾಯಕರ ಜತೆಗೆ ನಿರಂತರ ಸಭೆಗಳ ಮೇಲೆ ಸಭೆಗಳನ್ನು ನಡೆಸಿದ್ದಾರೆ.
ಸರಣಿ ಸಭೆಗಳಲ್ಲಿ ಶಾ ಚಳಿ ಬಿಡಿಸಿದ ಬಳಿಕ ಎಚ್ಚೆತ್ತಿರುವ ರಾಜ್ಯ ಬಿಜೆಪಿ ನಾಯಕರು ಇದೀಗ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ. ಬರುವ ಶುಕ್ರವಾರದಿಂದ ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಾಂತ ಪ್ರತಿಭಟನೆಗಳನ್ನು ಮಾಡಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮುಂದಾಗಿದ್ದಾರೆ.
ಸೋಮವಾರ ತಾಜ್ ವೆಸ್ಟ್ ಹೊಟೇಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ವೈ, ಡಿಕೆಶಿ ವಿರುದ್ಧ ಏಕೆ ಬಿಜೆಪಿ ಪ್ರತಿಭಟನೆಗೆ ಇಳಿಯಲಿಲ್ಲ ಎಂಬ ಪ್ರಶ್ನೆಗೆ ಡಿಕೆಶಿ ಅವರ ಮೇಲೆ ಐಟಿ ದಾಳಿ ವೇಳೆ ಎಷ್ಟು ಆಸ್ತಿ ಪತ್ತೆಯಾಗಿದೆ ಎಂಬ ಸ್ಪಷ್ಟ ಮಾಹಿತಿ ದೊರೆತ ಮೇಲೆ ಅವರ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿತ್ತು ಎಂದು ಉತ್ತರಿಸಿ ನುಣುಚಿಕೊಂಡರು.
ರಾಜ್ಯ ಸರಕಾರದ ಹಲವು ವಿವಾದಗಳು ವರದಿಯಾದವು. ಆದರೆ ಅಂಥ ಎಲ್ಲ ಸಂದರ್ಭದಲ್ಲಿ ಬಿಜೆಪಿಯು ದೊಡ್ಡಮಟ್ಟದ ಧ್ವನಿ ಎತ್ತಿದ ಬಾಯಿ ಮುಚ್ಚಿಕೊಂಡು ಕೂತಿದೆ. ಉದ್ದುದ್ದ ಭಾಷಣಗಳು ಬಿಗಿಯುವುದು, ಫೋಟೋಗಳಿಗೆ ಪೋಸ್ ಕೊಡುವುದನ್ನು ನಿಲ್ಲಿಸಿ. ಕಾಂಗ್ರೆಸ್ ನ ಕೊನೆ ಹಾಡಲು ಪ್ರಯತ್ನಿಸಿ.
ಜನರ ಮನಸ್ಸನ್ನು ತಿಳಿದುಕೊಳ್ಳುವುದಕ್ಕೆ ಈಗಿನಿಂದಲೇ ಶುರು ಮಾಡಿ ಎಂದು ನಾಯಕರಿಗೆ ಅಮಿತ್ ಶಾ ಖಡಕ್ ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಾದಂತ ಪ್ರತಿಭಟನೆ ರಾಜ್ಯ ನಾಯಕರು ಮುಂದಾಗಿದ್ದಾರೆ.