ಮಹದಾಯಿಗಾಗಿ ಕರ್ನಾಟಕ ಬಂದ್: ತಿಳಿಯಬೇಕಾದ 6 ಸಂಗತಿ
Recommended Video
ಬೆಂಗಳೂರು, ಜನವರಿ 25: ಮತ್ತೆ ಕರ್ನಾಟಕ ಬಂದ್! ಭಾಷೆ, ನೀರು, ನೆಲ... ಈ ಮೂರಕ್ಕಾಗಿ ಇಲ್ಲಿ ಆಗಾಗ ಬಂದ್ ನಡೆಯುತ್ತಲೇ ಇರುತ್ತದೆ.
ಈ ಬಂದ್ ಗಳಿಂದ ಆಗುವ ಲಾಭವೇನೋ, ಕೇಂದ್ರ ಸರ್ಕಾರಕ್ಕೆ ಸಂದೇಶ ತಲುಪಿಸಲು ನಿಜಕ್ಕೂ ಇದೊಂದು ಪರಿಣಾಮಕಾರಿ ದಾರಿಯಾ ಎಂಬುದು ಅರ್ಥವಾಗದ ವಿಷಯವಾದರೂ, ಕುಡಿಯುವ ನೀರಿನ ವಿಷಯಕ್ಕೆ ಬಂದಾಗ ಇಂಥ ಪ್ರತಿಭಟನೆಗಳು ಅನಿವಾರ್ಯ ಎನ್ನಿಸದಿರದು.
LIVE: ಕರ್ನಾಟಕ ಬಂದ್: ಸದ್ಯಕ್ಕೆ ಓಲಾ, ಊಬರ್ ಕ್ಯಾಬ್ ಸೇವೆ ಲಭ್ಯ
ಉತ್ತರ ಕರ್ನಾಟಕದ ಭಾಗದ ಬಾಗಲಕೋಟೆ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಕುಡಿವ ನೀರು ಒದಗಿಸುವ ಮಹದಾಯಿ ಯೋಜನೆಗೆ ಗೋವಾ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಪ್ರತಿಭಟನಕಾರರು ಬಯಸುತ್ತಿದ್ದಾರೆ.
ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್
ಇದು(ಜ.25) ರಾಜ್ಯದಾದ್ಯಂತ ಆಚರಿಸಲಾಗುತ್ತಿರುವ ಬಂದ್ ಗೆ ವಿವಿಧ ಕನ್ನಡಪರ ಸಂಘಟನೆಗಳು ಕರೆನೀಡಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಹತ್ತು ಹಲವು ಸಂಘಟನೆಗಳು ಬೆಂಬಲ ನೀಡಿವೆ.
ಅಣಕು ಶವಯಾತ್ರೆ ಮೂಲಕ ಪ್ರಧಾನಿ ವಿರುದ್ಧ ಕನ್ನಡ ಪರ ಸಂಘಟನೆಗಳ ಆಕ್ರೋಶ
ಕರ್ನಾಟಕ ಬಂದ್ ಕುರಿತು ತಿಳಿಯಬೇಕಾದ ಕೆಲವು ಸಂಗತಿ ಇಲ್ಲಿದೆ.
ಬಂದ್ ಗೆ ಕರೆ ನೀಡಿದ್ದು ಯಾರು?
ಕನ್ನಡಪರ ಸಂಘಟನೆಗಳು ಮತ್ತು ರೈತರು ಈ ಬಂದ್ ಗೆ ಕರೆ ನೀಡಿದ್ದು, ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿವೆ. ಮಹಾದಾಯಿ ನದಿನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಗೋವಾ ನಡುವಲ್ಲಿ ವಿವಾದವೆದ್ದಿದೆ.
ಫೆ.4 ರಂದು ಬೆಂಗಳೂರು ಬಂದ್!
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಕಾರ್ಯಕ್ರಮಕ್ಕಾಗಿ ಫೆ.4 ರಂದು ಬೆಂಗಳೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಅಂದೂ ಸಹ ಬೆಂಗಳೂರು ಬಂದ್ ಆಚರಿಸಲಾಗುತ್ತಿದೆ. ಅದ್ಯಕ್ಕೆ ಮಹದಾಯಿ ಪ್ರಕರಣವನ್ನು, ದೆಹಲಿಯ ಮಹಾದಾಯಿ ಜಲವಿವಾದ ನ್ಯಾಯಾಧಿಕರಣದಲ್ಲಿ ಕಾಯ್ದಿರಿಸಲಾಗಿದೆ.
ಗೋವಾ ವಾದವೇನು?
ಕಳೆದ ಡಿಸೆಂಬರ್ ನಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದ ಪತ್ರ ಬರೆದಿದ್ದರು. ನಂತರ ಪ್ರತಿಕ್ರಿಯೆ ನೀಡಿದ್ದ ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್, 'ಮಹದಾಯಿ ನೀರನ್ನು ನೀರಾವರಿ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಕರ್ನಾಟಕ ಬಯಸುತ್ತಿದೆ. ಇದು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ' ಎಂದಿದ್ದರು.
ಮಹದಾಯಿ ಹುಟ್ಟುವುದೆಲ್ಲಿ?
77 ಕಿ.ಮೀ.ಉದ್ದದ ಮಹದಾಯಿ ನದಿ ಕರ್ನಾಟಕದ ಬೆಳಗಾವಿಯ ಭೀಮಗಡ ಎಂಬಲ್ಲಿ ಹುಟ್ಟುತ್ತದೆ. ನಂತರ ಇದು ಗೋವಾ ಮೂಲಕ ಹರಿದು ಅರಬ್ಬಿ ಸಮುದ್ರ ತಲುಪುತ್ತದೆ.
ವಾಟಾಳ್ ನಾಗರಾಜ್ ಕುರಿತು ಮುನಿಸು!
ಹುಬ್ಬಳ್ಳಿಯಲ್ಲಿ ಬಂದ್ ಗೆ ಕರೆ ನೀಡಿದ್ದ ವಾಟಾಳ್ ನಾಗರಾಜ್, ಹಲವು ಕನ್ನಡಪರ ಸಂಘಟನೆಗಳನ್ನು ಈ ಸಂದರ್ಭದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಆರೋಪಕ್ಕೆ ಗುರಿಯಾಗಿದ್ದರು. ಅದಕ್ಕೆಂದೇ ಕರವೇ ಮುಖಂಡ ನಾರಾಯಣ ಗೌಡ ನಿನ್ನೆ (ಜ.24) ವರೆಗೂ ಬಂದ್ ಗೆ ಯಾವುದೇ ಬೆಂಬಲ ನೀಡಿರಲಿಲ್ಲ. ನಂತರ ಕೊನೆಯ ಕ್ಷಣದಲ್ಲಿ ಬೆಂಬಲ ನೀಡಿದರು.
ಪದ್ಮಾವತ್ ಬಿಡುಗಡೆಗೆ ಪರಿಣಾಮ
ಇಂದು ದೇಶದಾದ್ಯಂತ ತೆರೆ ಕಾಣಲಿರುವ ಸಂಜಯ್ ಲೀಲಾ ಭನ್ಸಾಲಿ ಅವರ ಪದ್ಮಾವತ್ ಚಿತ್ರದ ಮೇಲೂ ಈ ಬಂದ್ ಪರಿಣಾಮ ಬೀರಬಹುದು. ಏಕೆಂದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಬಂದ್ ಗೆ ಬೆಂಬಲ ನೀಡಿದೆ. ರಾಜ್ಯದಲ್ಲಿ ಬಹುತೇಕ ಮಲ್ಟಿಪ್ಲೆಕ್ಸ್ ಗಳು ಮುಚ್ಚಿವೆ.