ವಿಕಚಲಚೇತನರ ಸವಲತ್ತುಗಳ ಅನುಷ್ಠಾನ: ಕರ್ನಾಟಕ ಅತ್ಯುತ್ತಮ ರಾಜ್ಯ
ಅಂಗವಿಕಲರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಗುರುತಿಸಿ 'ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಅತ್ಯುತ್ತಮ ರಾಜ್ಯವಾಗಿ ಕರ್ನಾಟಕಕ್ಕೆ ಪ್ರಶಸ್ತಿ ಲಭಿಸಿದೆ.
ಬೆಂಗಳೂರು, ಡಿಸೆಂಬರ್ 3: ರಾಜ್ಯ ಸರ್ಕಾರವು ವಿಕಲಚೇತನರ ಕಲ್ಯಾಣಕ್ಕಾಗಿ ಸುಮಾರು 22 ಯೋಜನೆಗಳನ್ನು ಘೋಷಿಸಿದ್ದು, ಇವುಗಳ ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕಕ್ಕೆ "ಅತ್ಯುತ್ತಮ ರಾಜ್ಯ' ಪ್ರಶಸ್ತಿ ಲಭಿಸಿದೆ ಎಂದು ಯೋಜನೆ ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಅವರು ತಿಳಿಸಿದರು.
ಅವರು ಇಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ವಿಶ್ವ ವಿಕಲಚೇತನರ ದಿನಾಚರಣೆ- 2016 ಕಾರ್ಯಕ್ರಮದ ಉದ್ಫಾಟನೆ ನೆರವೇರಿಸಿ ಮಾತನಾಡಿದರು.
ವಿಕಲಚೇತನರ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿ ಸರ್ವತೋಮುಖ ಪ್ರಗತಿಗೆ ಶ್ರಮಿಸಿದ ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಕರು ಹಾಗೂ ವೈಯಕ್ತಿಕ ವಿಭಾಗದ 10 ಸಾಧಕರಿಗೆ ಇಂದು ವಿಕಲಚೇತನ ದಿನಾಚರಣೆ ಅಂಗವಾಗಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕವನ್ನು ವಿಕಲಚೇತನ ಸಬಲೀಕರಣ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ "ಅತ್ಯುತ್ತಮ ರಾಜ್ಯ" ಎಂಬ ರಾಷ್ಟ್ರಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿದ್ದು, ಆ ಪ್ರಶಸ್ತಿಯನ್ನು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇಲಾಖೆಯ ಸಚಿವೆ ಶ್ರೀಮತಿ ಉಮಾಶ್ರೀ ಅವರು ಭಾಗವಹಿಸಿ ಈ ಪ್ರಶಸ್ತಿಯನ್ನು ಸರ್ಕಾರದ ಪರವಾಗಿ ಸ್ವೀಕರಿಸಲಿದ್ದಾರೆ.
ವಿಕಲಚೇತನ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ವಿತರಣೆ, ಬ್ರೈಲ್ಯಂತ್ರ ವಿತರಣೆ, ಕೆ.ಎ.ಎಸ್ ಐ.ಎ.ಎಸ್. ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿಕಲಚೇತನರ ವಿದ್ಯಾರ್ಥಿಗಳಿಗೆ ಗರಿಷ್ಠ 1 ಲಕ್ಷದವರೆಗೆ ಧನಸಹಾಯ ನೀಡಲಾಗುತ್ತಿದೆ.
ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಪುನರ್ವಸತಿ ಕೇಂದ್ರಗಳ ನಿರ್ವಹಣೆಗಾಗಿ ನೀಡಲಾಗುತ್ತಿರುವ ಅನುದಾನದ ಮೊತ್ತವನ್ನು 28 ಲಕ್ಷ ರೂ. ಗಳಿಂದ 36 ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ. ವಿಕಲಚೇತನರಿಗಾಗಿ 10,000 ರೂ. ಮೌಲ್ಯದ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆ ಮೊತ್ತವನ್ನು 15,000 ರೂ. ಗಳಿಗೆ ಹೆಚ್ಚಿಸಲಾಗಿದೆ.
ಅಂಧ ತಾಯಂದಿರಿಗೆ ಜನಿಸಿದ ಮಕ್ಕಳ ಪಾಲನೆ ಪೋಷಣೆಗಾಗಿ ಮಾಸಿಕ 2000 ರೂ. ಗಳ ಶಿಶುಪಾಲನೆ ಭತ್ಯೆ. ಹೀಗೆ ಹತ್ತು ಹಲವು ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದ್ದು, ಇದನ್ನು ಜನರು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ 10 ಸೇವಾ ಸಂಸ್ಥೆಗಳು, 5 ವಿಶೇಷ ಶಿಕ್ಷಕರು, 10 ವ್ಯಕ್ತಿಗಳು ಹಾಗೂ ವಿಕಲಚೇತನಮಕ್ಕಳನ್ನು ಪಾಲಿಸಿದ 10 ಮಾತೆಯರಿಗೆ (ಇವರಲ್ಲಿ ಇಬ್ಬರು ಶಾಸಕರೂ ಸೇರಿದ್ದಾರೆ) ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ 5 ವಿಕಲಚೇತನ ಸಾಧಕರನ್ನು ಸಹ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಅವರು ಇಂದು ನಿಜವಾದ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ವಿಕಲಚೇತನರ ತಾಯಂದಿರು ನಿಜವಾದ ದೇವತೆಗಳು. ಇಂದು ನನಗೆ ತೃಪ್ತಿ ತಂದ ದಿನ ಎಂದರು.
ಕಾರ್ಯಕ್ರಮದಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಮಹಾಪೌರರಾದ ಪದ್ಮಾವತಿ, ಶಾಸಕರಾದ ಶಶಿಕಲಾ ಜೊಲ್ಲೆ, ವಿನಿಶಾ ನರ್ಹೋನಾ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮುನ್ನ ವಿಕಲಚೇತನರು ವಿಶೇಷ ಯೋಗಾಸನದಿಂದ ಜನರನ್ನು ಆಕರ್ಷಿಸಿದರು.