ಹಣ ಹಂಚಿಕೆ ಮಾಡಿಲ್ಲ: ದಿಶಾ ಸುರೇಶ್ ಕುಮಾರ್ ಸ್ಪಷ್ಟೀಕರಣ
Recommended Video
ಬೆಂಗಳೂರು, ಮೇ 9: 'ನಾನು ವೈದ್ಯೆ. ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ' ಎಂದು ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಅವರ ಮಗಳು ದಿಶಾ ಸ್ಪಷ್ಟನೆ ನೀಡಿದ್ದಾರೆ.
ರಾಜಾಜಿನಗರದ ಇಎಸ್ಐ ಆಸ್ಪತ್ರೆ ಸಮೀಪದ ಮನೆಯಲ್ಲಿ ಹಂಚಿಕೆ ಮಾಡಲು ಚೀಲದಲ್ಲಿ ಹಣ ಇರಿಸಿಕೊಂಡಿದ್ದರು ಎಂಬ ಆರೋಪ ದಿಶಾ ಅವರ ವಿರುದ್ಧ ಕೇಳಿಬಂದಿತ್ತು. ಈ ಸಂಬಂಧ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದೂ ವರದಿಯಾಗಿತ್ತು.
ಇವೆಲ್ಲವೂ ಸತ್ಯಕ್ಕೆ ದೂರ ಎಂದು ದಿಶಾ ಹೇಳಿದ್ದಾರೆ. ಇದು ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಯಶಸ್ ನಾಯಕ್ ಅವರ ಕಚೇರಿ. ದೆಹಲಿಯಿಂದ ತಂಡವೊಂದು ಬಂದಿದ್ದು, ಸಾಮಾಜಿಕ ಮಾಧ್ಯಮದ ಕೆಲಸದಲ್ಲಿ ನಾವು ತೊಡಗಿದ್ದೆವು.
ಆ ಹಣ ನನ್ನದು ಎಂದು ಸಾಬೀತಾದ್ರೆ, ರಾಜಕೀಯ ನಿವೃತ್ತಿ : ಸುರೇಶ್
ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಚೇರಿಗೆ ಬಂದೆ. ಮೂರು ಜನ ಮಾತ್ರ ಇದ್ದೆವು. ಇದ್ದಕ್ಕಿದ್ದಂತೆ ಒಳನುಗ್ಗಿದ ಕೆಲವರು, ನನ್ನ ಬಳಿ ಬಂದು ನಿನ್ನ ಚೀಲದಲ್ಲಿ ದುಡ್ಡಿದೆ ತೋರಿಸು ಎಂದರು. ಸಾಮಾನ್ಯವಾಗಿ ನನ್ನನ್ನು ಮಾತನಾಡಿಸುವವರು ಗೌರವದಿಂದ ಮಾತನಾಡುತ್ತಾರೆ. ಆದರೆ, ಈ ಜನರು ಏಕವಚನದಲ್ಲಿ ದಾರ್ಷ್ಟ್ಯದಿಂದ ಮಾತನಾಡಿದರು. ನನ್ನ ಚೀಲದಲ್ಲಿ ಮೊಬೈಲ್, ಲ್ಯಾಪ್ಟಾಪ್ ಚಾರ್ಜರ್ ಬಿಟ್ಟು ಬೇರೆ ಏನೂ ಇರಲಿಲ್ಲ. ದುಡ್ಡು ಎಲ್ಲಿಟ್ಟಿದ್ದೀಯಾ ಎಂದು ಗೊತ್ತು ಎಂದು ಕೆಟ್ಟ ಪದಗಳಿಂದ ನಿಂದಿಸಿ ಹೊರಟುಹೋದರು ಎಂದು ದಿಶಾ ವಿವರಿಸಿದ್ದಾರೆ.
ಕೆಲವೇ ನಿಮಿಷದಲ್ಲಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿದ್ದವರು ತುಂಬಾ ಜನರನ್ನು ಕರೆಯಿಸಿ ಏನೇನೋ ಘೋಷಣೆ ಕೂಗಿದರು. ಅದರ ಬೆನ್ನಲ್ಲೇ ಪೊಲೀಸರು ಬಂದು ಪರಿಶೀಲಿಸಿದರು. ಅವರಿಗೆ ಏನೂ ಸಿಗಲಿಲ್ಲ. ಅವರ ಹಿಂದೆಯೇ ಇವರೂ ಬಂದು ವಿಡಿಯೊ ತೆಗೆಯಲು ಶುರುಮಾಡಿದರು.
ವೀರಪ್ಪ ಮೊಯ್ಲಿ ಟ್ವೀಟಾಸ್ತ್ರ ಸ್ವಾಗತಿಸಿದ ಶಾಸಕ ಸುರೇಶ್ ಕುಮಾರ್
ಅವಾಚ್ಯ ಪದಗಳಲ್ಲಿ ಮಾತನಾಡಿದರು. ನನ್ನ ವಿಡಿಯೊ ತೆಗೆಯಲು ಆರಂಭಿಸಿದರು. ಹೊರಗೆ ಘೋಷಣೆಗಳು ಇನ್ನೂ ಜೋರಾಗಿತ್ತು. ನಾನು ನನ್ನ ಪಾಡಿಗೆ ಕೆಲಸ ಮುಂದುವರಿಸಿದೆ. ಅಷ್ಟರಲ್ಲಿ ಕಾರ್ಪೊರೇಟರ್ ಕೃಷ್ಣಮೂರ್ತಿ ಒಳಗೆ ಬಂದು ನೀವೆಲ್ಲ ಬಿಜೆಪಿ ಏಜೆಂಟ್ಗಳು ನಡೀರಿ ನಡೀರಿ ಎಂದು ಕೂಗಾಡಿದರು.
ನೀನು ಏನೇ ನೋಡ್ತಿದ್ದೀಯಾ ಎಂದು ಕೆಟ್ಟದಾಗಿ ಮಾತನಾಡಿದರು. ಅದನ್ನು ಕೇಳಿ ನನಗೆ ಶಾಕ್ ಆಯ್ತು. ಹಿಂದೆಂದೂ ಈ ರೀತಿ ಅನುಭವ ಆಗಿರಲಿಲ್ಲ. ತಂದೆಗೆ ತಿಳಿಸೋಣ ಎಂದು ಫೋನ್ ತೆಗೆದುಕೊಂಡೆ. ಕೂಡಲೇ ಅವರು ನನ್ನ ವಿಡಿಯೊ ತೆಗೆಯುತ್ತೀಯೇನೆ? ಎಂದು ಎಳೆದಾಡಲು ಬಂದರು. ಜನಪ್ರತಿನಿಧಿಯಾಗಿ ಒಬ್ಬ ಹೆಣ್ಣುಮಗಳ ಜೊತೆ ಹೇಗೆ ಮಾತನಾಡುವುದು ಅವರಿಗೆ ತಿಳಿದಿಲ್ಲ. ಗೂಂಡಾಗಿರಿ ಪ್ರದರ್ಶಿಸಿದರು ಎಂದು ದಿಶಾ ಆರೋಪಿಸಿದ್ದಾರೆ.
ನನ್ನ ಚೀಲದಲ್ಲಿ ಯಾವುದೇ ಹಣವಿರಲಿಲ್ಲ. ನನ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿಲ್ಲ. ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ನನ್ನ ವೃತ್ತಿಬದುಕಿಗೆ ತೊಂದರೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲಿಗೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರೇ ತಮ್ಮ ಜೇಬಿಂದ ದುಡ್ಡು ತೆಗೆದು ತೋರಿಸಿರಬಹುದು. ನಮ್ಮದು ಹಣಹಂಚಿ ರಾಜಕೀಯ ಮಾಡುವ ಕುಟುಂಬವಲ್ಲ. ಸ್ವಚ್ಛ ಕುಟುಂಬ ನಮ್ಮದು. ಜೀವನದಲ್ಲಿ ಇದೇ ಮೊದಲು ಇಂತಹ ಕೆಟ್ಟ ಅನುಭವ ಆಗಿದೆ ಎಂದು ದಿಶಾ ಹೇಳಿದರು.