ಯಶವಂತಪುರ ವಿಧಾನಸಭಾ ಕ್ಷೇತ್ರ: 'ಹಳ್ಳಿ ಮನುಷ್ಯನ ಪೇಟೆ ಸವಾರಿ'
ಯಶವಂತಪುರ ವಿಧಾನಸಭೆ ಕ್ಷೇತ್ರ ಅಂದಾಕ್ಷಣ ಥಟ್ಟನೆ ನೆನಪಾಗುವುದು ಚಂದದ ಶರ್ಟು, ಟೈ ಧರಿಸಿ, ಬರ್ಮುಡಾ ಚಡ್ಡಿ ಹಾಗೂ ಚಪ್ಪಲಿ ಹಾಕಿಕೊಂಡ ವ್ಯಕ್ತಿಯ ಚಿತ್ರ. ಏಕೆಂದರೆ ಈ ಕ್ಷೇತ್ರ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಬಹುತೇಕ ಇನ್ನೂ ಬೃಹತ್ ಬೆಂಗಳೂರಿನ ಒಳಗೆ ಬರಲು ಹವಣಿಸುತ್ತಿವೆ. ಮೇಲ್ನೋಟಕ್ಕೆ ಬಹಳ ಮುಂದುವರಿದಂತೆಯೂ ಅಂತರಾಳದಲ್ಲಿ ಬೇಜಾನ್ ಸಮಸ್ಯೆಯೂ ಇಟ್ಟುಕೊಂಡಿರುವ ಕ್ಷೇತ್ರವಿದು.
ಅಂದಹಾಗೆ, ಯಶವಂತಪುರ ರೈಲು ನಿಲ್ದಾಣ ಬರುವುದು ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ವ್ಯಾಪಿಗೆ. ಇನ್ನು ಎಪಿಎಂಸಿಯಂತೂ ರಾಜರಾಜೇಶ್ವರಿ ನಗರ ಕ್ಷೇತ್ರದ ಭಾಗ. 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ವೇಳೆಯಲ್ಲಿ ಉದ್ಭವಿಸಿದ ಕ್ಷೇತ್ರ ಯಶವಂತಪುರ. ಅದಕ್ಕೂ ಮುಂಚೆ ಒಂದಿಷ್ಟು ಭಾಗ ಮಾಗಡಿಗೂ ಮತ್ತೊಂದಿಷ್ಟು ಉತ್ತರಹಳ್ಳಿ ಕ್ಷೇತ್ರಕ್ಕೂ ಹಂಚಿಹೋಗಿತ್ತು.
ಇನ್ನು ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬಿಬಿಎಂಪಿ ವಾರ್ಡ್ ಗಳು
ದೊಡ್ಡಬಿದರಕಲ್ಲು
ಹೇರೋಹಳ್ಳಿ
ಉಲ್ಲಾಳು
ಕೆಂಗೇರಿ
ಹೆಮ್ಮಿಗೆಪುರ
ಯಶವಂತಪುರದಿಂದ ಸ್ಪರ್ಧೆ, ಶೋಭಾ ಕರಂದ್ಲಾಜೆ ಹೇಳಿದ್ದೇನು?
ಇವುಗಳಲ್ಲಿ ಉಲ್ಲಾಳು ಹಾಗೂ ಕೇಂಗೇರಿಯಲ್ಲಿ ಬಿಜೆಪಿ ಕಾರ್ಪೊರೇಟರ್ ಗಳು ಹಾಗೂ ಉಳಿದ ಮೂರು ಕಡೆ ಕಾಂಗ್ರೆಸ್ ಕಾರ್ಪೊರೇಟರ್ ಗಳು ಆರಿಸಿ ಬಂದಿದ್ದಾರೆ. ಬೆಂಗಳೂರಿನ ಒಟ್ಟು ಇಪ್ಪತ್ತೆಂಟು ಕ್ಷೇತ್ರಗಳ ಪೈಕಿಯೇ ಅತಿ ಹೆಚ್ಚಿನ ಸಂಖ್ಯೆ, ಅಂದರೆ 4.54 ಲಕ್ಷ ಮತದಾರರು ಇರುವುದು ಇದೇ ಯಶವಂತಪುರ ಕ್ಷೇತ್ರದಲ್ಲಿ.
ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ ಮತ್ತು ಹೆಮ್ಮಿಗೆಪುರ ಬಿಬಿಎಂಪಿಗೆ ಸೇರ್ಪಡೆಯಾಗಿದ್ದು 2007ರಲ್ಲಿ. ಈ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ. ಅದರಲ್ಲು ಶುದ್ಧ ಕುಡಿಯುವ ನೀರು ಸಿಗುವುದಿಲ್ಲ. ಬೋರ್ ವೆಲ್ ಗಳನ್ನು ಕೊರೆಸಿದ್ದರೂ ನೀರಿನ ಟ್ಯಾಂಕರ್ ಗಳ ಮೇಲಿನ ಅವಲಂಬನೆ ತಪ್ಪಿಲ್ಲ ಎನ್ನುತ್ತಾರೆ ಸ್ಥಳೀಯರು.
ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ, ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಪ್ರದೇಶದಲ್ಲಿ ಹೊಸದಾಗಿ ಅಪಾರ್ಟ್ ಮೆಂಟ್ ಗಳು ತಲೆ ಎತ್ತುತ್ತಿವೆ. ಈ ಸಂಖ್ಯೆಯಲ್ಲಿ ಏರುತ್ತಿರುವ ವಸತಿಗಳಿಗೆ ಅಗತ್ಯ ಇರುವಷ್ಟು ನೀರು ಹಾಗೂ ಕಸ ವಿಲೇವಾರಿ, ಒಳಚರಂಡಿಯಂಥ ಮೂಲಸೌಕರ್ಯ ಒದಗಿಸಲಾಗಿದೆಯಾ ಎಂಬ ಪ್ರಶ್ನೆಗೆ ಉತ್ತರ ದೊರೆಯುವುದಿಲ್ಲ.
ಸದ್ಯಕ್ಕೆ ಇಲ್ಲಿನ ಶಾಸಕರು ಕಾಂಗ್ರೆಸ್ ನ ಎಸ್.ಟಿ.ಸೋಮಶೇಖರ್. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಜವರಾಯಿ ಗೌಡರ ವಿರುದ್ಧ (91,280 ಮತ) 30,100 ಮತಗಳ ಅಂತರದಿಂದ ವಿಜಯಿಯಾಗಿದ್ದರು. ಅದಕ್ಕೂ ಮುನ್ನ ಅಂದರೆ 2008ರಲ್ಲಿ ಇದೇ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಿ (ಪಡೆದ ಮತ 56,561) 1082 ಮತಗಳಿಂದ ಬಿಜೆಪಿಯ ಶೋಭಾ ಕರಂದ್ಲಾಜೆ ಎದುರು ಸೋತಿದ್ದರು.
ಈ ಬಾರಿ ಸೋಮಶೇಖರ್ ಕಾಂಗ್ರೆಸ್ ನಿಂದಲೇ ಕಣದಲ್ಲಿದ್ದಾರೆ. ಬಿಜೆಪಿಯಲ್ಲಿ ಮತ್ತೆ ಶೋಭಾ ಕರಂದ್ಲಾಜೆ ಹೆಸರು ಕೇಳಿಬರುತ್ತಿದೆ. ಜೆಡಿಎಸ್ ನಿಂದ ಮತ್ತೆ ಜವರಾಯಿ ಗೌಡ ಅಖಾಡದಲ್ಲಿ ಇದ್ದಾರೆ. ಇಲ್ಲಿ ಯಾರೇ ಗೆದ್ದರೂ ಮಾಡಲು ಸಾಕಷ್ಟು ಕೆಲಸಗಳಿವೆ.
ಯಶವಂತಪುರದಲ್ಲಿ ಸಾಗಿಹೋಗುವ ತುಮಕೂರು ರಸ್ತೆ ರಾತ್ರಿಯಾದರೆ ಝಗಮಗಿಸಲು, ಕಣ್ಣು ಕೋರೈಸಲು ಆರಂಭವಾಗುತ್ತದೆ. ಆದರೆ ಸತ್ಯ ಬಯಲಾಗುವುದು ವಿಧಾನಸಭಾ ಕ್ಷೇತ್ರದ ಅಂತರಂಗದಲ್ಲಿ. ಅರ್ಥಾತ್ ಇಲ್ಲಿನ ವ್ಯಾಪ್ತಿಗೆ ಬರುವ ವಾರ್ಡ್ ಗಳ ಕೆಲ ಪ್ರದೇಶ ಗಾಢಾಂಧಕಾರದಲ್ಲಿದೆ. ಇನ್ನೂ ಸಾಕಷ್ಟು ಪ್ರದೇಶ ಬಿಬಿಎಂಪಿಗೆ ಸೇರ್ಪಡೆ ಆಗಿ, ಸವಲತ್ತುಗಳನ್ನು ಪಡೆಯಲು ಹಾತೊರೆಯುತ್ತಿವೆ.
ರಿಯಲ್ ಎಸ್ಟೇಟ್ ಏರು ಮುಖವಾಗಿರುವ ಈ ವ್ಯಾಪ್ತಿಯಲ್ಲಿ ಅತಿಕ್ರಮಣ, ಖಾತೆಗಳ ಸಮಸ್ಯೆ ಕೂಡ ಅಷ್ಟೇ ಪ್ರಮಾಣದಲ್ಲಿದೆ. ಬೇಡಿಕೆಗಳ ಬಾಯಿಗೆ ಬೀಗ ಹಾಕಲು ಯಾರಿಗೆ ಸಾಧ್ಯ. ಯಶವಂತಪುರಕ್ಕೆ ಸಮಸ್ಯೆಗಳ ಬಂಧನಕ್ಕಿಂತ ಬಿಡುಗಡೆ ಅಗತ್ಯ ಇರುವಂತೆ ಕಾಣುತ್ತಿದೆ.