ಚನ್ನಪಟ್ಟಣದಿಂದ ಸ್ಪರ್ಧಿಸಲಿದ್ದಾರೆ ಅನಿತಾ ಕುಮಾರಸ್ವಾಮಿ
ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಪತ್ನಿ, ಅನಿತಾ ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಸ್ಪರ್ಧಿಸಲಿದ್ದಾರೆಂದು ಮೂಲಗಳು ತಿಳಿಸಿವೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ (2014) ಅವರು ಅಲ್ಲಿಂದಲೇ
ಬೆಂಗಳೂರು, ಜುಲೈ 4: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಕೋಡಿಶ್ರೀಗಳು ನುಡಿದ ಭವಿಷ್ಯವೇನು: ಕುಮಾರಸ್ವಾಮಿ ಮುಂದಿನ ಸಿಎಂ?
2014ರಲ್ಲಿ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದಲೇ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ, ಕೇವಲ 6 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಸಿ.ಪಿ. ಯೋಗೀಶ್ವರ್ ವಿರುದ್ಧ ಸೋಲನುಭವಿಸಿದ್ದರು. ಇದೀಗ, ಅನಿತಾ ಅವರನ್ನು ಅಲ್ಲಿಂದಲೇ ಸ್ಪರ್ಧೆಗಿಳಿಸಲು ಜೆಡಿಎಸ್ ಧುರೀಣರು ನಿರ್ಧರಿಸಿದ್ದಾರೆನ್ನಲಾಗಿದೆ.
ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ
ಹೇಳಿ ಕೇಳಿ ಚನ್ನಪಟ್ಟಣ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ಹಾಗಾಗಿ, ಅಲ್ಲಿಂದಲೇ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಇದರ ಜತೆಗೇ ಗೌಡರ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಪಕ್ಷದ ಪರವಾಗಿ ವ್ಯಾಪಕ ಪ್ರಚಾರ ನಡೆಸಲು ಜೆಡಿಎಸ್ ನಿರ್ಧರಿಸಿದೆ.
ನಿಮ್ಮ ಅಣ್ಣ, ತಮ್ಮ ಅಂದ್ಕೊಂಡು ನನಗೆ ಅಧಿಕಾರ ಕೊಡಿ: ಎಚ್ ಡಿಕೆ ಮನವಿ
ಮನೆ ಹುಡುಕಾಟದಲ್ಲಿ ಜೆಡಿಎಸ್ ನಾಯಕರು
ಹಳೇ ಮೈಸೂರಿನಲ್ಲಿ ತಮ್ಮ ಪಕ್ಷಕ್ಕೆ ಇರುವ ಒಕ್ಕಲಿಗರ ಬೆಂಬಲವನ್ನು ಆದಷ್ಟು ತನ್ನ ಪಕ್ಷದ ಒಳಿತಿಗೇ ಬಳಸಿಕೊಳ್ಳಲು ಜೆಡಿಎಸ್ ನಾಯಕರು ನಿರ್ಧರಿಸಿದ್ದು ಅಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೀಟುಗಳನ್ನು ಗೆಲ್ಲಲು ನಿರ್ಧರಿಸಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ, ಅನಿತಾ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಿಂದ ಸ್ಪರ್ಧೆಗಳಿಸಲು ನಿರ್ಧರಿಸಲಾಗಿದೆ.
ಈ ಬಾರಿ ಹೊಸ ಕಾರ್ಯತಂತ್ರ?
2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು 73, 635 ಮತ ಗಳಿಸಿದ್ದರೆ, ಸಿ.ಪಿ. ಯೋಗೇಶ್ವರ್ ಅವರು 80, 099 ಮತ ಗಳಿಸಿ ವಿಜಯಿಯಾಗಿದ್ದರು. ಕೇವಲ 6, 464 ಮತಗಳ ಅಂತರದಿಂದ ಅನಿತಾ ಅವರು ಸೋಲು ಕಾಣಬೇಕಾಯಿತು. ಹಾಗಾಗಿ, ಆ ಸೋಲನ್ನು ಆಕಸ್ಮಿಕವೆಂದು ಪರಿಗಣಿಸಿ ಈ ಬಾರಿ ಮತ್ತೆ ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿಕೊಂಡು ಅನಿತಾ ಅವರನ್ನು ಗೆಲ್ಲಿಸುವ ಕನಸು ಕಾಣುತ್ತಿದೆ ಎಂದು ಹೇಳಲಾಗಿದೆ.
ಜೆಡಿಎಸ್ ವರಿಷ್ಠರ ಲೆಕ್ಕಾಚಾರವೇನು?
ಹಳೆ ಮೈಸೂರು ಪ್ರಾಂತ್ಯ ಜೆಡಿಎಸ್ ನ ಗಟ್ಟಿ ನೆಲೆ. ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಜೆಡಿಎಸ್ ಇಲ್ಲೇ ಹೆಚ್ಚು ಸೇಫ್. ಕರಾವಳಿ ಭಾಗದಲ್ಲಂತೂ ಜೆಡಿಎಸ್ ಗೆ ನೆಲೆಯಿಲ್ಲ. ಉತ್ತರ ಕರ್ನಾಟಕದ ಕಡೆಗೆ ಜೆಡಿಎಸ್ ಪರವಾಗಿ ಕೊಂಚ ಜನಾಭಿಮಾನವಿದೆ. ಆದರೆ, ಆ ಅಭಿಮಾನ ಮತಗಳಾಗಿ ಬದಲಾಗುತ್ತವೆಂಬ ಖಾತ್ರಿಯಿಲ್ಲ.
ಖಾತ್ರಿ ಇರುವ ಕಡೆ ಖಾತ್ರಿ ಅಭ್ಯರ್ಥಿಗಳೇ ಕಣಕ್ಕೆ!
ಹಾಗಾಗಿ, ಹಳೇ ಮೈಸೂರು ಪ್ರಾಂತ್ಯದಲ್ಲೇ ಅದರಲ್ಲೂ ಗೌಡರ ಪ್ರಾಬಲ್ಯ ಹೆಚ್ಚಾಗಿರುವ ಪ್ರಾಂತ್ಯಗಳಲ್ಲೇ ತಾನು ಹೆಚ್ಚು ಸೀಟುಗಳನ್ನು ಗೆಲ್ಲಬೇಕೆಂಬ ಇಚ್ಛೆ ಜೆಡಿಎಸ್ ಗೆ ಇದೆ. ಹಾಗಾಗಿ, ಅದು ಕಣಕ್ಕಿಳಿಸಲು ಆರಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ಮಹತ್ವವಾದ ವ್ಯಕ್ತಿಗಳೇ ಆಗಿರಬೇಕು. ಅವರನ್ನು ಕಣಕ್ಕಿಳಿಸುವ ಕ್ಷೇತ್ರವೂ ಗೆಲುವಿಗೆ ಸಹಕಾರಿಯಾಗಿರಬೇಕು ಎಂಬ ಲೆಕ್ಕಾಚಾರದಲ್ಲೇ ಈಗ ಅನಿತಾ ಕುಮಾರಸ್ವಾಮಿಯವರನ್ನು ಚನ್ನಪಟ್ಟಣದಿಂದ ಸ್ಪರ್ಧಿಸುವಂತೆ ಮಾಡಲು ಜೆಡಿಎಸ್ ನಿರ್ಧರಿಸಿದೆ.