ಜೂನ್ 4ರಂದು ಕಸದ ತೊಟ್ಟಿಯಾಗಲಿದೆ ಬಿಬಿಎಂಪಿ
ಬೆಂಗಳೂರು, ಜೂನ್ 02 : ಕಸದ ಸಮಸ್ಯೆಯನ್ನು ಬಗೆಹರಿಸಲು 21 ದಿನಗಳ ಗಡುವು ನೀಡಿದ್ದರೂ, ನಿದ್ದೆಯಿಂದ ಎಚ್ಚೆತ್ತುಕೊಳ್ಳದ, ಪರಿಹಾರ ಕಂಡುಹಿಡಿಯದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ಕರ್ನಾಟಕ ಆಮ್ ಆದ್ಮಿ ಪಕ್ಷ 'ಕಸದ ನಡಿಗೆ - ಬಿಬಿಎಂಪಿ ಕಡೆಗೆ' ಎಂಬ ಅಭಿಯಾನವನ್ನು ಜೂನ್ 4ರಂದು ಹಮ್ಮಿಕೊಂಡಿದೆ.
ಶನಿವಾರ, 4ನೇ ಜೂನ್ 2016 ಬೆಳಿಗ್ಗೆ ನಗರದ ಟೌನ್ ಹಾಲ್ ನಿಂದ ಪ್ರಾರಂಭವಾಗಲಿರುವ ಈ "ಕಸದ ನಡಿಗೆ - ಬಿಬಿಎಂಪಿ ಕಡೆಗೆ" ಅಭಿಯಾನಕ್ಕೆ ಕಸದಿಂದ ಬೇಸತ್ತ ಬೆಂಗಳೂರು ನಗರ ಮಹಾಜನರು ತಮ್ಮ ತಮ್ಮ ಮನೆಯ ಕಸದೊಂದಿಗೆ ಬಂದು ನಮ್ಮೊಂದಿಗೆ ಸೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.
ಬೆಂಗಳೂರು ನಗರದ ಕಸದಿಂದ ಭಾದಿತರಾಗಿರುವ ಮಂಡೂರು ಗ್ರಾಮದ ಜನರೂ ಸಹ ಬಿಬಿಎಂಪಿ ಆವರಣವನ್ನು ಕಸದ ಸ್ಮಶಾನವನ್ನಾಗಿಸುವ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಗಲಾದರೂ ನಗರದ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿ ಇರಬೇಕಾದ ಆಡಳಿತ ಎಚ್ಚರಗೊಳಬಹುದೆ ಎಂದು ಆಮ್ ಆದ್ಮಿ ಪಾರ್ಟಿ ಆಶಿಸಿದೆ. [ಬೆಂಗಳೂರಿಗರೇ, ದಾರಿಯಲ್ಲಿ ಕಸ ಕಂಡ್ರೆ ಸೆಲ್ಫಿ ತಗೊಳ್ಳಿ!]
ಕಳೆದ ಮೇ 3ರಂದು ಪಾಲಿಕೆಗೆ 21 ದಿನದ ಗಡುವು ನೀಡಿ "ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ಇಲ್ಲದಿದ್ದಲ್ಲಿ ಪಾಲಿಕೆಯ ಮುಖ್ಯ ಕಛೇರಿಯನ್ನು ಕಸದ ತೊಟ್ಟಿಯನ್ನಾಗಿ ಮಾರ್ಪಡಿಸುತ್ತೇವೆ" ಎಂಬ ಎಚ್ಚರಿಕೆ ನೀಡಿತ್ತು.
ಕೆಳಗಿನ ಸರಳ ಕ್ರಮ ತೆಗೆದೆಕೊಳ್ಳಲು ಆಮ್ ಆದ್ಮಿ ಪಕ್ಷ ಸಲಹೆ ನೀಡಿತ್ತು
1. ಬಿಬಿಎಂಪಿ ಈ ಕೂಡಲೇ ಪ್ರತಿ ವಾರ್ಡಿಗೂ ಸಾಕಷ್ಟು ಪೌರಕಾರ್ಮಿಕರು ಮತ್ತು ಅವರಿಗೆ ಸಮರ್ಪಕವಾಗಿ ಹಾಗೂ ಸುರಕ್ಷಿತವಾಗಿ ಕೆಲಸಮಾಡಲು ಬೇಕಾದ ಸಾಮಗ್ರಿಗಳನ್ನು ನಿಯೋಜಿಸಬೇಕು.
2. ಕಸ ವಿಲೇವಾರಿಯನ್ನು ಸುಗಮಗೊಳಿಸಲು ಪ್ರತಿ ವಾರ್ಡಿಗೂ ಕಸ ಸಾಗಿಸಲು ಅಗತ್ಯವಾದಷ್ಟು ಸಣ್ಣ ವಾಹನಗಳನ್ನು ಒದಗಿದಬೇಕು.
3. ಬಿಬಿಎಂಪಿ ಈ ಕೂಡಲೇ ವಾರ್ಡಿಗೆ ಎರಡು ಅಥವಾ ಅಧಿಕ ಕಸ ವಿಂಗಡಿಸುವ ಕೇಂದ್ರಗಳನ್ನು ಸ್ಥಾಪಿಸಬೇಕು. ಅಗತ್ಯಗೆ ತಕ್ಕಂತೆ ಹೆಚ್ಚು ಜನಸಾಂದ್ರತೆ ಇರುವ ವಾರ್ಡ್ಗಳನ್ನು 15,000 ಜನರಿಗೆ ಒಂದರಂತೆ ಕಸ ವಿಂಗಡಣೆ ಕೇಂದ್ರಗಳನ್ನು ಸ್ಥಾಪಿಸಬೇಕು.
4. ಅವಶ್ಯಕವಾದ ಅನುದಾನ ನೀಡಿ, ಹಸಿ ಕಸದಿಂದ ಜೈವಿಕಗೊಬ್ಬರ ತಯಾರಿಕೆಗೆ ಬೇಕಾದ ಸಂಪನ್ಮೂಲವುಳ್ಳ ಕೇಂದ್ರಗಳನ್ನು ಸ್ಥಾಪಿಸಲು ಕೆ.ಎಸ್.ಡಿ.ಸಿ.ಯ ಪುನರುಜ್ಜೀವೀಕರಣ ಮಾಡಬೇಕು. [ಬೆಂಗಳೂರು : ತ್ಯಾಜ್ಯ ವಿಂಗಡನೆ ಕಡ್ಡಾಯ, ತಪ್ಪಿದರೆ ದಂಡ]
ಈ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಬಿಬಿಎಂಪಿ ಆಯುಕ್ತರಾದ ಮಂಜುನಾಥ ಪ್ರಸಾದ್, ಬೆಂಗಳೂರಿನ ಮಹಾಪೌರರಾದ ಮಂಜುನಾಥ ರೆಡ್ಡಿ ಮತ್ತು ಬೆಂಗಳೂರಿನ ಅಭಿವೃದ್ಧಿ ಮಂತ್ರಿಗಳಾದ ಕೆ.ಜೆ.ಜಾರ್ಜ್ ಅವರಿಗೆ ಕಳುಹಿಸಿದ್ದರೂ ಸಹ ಯಾರೂ ನಿದ್ದೆಯಿಂದ ಎಚ್ಚೆತ್ತಿಲ್ಲ.
ಕಸದ ರಾಶಿಯ ನಡುವೆ ಜೀವನ ಮಾಡುತ್ತಿರುವ ಬೆಂಗಳೂರು ನಗರ ನಿವಾಸಿಗಳ ಕಷ್ಟ ಏನು ಎಂಬ ಅರಿವು ಮೂಡಿಸಲು ಮತ್ತು ಪಾಲಿಕೆಯ ಅಸಡ್ಡೆಯ ವರ್ತನೆಯ ವಿರುದ್ಧ ಸಮರ ಸಾರಿ, ನಗರದ ಕಸವನ್ನು ಸಂಗ್ರಹಿಸಿ ಬಿಬಿಎಂಪಿಯ ಪಾಲಿಕೆ ಕಛೇರಿಯ ಆವರಣದಲ್ಲಿ ಸುರಿಯುವ ಕೆಲಸ ಆಮ್ ಆದ್ಮಿ ಪಾರ್ಟಿ ಮಾಡಲಿದೆ.