ಕನ್ನಡಿಗರಿಗೆ ಕಡ್ಡಾಯ ಉದ್ಯೋಗ: ಕರವೇ ಟ್ವಿಟ್ಟರ್ ಅಭಿಯಾನ
ಬೆಂಗಳೂರು, ಡಿಸೆಂಬರ್ 21 : ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ. ನಾರಾಯಣ ಗೌಡ ಬಣ) ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕೆ ಬೆಂಬಲವಾಗಿ ಡಿಸೆಂಬರ್ 22 ರಂದು ಟ್ವಿಟ್ಟರ್ ಅಭಿಯಾನವನ್ನು ಆಯೋಜಿಸಿದೆ.
#ಕರವೇ_ಹಕ್ಕೊತ್ತಾಯ, # ಕನ್ನಡಿಗರಿಗೆ_ಉದ್ಯೋಗ ಎರಡು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಬಹುದು ಎಂದು ತಿಳಿಸಿದ್ದಾರೆ. ಶುಕ್ರವಾರ 12 ಗಂಟೆಗೆ ಟ್ವಿಟ್ಟರ್ ಅಭಿಯಾನ ಪ್ರಾರಂಭವಾಗಲಿದೆ. ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಡಿಸೆಂಬರ್ 23ರಂದು ಪ್ರತಿಭಟನೆ ನಡೆಯಲಿದ್ದು, ಬೆಳಿಗ್ಗೆ 11 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ವಿಧಾನಸೌಧದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಕರವೇ ಸದಸ್ಯರು ಮಾಡಲಿದ್ದಾರೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯದ ನಾನಾ ಕಡೆಗಳಿಂದ ಪ್ರತಿಭಟನಾಕಾರರು ಭಾಗವಹಿಸಲಿದ್ದಾರೆ.
ರಾಜ್ಯಸರ್ಕಾರದ ಎಲ್ಲ ಇಲಾಖೆಗಳು ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳನ್ನೇ ಉದ್ಯೋಗಕ್ಕಾಗಿ ಆಯ್ಕೆ ಮಾಡಬೇಕು. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಕೇಂದ್ರ ಸರ್ಕಾರಿ ಇಲಾಖಾ ಕಚೇರಿಗಳು ಕೇಂದ್ರ ಸರ್ಕಾರಿ ಸಾಮ್ಯದ ಎಲ್ಲ ಉದ್ದಿಮೆಗಳಲ್ಲಿ ಕಡ್ಡಾಯವಾಗಿ ಕನಿಷ್ಠ 10ನೇ ತರಗತಿಯ ವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ವ್ಯಾಸಾಂಗ ಮಾಡಿದ ಕರ್ನಾಟಕದ ಅಭ್ಯರ್ಥಿಗಳನ್ನೇ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಬೇಕು.
ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಬಗೆಯ ಖಾಸಗಿ ಉದ್ದಿಮೆಗಳು ಕನಿಷ್ಠ 10ನೇ ತರಗತಿಯ ವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ವ್ಯಾಸಾಂಗ ಮಾಡಿದ ಕರ್ನಾಟಕದ ಅಭ್ಯರ್ಥಿಗಳನ್ನೇ ಉದ್ಯೋಗಕ್ಕಾಗಿ ನೇಮಕ ಮಾಡಿಕೊಳ್ಳಬೇಕು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕು ಹಾಗೂ ಕನ್ನಡದಲ್ಲಿಯೇ ಉತ್ತರಿಸಲು ಅವಕಾಶ ಇರಬೇಕು. ಅವುಗಳ ಸಂದರ್ಶನಗಳೂ ಕನ್ನಡದಲ್ಲಿಯೇ ನಡೆಯಬೇಕು ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಿ ಟ್ವಿಟ್ಟರ್ ಅಭಿಯಾನ ಹಾಗೂ ಪ್ರತಿಭಟನೆ ಹಮ್ಮಿಕೊಂಡಿದೆ.