ಹಾಯ್ ಬೆಂಗಳೂರನ್ನು ಮುಚ್ಚಲಿದ್ದಾರೆ ರವಿ, ಕಾರಣಗಳು 5
Recommended Video
ಬೆಂಗಳೂರು, ಸೆಪ್ಟೆಂಬರ್ 27: "ನನ್ನ ಜೀವನಕ್ಕೆ ತಿರುವು ಕೊಟ್ಟ, ನನ್ನನ್ನು ಸಾಕಿ-ಸಲುಹಿದ, ಅಪಾರ ಅಭಿಮಾನಿಗಳನ್ನು ಸೃಷ್ಟಿಸಿದ ಕಪ್ಪು ಸುಂದರಿ 'ಹಾಯ್ ಬೆಂಗಳೂರ್!' ಪತ್ರಿಕೆಯನ್ನು ನಿಲ್ಲಿಸುವುದಕ್ಕೆ ನಿರ್ಧಾರ ಮಾಡಿದ್ದೀನಿ!"
ಹೀಗೆಂದು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಹೇಳುವಾಗ ಅವರ ಕೊರಳುಬ್ಬಿಬಂದಿತ್ತು, ಏನನ್ನೋ ಕಳೆದುಕೊಳ್ಳುತ್ತಿದ್ದೀನಲ್ಲ ಎಂಬ ಗಾಢವಾದ ಭಾವ ಅವರ ಕಣ್ಣುಗಳಲ್ಲಿ ಮನೆಮಾಡಿತ್ತು. ಇನ್ನು, ಕಳೆದ 22 ವರ್ಷಗಳಿಂದ ಪ್ರತಿವಾರ ಈ ಪತ್ರಿಕೆಗಾಗಿ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಏನಾಗಬೇಡ?
ಪತ್ರಿಕೆ ನಿಲ್ಲಿಸಲಿರುವ ರವಿ ಬೆಳಗೆರೆ ಮುಂದಿನ ನಡೆಗಳೇನು?
ಮೊನ್ನೆ ಸೆಪ್ಟೆಂಬರ್ 25ಕ್ಕೆ ಇಪ್ಪತ್ತೆರಡು ವರ್ಷ ಪೂರೈಸಿದ 'ಹಾಯ್ ಬೆಂಗಳೂರ್!' ವಾರಪತ್ರಿಕೆಯನ್ನು ನಿಲ್ಲಿಸುವ ಮಾತನಾಡಿದ್ದಾರೆ ಐವತ್ತೊಂಬತ್ತು ವರ್ಷದ ಹಿರಿಯ ಪತ್ರಕರ್ತ ರವಿ ಬೆಳಗೆರೆ. "ಆದರೆ ಓ ಮನಸೇ ಮುಂದುವರಿಸಿಕೊಂಡು ಹೋಗ್ತೀನಿ" ಎಂಬ ಮಾತು ಹೇಳಿ ಓದುಗರಿಗೆ ಸಮಾಧಾನವನ್ನೂ ತಂದಿದ್ದಾರೆ.
'ಒನ್ಇಂಡಿಯಾ ಕನ್ನಡ'ಕ್ಕೆ ಬುಧವಾರ ಸಂದರ್ಶನ ನೀಡಿದ ಅವರು, ಈ ವಿಚಾರವನ್ನು ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ 'ಹಾಯ್ ಬೆಂಗಳೂರ್!' ಪತ್ರಿಕೆಯ ಆರಂಭದ ದಿನದಲ್ಲಿ ತಮ್ಮ ಜತೆಗೆ ನಿಂತವರು, ಬಡಿದಾಡಿದವರು, ಸಹಾಯ ಮಾಡಿದವರನ್ನು ನೆನಪಿಸಿಕೊಳ್ಳಲು ಅವರು ಮರೆಯಲಿಲ್ಲ. ಇನ್ನು ಗಾಂಧಿ ಬಜಾರ್ ನಲ್ಲಿ ಆರಂಭವಾಗಿದ್ದ ಅವರ ಒಡೆತನದ ಬೆಳಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಾರಾಟ ಮಳಿಗೆ ಕೂಡ ಮುಚ್ಚಲು ನಿರ್ಧಾರ ಮಾಡಿದ್ದಾರೆ. ಅಲ್ಲಿಗೆ, ಬುಕ್ಕೂ ಇಲ್ಲ ಅರ್ಧ ಕಾಫಿಯೂ ಇಲ್ಲ!
ಗೌರಿ ಲಂಕೇಶ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ರವಿ ಬೆಳಗೆರೆ
ಬಿಬಿಸಿ ನೋಡಿಕೊಳ್ಳುವವರು ಯಾರೂ ಇಲ್ಲ. ಜತೆಗೆ ಅಲ್ಲಿನ ದುಬಾರಿ ಬಾಡಿಗೆ ಕೊಟ್ಟು ನಡೆಸುವುದು ಕಷ್ಟವಾಗಿರುವುದರಿಂದ ಮಳಿಗೆ ಮುಚ್ಚಲು ತೀರ್ಮಾನಿಸಿದ್ದೀನಿ ಎಂದರು.
ಅಮಾವಾಸ್ಯೆ ರಕ್ತಾಕ್ಷಿ ಕಾಟದಿಂದ ಮುಕ್ತಿ ಕೊಡಿಸಿ!
ಅವರು ಏಕಾಏಕಿ ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪತ್ರಿಕೆ ಮುಚ್ಚುವ ನಿರ್ಧಾರಕ್ಕೆ ಐದು ಕಾರಣಗಳು ಇಲ್ಲಿವೆ. 'ಹಾಯ್ ಬೆಂಗಳೂರ್!' ವಾರಪತ್ರಿಕೆಯನ್ನು ನಿಲ್ಲಿಸಿದ ನಂತರ ಏನು ಮಾಡಬೇಕು ಎಂಬ ಬಗ್ಗೆ ಕೂಡ ಅವರಿಗೆ ಕೆಲವು ಆಯ್ಕೆಗಳನ್ನು ಇಟ್ಟುಕೊಂಡಿದ್ದಾರೆ. ಅದನ್ನು ತಿಳಿದುಕೊಳ್ಳುವ ಮುನ್ನ ಪತ್ರಿಕೆ ನಿಲ್ಲಿಸುವ ಹಿಂದಿನ 5 ಕಾರಣಗಳನ್ನು ರವಿ ಬೆಳಗೆರೆ ತಿಳಿಸಿರುವುದು ಇಲ್ಲಿವೆ, ಓದಿಕೊಂಡುಬಿಡಿ.
ತೂಕವಾದದ್ದನ್ನು, ಮನಸಿಗೆ ತಾಕುವಂಥದ್ದನ್ನು ಬರೆಯಬೇಕು
ಈ ವರ್ಷದ ಮಾರ್ಚ್ ಹದಿನೈದಕ್ಕೆ ನನಗೆ ಅರವತ್ತು ವರ್ಷ ತುಂಬುತ್ತದೆ. ಬೀದರ್ ನಲ್ಲಿ ಯಾರೋ ಹತ್ತು ರುಪಾಯಿ ದುಡ್ಡು ತಿಂದ ಅನ್ನೋವಂಥದ್ದನ್ನೇ ಎಷ್ಟು ವರ್ಷ ಬರೆದುಕೊಂಡು ಕೂತುಕೊಳ್ಳಲಿ? ತುಂಬ ತೂಕವಾದದ್ದನ್ನು, ಮನಸ್ಸಿಗೆ ತಾಕುವುದನ್ನು ಬರೆಯಬೇಕಿದೆ.
ತಂದಿಟ್ಟುಕೊಂಡ ಪುಸ್ತಕ ಓದುವುದಕ್ಕೇ ನೂರೈವತ್ತು ವರ್ಷ
ನಾನು ತಂದಿಟ್ಟುಕೊಂಡ ಪುಸ್ತಕಗಳನ್ನು ಓದುವುದಕ್ಕೇ ನೂರೈವತ್ತು ವರ್ಷ ಸಮಯ ಬೇಕು. ಜತೆಗೆ ನನಗೆ ಸಂಗೀತ ಅಂದರೆ ಅಚ್ಚುಮೆಚ್ಚು. ಅದರಲ್ಲೂ ಸಿನಿಮಾ ಸಂಗೀತ ಕೇಳಬೇಕು. ಇವೆಲ್ಲದರ ಜತೆಗೆ ಅನುವಾದ ಮಾಡುವುದಕ್ಕೆ ಅಂತಲೇ ಹಕ್ಕುಗಳನ್ನು ತಂದ ಪುಸ್ತಕಗಳು ಸಾಕಷ್ಟಿವೆ. ಅವುಗಳ ಅನುವಾದ ಮಾಡಬೇಕು.
ಓ ಮನಸೇಗೆ ಸಮಯ ಕೊಡಬೇಕು
ನನ್ನ ಮನಸಿಗೆ ತುಂಬ ಹತ್ತಿರವಾದ ಓ ಮನಸೇ ಮುಂದುವರಿಸಿಕೊಂಡು ಹೋಗಬೇಕು. ಅದಕ್ಕೆ ನನ್ನ ಮಗಳು ಭಾವನಾ ಮುಂದೆ ಬಂದಿದ್ದಾಳೆ. ಅದಕ್ಕೆ ಅಂತ ಸಮಯವನ್ನು ಮೀಸಲಾಗಿಡಬೇಕು.
ಮೊಮ್ಮಕ್ಕಳ ಜತೆ ಆಟವಾಡಬೇಕು
ನನ್ನ ಮಕ್ಕಳ ಜತೆಗೆ ಹಾಗೂ ಮೊಮ್ಮಕ್ಕಳ ಜತೆಗೆ ಸಮಯ ಕಳೆಯಬೇಕಿದೆ. ಮೊಮ್ಮಕ್ಕಳ ಜತೆಗೆ ಆಟವಾಡಬೇಕು. ನನ್ನ ಪ್ರೀತಿಯ ಶಾಲೆ ಪ್ರಾರ್ಥನಾ ಬೆಳೆದು ನಿಂತಿದೆ. ಅಲ್ಲಿನ ಮಕ್ಕಳು ನಮ್ಮ ಮನೆಯ ಮಕ್ಕಳಿದ್ದ ಹಾಗೇ. ಅವರ ಕಡೆ ಕಾಳಜಿ ವಹಿಸಬೇಕು.
ಓದುಗರಿಗೆ ಇನ್ನು ಹೆಚ್ಚಿನದನ್ನು ಕೊಡಬೇಕು
ನಾನು ಪತ್ರಿಕೋದ್ಯಮದ ಮುಖ್ಯವಾಹಿನಿಗೆ ಬಂದು ಇಪ್ಪತ್ತು-ಇಪ್ಪತ್ತೈದು ವರ್ಷವಾಗಿದೆ. 89 ಪುಸ್ತಕ ಬರೆದಿದ್ದೀನಿ. ಭಾವನ ಪ್ರಕಾಶನ ತುಂಬ ಚೆನ್ನಾಗಿದೆ. ಕಳೆದ ಹದಿನೈದು ವರ್ಷ I ruled it. ಈ ನಾಡಿಗೆ ನಿನ್ನ ಕೊಡುಗೆ ಏನು ಅಂತ ಕೇಳಿದರೆ, ಕನ್ನಡ ಪುಸ್ತಕಗಳನ್ನು ದೊಡ್ಡ ವರ್ಗಕ್ಕೆ ಓದುವುದನ್ನು ಅಭ್ಯಾಸ ಮಾಡಿಸಿದೆ ಅಂತ ಧೈರ್ಯವಾಗಿ ಹೇಳಬಹುದು. ಈ ಓದುಗರಿಗೆ ಇನ್ನೂ ಹೆಚ್ಚಿನದನ್ನು ಕೊಡುವುದಕ್ಕೆ ಅಂತಲೇ ಸಮಯ ಮೀಸಲಿಡಬೇಕು ಅಂತ ಈ ನಿರ್ಧಾರ ಮಾಡಿದ್ದೇನೆ.