ಐಟಿ ದಿಗ್ಗಜ ಫಿಲಿಪ್ಸ್ ಸಂಸ್ಥೆಯಲ್ಲಿ ಕನ್ನಡದ ಕಹಳೆ
ಬೆಂಗಳೂರು, ನವೆಂಬರ್ 05 : ಫಿಲಿಪ್ಸ್ ಸಂಸ್ಥೆಯ ಬೆಂಗಳೂರಿನ ಆವರಣ, ಫಿಲಿಪ್ಸ್ ಇನ್ನೋವೇಷನ್ ಕ್ಯಾಂಪಸ್ ನಲ್ಲಿ ಮೊನ್ನೆ ನವೆಂಬರ್ 3ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಹುರಾಷ್ಟ್ರೀಯ ಐಟಿ ಕ್ಷೇತ್ರದ ದಿಗ್ಗಜ ಸಂಸ್ಥೆ ಫಿಲಿಪ್ಸ್ ಇಂಡಿಯಾದಲ್ಲಿ ಮೊದಲ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಐಟಿ ಕ್ಷೇತ್ರದವರೇ ಆದ ವಸಂತ್ ಶೆಟ್ಟಿ ಹಾಗು ಫಿಲಿಪ್ಸ್ ಇನ್ನೋವೇಷನ್ ಕ್ಯಾಂಪಸ್ ನ ಮುಖ್ಯಸ್ಥರು ಆದ ಶ್ರೀನಿವಾಸ್ ಪ್ರಸಾದ್ ರವರುಗಳು ಮುಖ್ಯ ಅತಿಥಿಗಳಾಗಿದ್ದರು.
ವಿಶೇಷ ಕನ್ನಡಿಗ: ಬಿಎಂಟಿಸಿ ನಿರ್ವಾಹಕ ಚಂದ್ರೇಗೌಡ
ಕಾರ್ಯಕ್ರಮದ ವಿಶೇಷಗಳಲ್ಲಿ, ಬಂಗಾಳದ ಯುವತಿಯೊಬ್ಬರು, "ಕನ್ನಡ ನಾಡಿನ ಜೀವನದಿ ಕಾವೇರಿ" ಹಾಡನ್ನು ಹಾದಿ ರಂಜಿಸಿದ್ದು, ಮತ್ತೋರ್ವ ಬಿಹಾರ ಮೂಲದ ಯುವಕ ಸಂಸ್ಥೆಯ ಕನ್ನಡಿಗರು ನಡೆಸುವ ಕನ್ನಡ ಕಲಿ, ನಲಿ ಕಾರ್ಯಕ್ರಮದಲ್ಲಿ ಕನ್ನಡ ಕಲಿತು ಸುಲಲಿತವಾಗಿ ಕನ್ನಡದಲ್ಲೇ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಕನ್ನಡಿಗರು, ಕನ್ನಡೇತರರು ಕನ್ನಡ ಹಾಡುಗಳಿಗೆ ಹೆಜ್ಜೆಹಾಕಿದ್ದು, ಹಾಸ್ಯ, ಸಂಗೀತ, ರಾಜ್ಯೋತ್ಸವಕ್ಕಾಗಿಯೇ ಸಂಸ್ಥೆಯ ಪ್ರತಿಭೆ - ಗೀತಸಾಹಿತಿ ವೆಂಕಟೇಶ್ ಕುಲ್ಕರ್ಣಿಯವರು ಬರೆದ ಹಾಡನ್ನು ಕನ್ನಡಗಿಗರಿಗೆ ಸಮರ್ಪಿಸಿದ್ದು ಹಾಗು ಮುಖ್ಯ ಅಥಿತಿಗಳಿಬ್ಬರ ಭಾಷಣ ಬಹಳ ಅರ್ಥಪೂರ್ಣವಾಗಿತ್ತು.
ಸಭೆಗೆ, ಅಥಿತಿಗಳಿಬ್ಬರ ಪರಿಚಯವನ್ನು, ಅವರಿಬ್ಬರ ವಿಶೇಷತೆಗಳನ್ನು ಸಂಸ್ಥೆಯ ಕನ್ನಡ ಸಂಘದಲ್ಲೊಬ್ಬರಾದ ಹಾಗು ಐಟಿ ಕನ್ನಡಿಗರ ಕೂಟದ ಕಿರಣ್ ಕುಮಾರ್ ಕೆ ಎಸ್ ಮಾಡಿಕೊಟ್ಟರು.
ವಸಂತ್ ಶೆಟ್ಟಿ ಯವರ ಭಾಷಣದ ಪ್ರಮುಖ ಅಂಶಗಳು:
ಐಟಿ ಕನ್ನಡಿಗರಿಗೆ ಮೂರು ಶಕ್ತಿಗಳಿವೆ.
1. ಗ್ರಾಹಕನಾಗಿ ಕೊಳ್ಳುವ ಶಕ್ತಿ ಹೆಚ್ಚಿರುವುದರಿಂದ ಅದನ್ನೇ ಬಳಸಿ ಕನ್ನಡದಲ್ಲಿ ಗ್ರಾಹಕ ಸೇವೆಗೆ ಒತ್ತಾಯಿಸುವ ಮೂಲಕ ಮಾರುಕಟ್ಟೆಯಲ್ಲಿ ಕನ್ನಡವನ್ನು ಗಟ್ಟಿಗೊಳಿಸುವುದು.
2. ತಂತ್ರಜ್ಞಾನದ ಅರಿವು ಇರುವುದರಿಂದ ಕನ್ನಡವನ್ನು ತಂತ್ರಜ್ಞಾನಕ್ಕೆ ಒಗ್ಗಿಸುವ ಅನೇಕ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಮತ್ತು ಆ ಮೂಲಕ ಕನ್ನಡವೊಂದೇ ಬಲ್ಲವರಿಗೂ ನಮಗೆ ದಕ್ಕಿರುವ ತಂತ್ರಜ್ಞಾನದ ಸಾಧ್ಯತೆಗಳು ಸಿಗುವಂತೆ ಮಾಡುವುದು.
3. ನಮ್ಮ ನಮ್ಮ ಮನೆಗಳಲ್ಲಿ ಐಟಿ ಉದ್ಯೋಗದಲ್ಲಿರುವವರ ಬಗ್ಗೆ ನಮಗಿಂತ ಕಿರಿಯರಲ್ಲಿ, ಮಕ್ಕಳಲ್ಲಿ ಒಂದು ರೀತಿಯ ಅನುಕರಣೆ ಮಾಡುವ ಗುಣವಿದೆ. ಅದನ್ನು ಗಮನಿಸಿದಾಗ ನಮ್ಮ ದಿನ ನಿತ್ಯದ ಜೀವನದಲ್ಲಿ ಕನ್ನಡ ಹೆಚ್ಚು ಬಳಸುವ ಮೂಲಕ ಅವರಲ್ಲೂ ಒಂದಿಷ್ಟು ಬದಲಾವಣೆ ತರಬಹುದು. ಈ ರೀತಿ ಆಚರಣೆಗಳು ಎಲ್ಲೆಡೆ ನಡೆದಷ್ಟು ಬೆಂಗಳೂರಲ್ಲಿ ಕನ್ನಡ ಇನ್ನಷ್ಟು ಗಟ್ಟಿಗೊಳ್ಳುತ್ತೆ.
ಫಿಲಿಪ್ಸ್ ಇನ್ನೋವೇಷನ್ ಕ್ಯಾಂಪಸ್ ನ ಮುಖ್ಯಸ್ಥರು ಆದ ಶ್ರೀನಿವಾಸ್ ಪ್ರಸಾದ್ ರವರು ಮೂಲತಃ ಕ್ರಿಕೆಟಿಗರು. 8-9 ವರ್ಷಗಳ ಕಾಲ ಕರ್ನಾಟಕ ತಂಡವನ್ನು, ಭಾರತ ಎ ತಂಡವನ್ನು ಪ್ರತಿನಿಧಿಸಿದ್ದವರು. ನಂತರದ 30 ವರ್ಷಗಳು ಐಟಿ ಕ್ಷೇತ್ರದಲ್ಲಿ ಸುದೀರ್ಘವಾದ ಅನುಭವವಿದ್ದು, ಸದ್ಯ ಫಿಲಿಪ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ಅವರು ತಮ್ಮ ಭಾಷಣದಲ್ಲಿ ತಮ್ಮ ಕ್ರೀಡಾ ಲೋಕದ ಅನುಭವವನ್ನು ಹಂಚಿಕೊಳ್ಳಲು ಮರೆಯಲಿಲ್ಲ. ಕನ್ನಡಿಗರನ್ನು, ಕರ್ನಾಟಕವನ್ನು ಪ್ರತಿನಿಧಿಸಿದ ಹೆಮ್ಮೆಯ ಕನ್ನಡಿಗ ನಾನೆಂದು ತಿಳಿಸಿದರು.
ಕಾರ್ಯಕ್ರಮದ ರೂವಾರಿಗಳಾದ ವಿನಯ್, ಮಣಿಕಂಠ, ಪ್ರದೀಪ್, ಸಂತೋಷ್, ಭಾರ್ಗವ, ಶೈಲೇಂದ್ರ, ಸಂತೋಷ್, ಮದನ್, ಸತೀಶ್ ರಾಟೆ, ಗುರು, ಮಂದಾರ, ನಿಖಿಲೇಶ್, ಕಿರಣ್, ಶ್ರೀನಿವಾಸ ಎಲ್ಲರನ್ನು ಸಂಸ್ಥೆಯ ಮುಖ್ಯಸ್ಥರು ಹಾಗು ಎಚ್ಆರ್ ಮುಖ್ಯಸ್ಥರಾದ ದೀಪಕ್ ಶೆಟ್ಟಿಯವರು ಅಭಿನಂದಿಸಿದರು.