ಅಜಾತಶತ್ರು ಅಜರಾಮರ: ಕನ್ನಡ ದಿನಪತ್ರಿಕೆಗಳು ಕಂಡಂತೆ ವಾಜಪೇಯಿ
ಬೆಂಗಳೂರು, ಆಗಸ್ಟ್ 17: 'ಅಜಾತಶತ್ರು ಅಜರಾಮರ' ಇದು ವಿಜಯವಾಣಿ ಪತ್ರಿಕೆ ನೀಡಿದ ಶೀರ್ಷಿಕೆ. ಇಂದಿನ ಹೆಡ್ ಲೈನ್ ಆಫ್ ದಿ ಡೇ ವಿಜಯವಾಣಿಗೇ ಸಲ್ಲಬೇಕು!
ಹೌದು, ಕನ್ನಡದ ಹಲವು ಪತ್ರಿಕೆಗಳು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ತಮ್ಮದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿವೆ.
LIVE Updates: ಅಜಾತಶತ್ರುವಿಗೆ ಗಣ್ಯರ ಅಶ್ರುತರ್ಪಣ
ಭಾರತರತ್ನವನ್ನು 'ಹಿಂದೂಸ್ತಾನವು ಎಂದೂ ಮರೆಯದು' ಎಂಬ ವಿಜಯಕರ್ನಾಟಕದ ಶೀರ್ಷಿಕೆಯೂ ಅಷ್ಟೇ ಗಮನ ಸೆಳೆಯುತ್ತದೆ. ದೇಶದ ಮಹಾನ್ ನಾಯಕನ ಅಗಲಿಕೆಗೆ ಹತ್ತಾರು ಪುಟಗಳ ಅಕ್ಷರ ನಮನ ಸಲ್ಲಿಸಿರುವ ಕನ್ನಡ ದಿನಪತ್ರಿಕೆಗಳಲ್ಲಿ ಏನಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ನೋಡಿ.
ವಿಜಯವಾಣಿ
'ಅಜಾತಶತ್ರು ಅಜರಾಮರ' ಎಂಬ ಹೃದಯಸ್ಪರ್ಶಿ ತಲೆಬರಹ ನೀಡಿದೆ ವಿಜಯವಾಣಿ. ಮೌನಕ್ಕೆ ಸರಿದ ಭಾರತ, ಹೆಮ್ಮೆಯ ಪುತ್ರ ಅಟಲ್ ನಿಧನಕ್ಕೆ ದೇಶದಾದ್ಯಂತ ಕಂಬನಿ ಎಂಬ ಕಿಕ್ಕರ್ ನೀಡಿದೆ. ಅಮರ್ ರಹೇ ಅಟಲ್ ಎಂಬ ಶೀರ್ಷಿಕೆಯೊಂದಿಗೆ ಸುಮಾರು 6 ಪುಟಗಳನ್ನು ಅಟಲ್ ಅಕ್ಷರ ನಮನಕ್ಕೆಂದೇ ಮೀಸಲಿಟ್ಟಿದೆ ವಿಜಯವಾಣಿ.
ಕನ್ನಡ ಪ್ರಭ
ಇಂದಿನ ಸಂಚಿಕೆಯನ್ನು ಅಟಲ್ ಜೀ ಅವರಿಗೇ ಅರ್ಪಿಸಿರುವ ಕನ್ನಡ ಪ್ರಭ, ಅವತರಿಸು ಬಾ ಮತ್ತೆ ಎಂಬ ಶೀರ್ಷಿಕೆ ನೀಡಿದೆ. ಕನ್ನಡ ಪ್ರಭದ ಶೀರ್ಷಿಕೆಯ ಅಗ್ರಸ್ಥಾನವನ್ನು ವಾಜಪೇಯಿ ಅವರಿಗೆ ನೀಡಿ, ಶೀರ್ಷಿಕೆಯನ್ನು ಮುಖಪುಟದ ಕೆಳಗೆ ನೀಡಿದೆ. ವಾಜಪೇಯಿ ಅವರ ಹಸ್ತಾಕ್ಷರವನ್ನೂ ಮುಖಪುಟದಲ್ಲಿ ನೀಡಿರುವುದು ವಿಶೇಷ.
'ಭಾರತದ ರಾಜಕೀಯ ಭೀಷ್ಮ'ನ ರಾಜಕಾರಣದ ಮೈಲುಗಲ್ಲುಗಳು
ವಿಜಯ ಕರ್ನಾಟಕ
'ಹಿಂದೂಸ್ತಾನವು ಎಂದೂ ಮರೆಯದು' ಎಂದ ಶೀರ್ಷಿಕೆ ನೀಡಿ ಅತ್ಯುತ್ತಮ ವಾಗ್ಮಿ, ಕವಿ, ಮಾನವೀಯ ಅಂತಃಕರಣದ ಸರಳ ಜೀವಿ, ಮುತ್ಸದ್ಧಿ ರಾಜಕಾರಣಿಯ ವಿವಿಧ ಅವತಾರಗಳನ್ನು ತೋರಿಸಿದೆ ವಿಜಯಕರ್ನಾಟಕ. 'ಕವಿಹೃದಯದ ರಾಜಕಾರಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಸ್ತಂಗತ' ಎಂಬ ಕಿಕ್ಕರ್ ಗಮನ ಸೆಳೆಯುತ್ತದೆ.
ಉದಯವಾಣಿ
ಅಟಲ್ ಅಮರ ಎಂಬ ತಲೆಬರಹ ಮತ್ತು ಅಟಲ್ ಜೀಯವರ ಆಕರ್ಷಕ ಚಿತ್ರದೊಂದಿಗೆ ಉದಯವಾಣಿಯ ಮುಖಪುಟ ಗಮನಸೆಳೆಯುತ್ತದೆ. ಮಗುಮನದ ಕವಿ ಹೃದಯದ ನಿಷ್ಠುರವಾದಿ ಪರಮಾಣುವಿನ ಕನಸು ನನಸು ಮಾಡಿದ ನಾಯಕೆಂದು ವಾಜಪೇಯಿ ಅವರ ಸಾದನೆಯನ್ನು ಕೆಲವೇ ಸಾಲುಗಳಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದೆ ಉದಯವಾಣಿ.
ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ
ವಿಶ್ವವಾಣಿ
ಅಟಲ್ ಬಿಹಾರಿ ವಾಜಪೇಯಿ ಯುಗಪುರುಷನ ಯುಗಾಂತ್ಯ ಎಂಬ ಅರ್ಥವತ್ತಾದ, ಅಷ್ಟೇ ಸೂಕ್ತವಾದ ಶೀರ್ಷಿಕೆ ನೀಡಿದೆ ವಿಶ್ವವಾಣಿ. ಮೊದಲ ಪುಟದ ತುಂಬಾ ರಾರಾಜಿಸುತ್ತಿರುವ ಅಟಲ್ ಜೀ ಅವರ ನಗುಮುಖದ ಸುಂದರ ಚಿತ್ರ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ.
ಪ್ರಜಾವಾಣಿ
ಅಜಾತಶತ್ರು ಅಸ್ತಂಗತ ಎಂಬುದು ಪ್ರಜಾವಾಣಿಯ ತಲೆಬರಹ. ಅತ್ಯಂತ ಸರಳವಾಗಿ ಪ್ರಧಾನಿಯವರ ಅಗಲಿಕೆಯನ್ನು ಚಿತ್ರಿಸಿದೆ ಪ್ರಜಾವಾಣಿ.
ಅಟಲ್ ಬಿಹಾರಿ ವಾಜಪೇಯಿ ಬದುಕಿನ ಹೆಜ್ಜೆಗುರುತುಗಳು
ಸಂಯುಕ್ತ ಕರ್ನಾಟಕ
ರಾಜಧರ್ಮದಲ್ಲಿ ಧರ್ಮರಾಯ ಲೀನ ಎಂಬ ಶೀರ್ಷಿಕೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಕಾಲವಶ ಎಂಬ ಕಿಕ್ಕರ್ ಅನ್ನು ಸಂಯುಕ್ತ ಕರ್ನಾಟಕ ನೀಡಿದೆ. ಕೊನೆಯ ಬಾರಿಗೆ ಸಲಾಂ ಎಂಬಂತಿರುವ ವಾಜಪೇಯಿ ಅವರ ಚಿತ್ರ ಗಮನಸೆಳೆಯುತ್ತದೆ.
ವಾರ್ತಾ ಭಾರತಿ
'ಉದಾರಭಾಷಿಯ ಯುಗಾಂತ್ಯ' ಎಂಬ ತಲೆಬರಹ ನೀಡಿ, ದೇಶಾದ್ಯಂತ ಏಳು ದಿನ ಶೋಕಾಚರಣೆ, ದೇಶ-ವಿದೇಶದ ಗಣ್ಯರಿಂದ ಸಂತಾಪ ಎಂಬ ಕಿಕ್ಕರ್ ನೀಡಿದೆ ವಾರ್ತಾಭಾರತಿ.