ಕಾಲೂರಾಮ್ ಕೊಲೆ ಶಂಕಿತರ ವಿಚಾರಣೆ, ಸಂಬಂಧಿಕರಿಂದ ಠಾಣೆ ಬಳಿ ಪ್ರತಿಭಟನೆ
ಬೆಂಗಳೂರು, ಮೇ 24: ನಿನ್ನೆ ರಾತ್ರಿ ಮಕ್ಕಳ ಕಳ್ಳನೆಂದು ಅನುಮಾನಿಸಿ ಸಾರ್ವಜನಿಕರೇ ಥಳಿಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 9 ಜನ ಶಂಕಿತರನ್ನು ಬಂಧಿಸಿದ್ದು, ಆರೋಪಿಗಳ ಸಂಬಂಧಿಗಳು ಇಂದು ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.
ನಿನ್ನೆ ರಾತ್ರಿ ರಾಜಸ್ಥಾನ ಮೂಲದ ಕಾಲೂರಾಮ್ ಎಂಬಾತನನ್ನು ಮಕ್ಕಳ ಕಳ್ಳನೆಂದು ಶಂಕಿಸಿ ಸಾರ್ವಜನಿಕರು ಥಳಿಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೊಲೀಸ್ ಠಾಣೆ ಯಲ್ಲಿ ಬಂಧಿತ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಠಾಣೆ ಮುಂಭಾಗ ಜಮಾಯಿಸಿದ ಬಂಧಿತರ ಸಂಬಂಧಿಗಳು ಪ್ರತಿಭಟನೆ ಮಾಡಿದ್ದಾರೆ.
ಮಕ್ಕಳ ಕಳ್ಳನೆಂದು ಥಳಿಸಿ ಕೊಂದ ಸ್ಥಳೀಯರು: 9 ಮಂದಿ ಬಂಧನ
ಪ್ರತಿಭಟನೆ ಮಾಡಿದವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ, ವಾಚಾಮಾಗೋಚರವಾಗಿ ಬೈದಾಡಿದ್ದಾರೆ ಅಲ್ಲದೆ ಠಾಣೆ ಒಳಕ್ಕೆ ನುಗ್ಗಲೂ ಪ್ರಯತ್ನ ಪಟ್ಟರು. ಠಾಣೆ ಬಳಿ ತಳ್ಳಾಟ ನಡೆದಿದ್ದು ಈ ವೇಳೆ ಮಹಿಳಾ ಪೇದೆಯೊಬ್ಬರು ಮಹಿಳೆಯೊಬ್ಬರ ಸೀರೆ ಎಳೆದೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ ಠಾಣೆಯ ಹಿರಿಯ ಅಧಿಕಾರಿಗಳು, ಅವರನ್ನು ವಿಚಾರಣೆಗೆ ಕರೆತಂದಿದ್ದೇವೆ ಅಷ್ಟೆ ಅವರಿಗೆ ಯಾವುದೇ ರೀತಿಯ ಹಿಂಸೆ ನೀಡುತ್ತಿಲ್ಲ ಎಂದು ಮನವಿ ಮಾಡಿದರು.