ಮೇ 14 ರಂದು ಸುಪ್ರೀತ್ ಅವರ 'ತರ್ಕ' ಲೋಕಾರ್ಪಣೆ
ಯುವ ಲೇಖಕ, ಒನ್ ಇಂಡಿಯಾ ಸಿಬ್ಬಂದಿ ಸುಪ್ರಿತ್ ಕೆ.ಎನ್.ಅವರ ತರ್ಕ ಕಾದಂಬರಿ ನಾಳೆ ಬೆಂಗಳೂರಿನ ಎನ್ ಆರ್ ಕಾಲೋನಿಯಲ್ಲಿರುವ ಬಿಎಂ ಶ್ರೀ ಸ್ಮಾರಕ ಪ್ರತಿಷ್ಠಾನದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಬೆಂಗಳೂರು, ಮೇ 13: ಯುವ ಲೇಖಕ, ಒನ್ ಇಂಡಿಯಾ ಸಿಬ್ಬಂದಿ ಸುಪ್ರಿತ್ ಕೆ.ಎನ್.ಅವರ ತರ್ಕ ಕಾದಂಬರಿ ನಾಳೆ (ಮೇ.14) ಬೆಂಗಳೂರಿನ ಎನ್ ಆರ್ ಕಾಲೋನಿಯಲ್ಲಿರುವ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಸಂಜೆ 4.00 ಗಂಟೆಗೆ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಖ್ಯಾತ ಅಂಕಣಕಾರ ಹಾಗೂ ಲೇಖಕ ರೋಹಿತ್ ಚಕ್ರತೀರ್ಥ ಕೃತಿ ಬಿಡುಗಡೆ ಮಾಡಲಿದ್ದು, ವಿವೇಕ ಹಂಸ ಮಾಸಪತ್ರಿಕೆಯ ಸಂಪಾದಕ ವಿ.ರಘು ಕೃತಿಯನ್ನು ಪರಿಚಯ ಮಾಡಿಕೊಡಲಿದ್ದಾರೆ.[ಸುಪ್ರೀತ್ ಅವರ 'ತರ್ಕ' ಕಾದಂಬರಿ ಪ್ರೀ ಬುಕ್ಕಿಂಗ್ ಆರಂಭ]
224 ಪುಟಗಳ ಈ ಪುಸ್ತಕವನ್ನು 'ಅರವಿಂದ್ ಇಂಡಿಯಾ' ಪ್ರಕಾಶನ ಪ್ರಕಟಿಸುತ್ತಿದ್ದು, ಪುಸ್ತಕದ ಬೆಲೆ ರೂ.150/-
ತರ್ಕದಲ್ಲೇನಿದೆ?
ಅದ್ವೈತ ಸಿದ್ಧಾಂತ, ಮನಃಶಾಸ್ತ್ರ, ಭೌತಶಾಸ್ತ್ರ, ಶ್ರೀಚಕ್ರ ಉಪಾಸನೆ ಇದಕ್ಕೆ ಸಂಬಂಧಿಸಿದ ಕಾದಂಬರಿ ತರ್ಕ. ಪ್ರೀತಿ, ಭಯ, ಭಕ್ತಿ, ಭ್ರಮೆ, ನಂಬಿಕೆ, ಅನುಮಾನ, ಜಿಗುಪ್ಸೆ; ಹೀಗೆ ಮನಸ್ಸಿನ ನಾನಾ ಭಾವನಾತ್ಮಕ ಸ್ಥಿತಿಗಳನ್ನೇ ಪಾತ್ರಗಳನ್ನಾಗಿ ಮಾಡಿ, ಅವುಗಳ ಮೂಲಕ ಬದುಕು, ಬ್ರಹ್ಮ, ಬ್ರಹ್ಮಾಂಡಗಳ ಬಗ್ಗೆ ಸತ್ಯಾನ್ವೇಷಣೆ ಮಾಡಿರುವ ವಿಭಿನ್ನ ಕಾದಂಬರಿ ತರ್ಕ.
ಇದರಲ್ಲಿ ಯಾವುದನ್ನು ಒಪ್ಪಬೇಕು, ಯಾವುದನ್ನು ಅನುಮಾನಿಸಬೇಕು, ಯಾವುದನ್ನು ಅನುಸರಿಸಬೇಕು ಎಂದು ಓದುಗರು ತಮ್ಮ ಅನುಭವ ಆಲೋಚನೆಗಳ ಆಧಾರದ ಮೇಲೆ ತರ್ಕ ಮಾಡಬೇಕು. ಈ ಕಾದಂಬರಿಯಲ್ಲಿ ಶ್ರೀಚಕ್ರ ಉಪಾಸನೆಯಲ್ಲಿ ಬರುವ ಪಂಚದಶೀ, ಷೋಡಶೀ ಇತ್ಯಾದಿ ಮಂತ್ರಗಳ ಬಗ್ಗೆ ಒಂದೆಡೆ ಪ್ರಸ್ತಾಪ ಮಾಡಿದರೆ ಮತ್ತೊಂದೆಡೆ ಗ್ರಹಗಳು, ಅನ್ಯಗ್ರಹಗಲ್ಲಿ ವಾಸಿಸುವ ಜೀವಿಗಳು, ಅಣು, ಕಣ, ವಿಶ್ವ; ಇವುಗಳ ಬಗ್ಗೆಯೂ ಪ್ರಸ್ತಾಪವಿದೆ. ಇಡೀ ಕಾದಂಬರಿಯನ್ನು ತ್ರಿಕೋನ ಪ್ರೇಮ ಕತೆಯ ಮೇಲೆ ಕಟ್ಟಲಾಗಿದೆ.
ತರ್ಕ ಕೆ.ಎನ್. ಸುಪ್ರೀತ್ ಅವರ ನಾಲ್ಕನೇ ಕೃತಿಯಾಗಿದ್ದು, ಇದಕ್ಕೂ ಮೊದಲು ಅವರು 'ಮಂದಿರ-ಮಸೀದಿ' 'ಕಾದಂಬರಿ(?)', 'ಸ್ವ್ಯಾಪಿಂಗ್' ಎಂಬ ಕೃತಿಗಳನ್ನೂ ರಚಿಸಿದ್ದಾರೆ.