ಎನ್ ಡಿಟಿವಿ ಮೇಲೆ ಸಿಬಿಐ ದಾಳಿ, ಬೆಂಗಳೂರಲ್ಲಿ ಪತ್ರಕರ್ತರ ಪ್ರತಿಭಟನೆ
ಬೆಂಗಳೂರು, ಜೂನ್ 6: ಎನ್ ಡಿಟಿವಿ ಸ್ಥಾಪಕ ಪ್ರಣಯ್ ರಾಯ್ ಹಾಗೂ ಅವರ ಪತ್ನಿ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ಖಂಡಿಸಿ ಇಲ್ಲಿನ ಪ್ರೆಸ್ ಕ್ಲಬ್ ಹೊರಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಎಂಬತ್ತರಷ್ಟು ಸಂಖ್ಯೆಯಲ್ಲಿ ಪತ್ರಕರ್ತರು, ಬರಹಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.
ಪತ್ರಕರ್ತರ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ ಎಂದು ಪ್ರತಿಭಟನಾನಿರತರು ಆರೋಪಿಸಿದರು. ಜರ್ನಲಿಸ್ಟ್ ಸ್ಟಡಿ ಸೆಂಟರ್ ನಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ ಕಾರಣಕ್ಕೆ ಸರಕಾರ ಸಿಬಿಐ ದಾಳಿ ಮಾಡಿಸುವ ನಡೆ ಇಟ್ಟಿದೆ ಎಂದು ಬಿಟಿವಿ ವರದಿಗಾರ ನವೀನ್ ಸೂರಿಂಜೆ ಆರೋಪಿಸಿದರು.[ಎನ್ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್ ಮನೆ ಮೇಲೆ ಸಿಬಿಐ ದಾಳಿ]
ಖಾಸಗಿ ವ್ಯಕ್ತಿಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಈ ರೀತಿ ಹಿಂದೆಂದೂ ನಡೆದಿರಲಿಲ್ಲ ಎಂದರು.
ಖಾಸಗಿ ಸಾಲಕ್ಕೆ ಸಂಬಂಧಿಸಿದಂತೆ ಸಿಬಿಐ ಮಧ್ಯಪ್ರವೇಶ ಮಾಡಿರುವುದು ಇತ್ತೀಚಿನ ಸಮಯದಲ್ಲಿ ಇದೇ ಮೊದಲು. ಈ ಪ್ರಕರಣದ ಹಣಕಾಸು ಆಯಾಮದ ಬಗ್ಗೆ ನಾವು ಪ್ರಶ್ನಿಸುತ್ತಿಲ್ಲ. ಆದರೆ ಬಿಜೆಪಿಯು ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಬರಹಗಾರ ಶ್ರೀಪಾದ ಭಟ್ ಆರೋಪಿಸಿದ್ದಾರೆ.
ಎನ್ ಡಿಟಿವಿಯಲ್ಲಿ ಈಚೆಗೆ ನಡೆದ ಪ್ಯಾನಲ್ ಡಿಸ್ಕಷನ್ ವೇಳೆ ಬಿಜೆಪಿಯ ಸಂಬಿತ್ ಪಾತ್ರ ಆ ಚಾನಲ್ ಅನ್ನು ಕಾಂಗ್ರೆಸ್ ಜತೆ ನಂಟು ಹೊಂದಿರುವುದಾಗಿ ಆರೋಪಿಸಿದ್ದರು. ಆಗ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ನಿಧಿ ರಜ್ದಾನ್ ಅವರು ಪಾತ್ರರನ್ನು ಎದ್ದು ಹೊರನಡೆಯುವಂತೆ ಹೇಳಿದ್ದರು.
ಆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದು ಎಂದು ಶ್ರೀಪಾದ್ ಹೇಳಿದರು. ಎರಡು ವರ್ಷಗಳ ಹಿಂದೆ ಎಲ್ ಕೆ ಅಡ್ವಾಣಿ ಅವರು ತುರ್ತು ಪರಿಸ್ಥಿತಿ ಮರುಕಳಿಸುವ ಬಗ್ಗೆ ಎಚ್ಚರಿಸಿದ್ದರು. ಅರುಣ್ ಶೌರಿ ಅವರು ಕೂಡ ಪತ್ರಕರ್ತರು ಧ್ವನಿ ಎತ್ತಲು ಇದು ಸರಿಯಾದ ಸಮಯ ಎಂದಿದ್ದರು ಎಂಬುದನ್ನು ಸ್ಮರಿಸಿದರು.
ಬರಹಗಾರ ಶ್ರೀಧರ್ ಪ್ರಭು, ಸಾಮಾಜಿಕ ಕಾರ್ಯಕರ್ತರಾದ ವಿದ್ಯಾ ದಿನಕರ್, ದಿನೇಶ್ ಅಮಿನ್ ಮಟ್ಟು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.