ಬೆಳಗೆರೆ ಸಂದರ್ಶನ: 'ಜನಶ್ರೀ' ಮೇಲೆ 5 ಕೋಟಿ ವಂಚನೆ ಕೇಸು ಹಾಕಿದ್ದೀನಿ
ಪತ್ರಕರ್ತ ರವಿ ಬೆಳಗೆರೆ ಅವರು ಒನ್ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದ ಕೊನೆ ಕಂತು ಇದು. ರವಿ ಬೆಳಗೆರೆ ಅವರು ಬಿಜೆಪಿ ಬೆಂಬಲಿಗರಾ? ಬ್ಲಾಕ್ ಮೇಲ್ ಮಾಡಿ ಹಣ ಮಾಡಿದ್ದಾರೆ ಎಂಬ ಆರೋಪ ಇದೆಯಲ್ಲಾ ಅದಕ್ಕೆ ಏನಂತಾರೆ? ಜನಾರ್ದನ ರೆಡ್ಡಿ ಜತೆಗಿನ ಅವರ ಸ್ನೇಹ ಈಗ ಹೇಗಿದೆ ಇತ್ಯಾದಿ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡಿದ್ದಾರೆ.
ಹಾಯ್ ಬೆಂಗಳೂರನ್ನು ಮುಚ್ಚಲಿದ್ದಾರೆ ರವಿ, ಕಾರಣಗಳು 5
ಜನಶ್ರೀ ಚಾನಲ್ ಗಾಗಿ ರವಿ ಬೆಳಗೆರೆ ಅವರು ನೀಡಿದ ಐದು ಕೋಟಿ ರುಪಾಯಿ ಹಣವನ್ನು ವಾಪಸ್ ನೀಡದ ಕಾರಣಕ್ಕೆ ಕೋರ್ಟ್ ನಲ್ಲಿ ದಾವೆ ಹೂಡಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇನ್ನು ಬೆಳಗೆರೆ ಅವರು ಬರೆಯುತ್ತಿರುವ ಹೊಸ ಪುಸ್ತಕ 'ಗುಡ್ ಮುಸ್ಲಿಂ ಬ್ಯಾಡ್ ಮುಸ್ಲಿಂ' ಬಗ್ಗೆ ಕೂಡ ಮಾತನಾಡಿದ್ದಾರೆ.
ಪತ್ರಿಕೆ ನಿಲ್ಲಿಸಲಿರುವ ರವಿ ಬೆಳಗೆರೆ ಮುಂದಿನ ನಡೆಗಳೇನು?
ನಾವಿಂದು ತೀರಾ ಗಂಭೀರವಾದ ಸನ್ನಿವೇಶ ಎದುರಿಸುತ್ತಿದ್ದೇವೆ. ಮೂಲಭೂತವಾದ ನಮ್ಮೆದುರು ಇರುವ ದೊಡ್ಡ ಸವಾಲು. ಅದನ್ನು ನಮ್ಮ ಶಾಲೆಯಲ್ಲೇ ನೋಡಿದ್ದು ಸ್ವಲ್ಪ ಆಘಾತಕಾರಿಯಾಗಿತ್ತು. ಜಾತಿ-ಧರ್ಮ ಕೇಳದೆ ಜಾತ್ಯತೀತವಾಗಿ ನಡೆದುಕೊಳ್ಳುವ ನಮ್ಮ ಶಾಲೆಯಲ್ಲಿ ಅಂಥದೊಂದು ಸ್ಥಿತಿ ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು. ಅಷ್ಟಕ್ಕೂ ಬೆಳಗೆರೆ ಅವರ ಆತಂಕಕ್ಕೆ ಕಾರಣವಾದ ಆ ಘಟನೆ ಯಾವುದು, ಮತ್ತಿತರ ವಿವರಗಳನ್ನು ತಿಳಿಯಲು ಮುಂದೆ ಓದಿ.
ಜನಾರ್ದನ ರೆಡ್ಡಿ ಜತೆ ಮಾತಾಡದೆ ಬಹಳ ಕಾಲವಾಯಿತು
"ಬಿಜೆಪಿ ಬೆಂಬಲಿಗನಾ ಅನ್ನೋ ಪ್ರಶ್ನೆ ಏಕೆ ಬರುತ್ತದೆ ಅಂತ ನನಗೆ ಗೊತ್ತು. ನಾನು ಬಳ್ಳಾರಿಯಲ್ಲಿ ಎಂಟು ಕಿಲೋಮೀಟರ್ ಪಾದಯಾತ್ರೆ ಮಾಡಿದ್ದೆ. ನನಗಾಗ ಅನಾರೋಗ್ಯ ಸಮಸ್ಯೆ ಇತ್ತು. ಆ ಪಾದಯಾತ್ರೆ ದೃಶ್ಯಗಳನ್ನು ಟಿವಿಯಲ್ಲಿ ನೋಡಿದ ಜನಾರ್ದನ ರೆಡ್ಡಿ ಫೋನ್ ಮಾಡಿ, ಅಣ್ಣಾ ನೀವು ಪಾದಯಾತ್ರೆಗೆ ಕುಡಿದುಕೊಂಡು ಹೋಗಿದ್ದರಂತೆ ಅಂದ. ಇಲ್ಲ ರೆಡ್ಡಿಗಾರು ಕುಡಿಯೋದು ಬಿಟ್ಟು ವರ್ಷಗಟ್ಟಲೆ ಆಯಿತು. ನನಗೆ ಅನಾರೋಗ್ಯವಾದ್ದರಿಂದ ಹಾಗೆ ಕಾಣಿಸುತ್ತಿದ್ದೇನೆ ಅಂದೆ. ಆದರೆ ಆತ ನಂಬಲಿಲ್ಲ. ಅದೇ ಕೊನೆ. ಆ ನಂತರ ಆತನ ಜತೆ ಮಾತು ಕೂಡ ಆಡಿಲ್ಲ".
ವಿಶ್ವಾಸ ಅನ್ನೋದು ಕನ್ಯಾ ಪೊರೆ ಇದ್ದಂತೆ
ನಾನು ಬ್ಲಾಕ್ ಮೇಲರ್ ಅಂತ ಆರೋಪ ಮಾಡೋರು ಪತ್ರಿಕೆ ಆರಂಭದಿಂದಲೂ ಮಾಡ್ತಿದ್ದಾರೆ. ವಿಶ್ವಾಸ ಅನ್ನೋದು 'ಕನ್ಯಾಪೊರೆ' ಇದ್ದ ಹಾಗೆ. ಅದು ಒಮ್ಮೆ ಹರಿಯಿತು ಅಂದರೆ ಮುಗಿಯಿತು. ಅದನ್ನು ಮತ್ತೆ ಜೋಡಿಸುವುದಕ್ಕೆ ಸಾಧ್ಯವಿಲ್ಲ. ನನ್ನ ಓದುಗರ ವಿಶ್ವಾಸವನ್ನು ಉಳಿಸಿಕೊಂಡಿದ್ದೀನಿ. ಭಾವನಾ ಪ್ರಕಾಶನ ಅದ್ಭುತವಾಗಿದೆ. ಶಾಲೆ ತುಂಬ ಚೆನ್ನಾಗಿದೆ. ಇಷ್ಟೂ ವರ್ಷ ತಲೆ ಬಗ್ಗಿಸಿ ಕೂತು ಬರೆಯದೆ ತುತ್ತು ಅನ್ನ ಕೂಡ ಬಾಯಿಗೆ ಇಟ್ಟವನಲ್ಲ ನಾನು. ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನ ವಿಶ್ವಾಸಾರ್ಹತೆ ಸಾಬೀತು ಮಾಡಲು ಏನೂ ಬೇಕಿಲ್ಲ.
ಐದು ಕೋಟಿ ರುಪಾಯಿಗೆ ಕೋರ್ಟ್ ನಲ್ಲಿ ಕೇಸ್
ಜನಶ್ರೀ ಚಾನಲ್ ಆರ್ಥಿಕ ಸಂಕಷ್ಟದಲ್ಲಿದ್ದಾಗ ನನ್ನ ಬಳಿ ಬಂದು ಹಣ ಕೇಳಿದರು. ಅದರ ನೇತೃತ್ವ ವಹಿಸಿದ್ದ ಸಂಜಯ್ ಬೆಟಗೇರಿ ಹಾಗೂ ಮೂರ್ತಿ ಎಂಬುವವರಿಗೆ ಐದು ಕೋಟಿ ರುಪಾಯಿ ಹಣ ಕೊಟ್ಟಿದ್ದೆ. ಅದನ್ನು ವಾಪಸ್ ಕೇಳಿದಾಗ ಚೆಕ್ ಕೊಟ್ಟಿದ್ದರು. ಅದನ್ನು ಬ್ಯಾಂಕ್ ಗೆ ಹಾಕಿದರೆ ಬ್ಯಾಲೆನ್ಸ್ ಇಲ್ಲ. ಅಷ್ಟೇ ಏಕೆ, ಆ ಚೆಕ್ಕೇ ಫೇಕ್. ಅವರ ವಿರುದ್ಧ ಕೋರ್ಟ್ ನಲ್ಲಿ ಕೇಸ್ ಹಾಕಿದ್ದೀನಿ.
ಗುಡ್ ಮುಸ್ಲಿಂ-ಬ್ಯಾಡ್ ಮುಸ್ಲಿಂ
ನಾನೀಗ ಗುಡ್ ಮುಸ್ಲಿಂ-ಬ್ಯಾಡ್ ಮುಸ್ಲಿಂ ಎಂಬ ಪುಸ್ತಕ ಬರೆಯುತ್ತಿದ್ದೇನೆ. ನಿಜಕ್ಕೂ ತುಂಬ ಸುಧಾರಣೆ ಕಾಣಬೇಕಾಗಿರುವುದು ಮುಸ್ಲಿಂ ಸಮುದಾಯದಲ್ಲಿ. ನಮ್ಮ ಶಾಲೆಯಲ್ಲೇ ನಾಲ್ಕೈದು ವರ್ಷದ ಇಬ್ಬರು ಮುಸ್ಲಿಂ ಮಕ್ಕಳು ಪ್ರಾರ್ಥನೆ ಗೀತೆ ಹಾಡುವುದಿಲ್ಲ ಅಂತ ಹಠ ಹಿಡಿದರು. ತಪ್ಪು ಆ ಮಕ್ಕಳದ್ದಲ್ಲ. ಅವರ ಪೋಷಕರದು. ಅವರನ್ನು ಕರೆಸಿ ಹೇಳಿದೆ. ಇಲ್ಲಿ ಎಲ್ಲರೂ ಒಂದೇ. ನಾವು ಹೇಳಿಸುವ ಪ್ರಾರ್ಥನೆ ಗೀತೆಯಲ್ಲಿ ಅಂಥ ಯಾವ ಸಂದೇಶವೂ ಇಲ್ಲ. ನಿಮಗೆ ಇಷ್ಟವಿಲ್ಲ ಅಂದರೆ ಟಿ.ಸಿ ತೆಗೆದುಕೊಂಡು ಹೋಗಿ ಅಂದೆ. ಇಂಥ ಮೂಲಭೂತವಾದ ಹೋಗಲಾಡಿಸಬೇಕಿದೆ.