ಬೆಳಗೆರೆ 'ಸಾಫ್ಟ್ ಕಾರ್ನರ್' ನಲ್ಲಿ ಜನಾರ್ದನ ರೆಡ್ಡಿಗೆ ಹಾರ್ಡ್ ಹಿಟ್
ಬೆಂಗಳೂರು, ಏಪ್ರಿಲ್ 14 : ಬಳ್ಳಾರಿಯ ಗಾಲಿ ಜನಾರ್ದನ ರೆಡ್ಡಿಗೆ ಮತ್ತೇನಿಲ್ಲದಿದ್ದರೂ ಅಪಾರವಾದ ಅಹಂಕಾರವಿದೆ. ಅದು ಹಣದ್ದು. ಸ್ವಂತ ಅಣ್ಣ-ತಮ್ಮಂದಿರನ್ನು ದೂರವಿರಿಸಿದ್ದಾನೆ. ಬೆನ್ನಲ್ಲೇ ಹುಟ್ಟಿದಂಥ ಕಂಪ್ಲಿ ಶಾಸಕ ಸುರೇಶ್ ಬಾಬು ಈ ಮಧ್ಯೆ ದೂರವಾಗಿದ್ದಾನೆ. ಕೂಡ್ಲಿಗೆ ನಾಗೇಂದ್ರ ಇವನ ಸಹವಾಸವೇ ಬೇಡವೆಂದು ದೂರವಾಗಿ ಸಾಕಷ್ಟು ಕಾಲವಾಯ್ತು.
ಜನಾರೆಡ್ಡಿ ಫೋನ್ ಬಂತು ಅಂದರೆ ಹೊಸಪೇಟೆಯ ಶಾಸಕ ಆನಂದ ಸಿಂಗ್ ಗಾಬರಿಯಾಗಿ ನಿಟಾರಾಗಿ ನಿಲ್ಲುತ್ತಾನೆ. ಶಿರಗುಪ್ಪ ಮಾಜಿ ಶಾಸಕ ಸೋಮಲಿಂಗಪ್ಪ ಎಂದೋ ಕ್ಯಾಕರಿಸಿ ದೂರವಾಗಿದ್ದಾನೆ. ರಾಯಚೂರು ಎಂ.ಪಿ. ಆಗಿದ್ದ ಸಣ್ಣ ಫಕೀರಪ್ಪ, ಶ್ರೀರಾಮುಲು ಸೋದರಿ ಶಾಂತ ಮುಂತಾದವರಿಗೆಲ್ಲ ಜನಾರೆಡ್ಡಿ ಸಹವಾಸ ಸಾಕು ಬೇಕಾಗಿದೆ.
ಬೆಳಗೆರೆ ಸಂದರ್ಶನ: 'ಜನಶ್ರೀ' ಮೇಲೆ 5 ಕೋಟಿ ವಂಚನೆ ಕೇಸು ಹಾಕಿದ್ದೀನಿ
Reddy can be nasty to any extent. ಅವನು ಮಾಡಿದ ವಂಚನೆಗಳ ಲೆಕ್ಕ ಯಾರಿಟ್ಟರು. ಸ್ವತಃ ನಾನೇ ಐದು ಕೋಟಿ ರುಪಾಯಿಗಳಿಗೆ ಕೇಸು ಹಾಕಿದ್ದೇನೆ. ಈ ಊರಿನಲ್ಲಿನ್ನು ಕೊಲೆ, ರಕ್ತಪಾತ ಆಗಬಾರದೆಂಬ ಒಂದೇ ಕಾರಣಕ್ಕೆ ನಾನು ರೆಡ್ಡಿಯನ್ನು ಬೆಂಬಲಿಸಿದೆ. ಈ ಮನುಷ್ಯ ಮಾಡಿದ್ದೇನು?
ಇವನ ಹೆಲಿಕ್ಯಾಪ್ಟರ್ ಮತ್ತು ವಿಮಾನದಲ್ಲಿ ನಾನು ಅಪ್ಪಿತಪ್ಪಿ ಕಾಲಿಟ್ಟಿಲ್ಲ. ಚಿಕ್ಕದೊಂದು ಮಾತಿಗೆ ಬೇಸತ್ತು ಇವನ 'ಜನಶ್ರೀ' ವಾಹಿನಿಯಿಂದ ಕಾಲು ಹೊರಗಿಟ್ಟೆ. ಶಾಸಕನಾಗಿದ್ದಾಗ, ಮಂತ್ರಿಯಾಗಿದ್ದಾಗ ಜನಾರ್ದನ ರೆಡ್ಡಿ ಮಾಡಿದ ಮೋಸಗಳು, ಕೊಟ್ಟ ಹುಸಿ ಭರವಸೆಗಳು- ಯಾವತ್ತಿಗೆ ಮುನಿದಾವು?
ಶ್ರೀರಾಮುಲುವಿಗೆ ರೆಡ್ಡಿಯೊಂದಿಗಿರಲೇಬೇಕಾದ ಅನಿವಾರ್ಯವಿರಬಹುದು. ನಮ್ಮಂಥೋರಿಗೇನಿತ್ತು ಹರಕತ್ತು? 'ಹಚ್ಯಾ ರೆಡ್ಡಿ!' ಅಂದು ಎದ್ದು ಬಂದಿದ್ದೇನೆ.