ಗೌರಿಲಂಕೇಶ್ ಹತ್ಯೆ: ಹಿಂದೂ ಸಂಘಟನೆ ಪಾತ್ರದ ಬಗ್ಗೆ ಸ್ಫೋಟಕ ಮಾಹಿತಿ
ಬೆಂಗಳೂರು, ಜೂನ್ 11: ಸನಾತನ ಸಂಸ್ಥೆಯ ಅಂಗವಾದ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕದ ಹಿರಿಯ ಪದಾಧಿಕಾರಿಯೊಬ್ಬರಿಗೆ ಅದರ ಮಾತೃ ಸಂಸ್ಥೆಯಲ್ಲಿ 'ಉಗ್ರಗಾಮಿ ಶಾಖೆ' ಇರುವ ಬಗ್ಗೆ ಗೊತ್ತಿತ್ತು ಎಂಬುದನ್ನು ಪತ್ರಕರ್ತೆ ಗೌರಿಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಿಂದ ಮಾಹಿತಿ ಬಹಿರಂಗವಾಗಿದೆ.
ತನಿಖೆಯ ಸಂದರ್ಭದಲ್ಲಿ ಗೊತ್ತಾಗಿರುವ ಸಂಗತಿ ಏನೆಂದರೆ, ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಮೂಲದ ಸಂಯೋಜಕ ಮೋಹನ್ ಗೌಡ ಎಂಬಾತ ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಲು ನವೀನ್ ಕುಮಾರ್ ನನ್ನು ಸಂಸ್ಥೆ ಉಗ್ರಗಾಮಿ ಶಾಖೆಗೆ ಪರಿಚಯಿಸಿದ್ದ.
ಗೌರಿ ಹತ್ಯೆಯ ಮಿಸ್ಟರಿ : ಅಸಲಿಗೆ ಟ್ರಿಗರ್ ಎಳೆದದ್ದು ಯಾರು?
ಇದೇ ಶಾಖೆಗೆ ನಂಟು ಹೊಂದಿದ ಉಡುಪಿ ಮೂಲದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ಜತೆಗೆ ನವೀನ್ ಕುಮಾರ್ ನನ್ನು ಮೋಹನ್ ಗೌಡ ಜತೆ ಮಾಡಿದ್ದ ಎಂದು ಹೇಳಲಾಗುತ್ತಿದೆ. ಅಂದ ಹಾಗೆ ಸುಜಿತ್ ಕುಮಾರ್ ನನ್ನು ಮೇ ಮೂವತ್ತೊಂದರಂದು ಬಂಧಿಸಲಾಗಿದೆ.
ಕಳೆದ ಮಾರ್ಚ್ ಎರಡನೇ ತಾರೀಕು ಬಂಧಿಸಿದ ನವೀನ್ ಕುಮಾರ್ ನೀಡಿದ ಹೇಳಿಕೆಯಲ್ಲಿ ಬಹುತೇಕ ಅಂಶಗಳು ಬಯಲಾಗಿವೆ. ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆಗಾಗಿ ಕರ್ನಾಟಕದ ಹೊರಗಿನಿಂದ ಬಂದಂಥ ಗುಂಪಿಗೆ ನೆರವು ನೀಡಿದ ಆರೋಪ ನವೀನ್ ಕುಮಾರ್ ಮೇಲಿದೆ.
ಗೌರಿ ಹತ್ಯೆಗೂ ನಮಗೂ ಸಂಬಂಧವಿಲ್ಲ: ಸನಾತನ ಸಂಸ್ಥೆ
ಇನ್ನು ಆರೋಪದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮೋಹನ್ ಗೌಡ, ಇದು ಪೊಲೀಸರ ಪಿತೂರಿ. ಹಿಂದೂ ಜನಜಾಗೃತಿ ಸಮಿತಿಯಿಂದ ಸದ್ಯದಲ್ಲೇ ಪತ್ರಿಕಾಗೋಷ್ಠಿ ನಡೆಸಿ, ಈ ವಿಚಾರವಾಗಿ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಜೂನ್ ನಲ್ಲಿ ಗೋವಾದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ್ದಾಗಿ ನವೀನ್ ಕುಮಾರ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ನವೀನ್ ಕುಮಾರ್ ನ ನ್ಯಾಯಾಂಗ ಬಂಧನದ ಅವಧಿಯನ್ನು ಸೋಮವಾರ (ಜೂನ್ 11) ಹದಿನಾಲ್ಕು ದಿನ ವಿಸ್ತರಿಸಲಾಗಿದೆ. ಇನ್ನು ಮೋಹನ್ ಗೌಡ ವಿಚಾರವಾಗಿ ನವೀನ್ ಕುಮಾರ್ ನೀಡಿರುವ ಹೇಳಿಕೆಗಳು ಇಂತಿವೆ.
ಹಿಂದೂ ಧರ್ಮ ರಕ್ಷಣೆಗೆ ಶಸ್ತ್ರಾಸ್ತ್ರ ಬಳಕೆ
"ಗೋವಾದಲ್ಲಿ ನಡೆದ ಅಧಿವೇಶನದ ಎರಡನೇ ದಿನ ಹಿಂದೂ ಧರ್ಮ ರಕ್ಷಣೆಯ ವಿಚಾರವಾಗಿ ಚರ್ಚೆಯಲ್ಲಿ ನಾನು ಭಾಗವಹಿಸಿದ್ದೆ. ಹಿಂದೂ ಧರ್ಮ ರಕ್ಷಣೆಗೆ ಅಗತ್ಯ ಬಿದ್ದರೆ ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ನನ್ನ ಅಭಿಪ್ರಾಯ ಹೇಳಿದೆ. ನನ್ನ ಭಾಷಣದಿಂದ ಹಲವರು ಸಂತುಷ್ಟರಾದರು. ಅದೇ ರೀತಿ ನನ್ನನ್ನು ಅಭಿನಂದಿಸಿದರು. ಮೋಹನ್ ಗೌಡ ಅಂತೂ ನನ್ನನ್ನು ಬಹಳ ಮೆಚ್ಚುಗೊಂಡರು. ಅಗತ್ಯ ಬಿದ್ದರೆ ಪಿಸ್ತೂಲು ಹಾಗೂ ಗುಂಡುಗಳನ್ನು ನಾನು ಒದಗಿಸಬಲ್ಲೆ ಅಂತ ಹೇಳಿದೆ. ನನ್ನ ರೀತಿಯೇ ಆಲೋಚಿಸುವಂಥ ಹಲವರು ಇದ್ದಾರೆ. ಮುಂಬರುವ ದಿನಗಳಲ್ಲಿ ಅವರು ನನ್ನನ್ನು ಭೇಟಿ ಆಗಲಿದ್ದಾರೆ ಎಂದು ಮೋಹನ್ ಗೌಡ ಹೇಳಿದರು" ಎಂಬ ಹೇಳಿಕೆಯನ್ನು ನವೀನ್ ಕೊಟ್ಟಿದ್ದಾನೆ.
ತನ್ನ ಸಂಸ್ಥೆಗೆ ಸೇರಿದ ವ್ಯಕ್ತಿ ಎಂದು ತಿಳಿಸಿದ್ದ ಮೋಹನ್ ಗೌಡ
ಸಮಾವೇಶ ನಡೆದ ಕೆಲ ದಿನಕ್ಕೆ ನವೀನ್ ಕುಮಾರ್ ಗೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಪ್ರವೀಣ್ ಎಂದು ಪರಿಚಯಿಸಿಕೊಂಡಿದ್ದಾನೆ. ಬೆಂಗಳೂರಿನ ಮೋಹನ್ ಗೌಡ ನಿಮ್ಮ ಮೊಬೈಲ್ ಸಂಖ್ಯೆ ನೀಡಿದರು ಎಂದು ಆತ ಹೇಳಿದ್ದಾನೆ. ಆ ನಂತರ ನವೀನ್ ಕುಮಾರ್ ಸ್ವತಃ ಮೋಹನ್ ಗೌಡಗೆ ಫೋನ್ ಮಾಡಿ, ಪ್ರವೀಣ್ ಬಗ್ಗೆ ವಿಚಾರಿಸಿದ್ದಾನೆ. ಆಗ ಮೋಹನ್ ಗೌಡ, ಕರೆ ಮಾಡಿದ ವ್ಯಕ್ತಿ ತನ್ನದೇ ಸಂಸ್ಥೆಗೆ ಸೇರಿದವನು. ಮತ್ತು ಹಿಂದೂ ಧರ್ಮ ರಕ್ಷಣೆ ಬಗ್ಗೆ ಗಂಭೀರವಾಗಿ ಆಲೋಚಿಸುವಂಥವನು. ಆತನ ಜತೆಗೆ ಒಟ್ಟಿಗೆ ಕೆಲಸ ಮಾಡಿ ಎಂದು ಮೋಹನ್ ಗೌಡ ಸೂಚಿಸಿದ್ದಾಗಿ ನವೀನ್ ಹೇಳಿದ್ದಾನೆ.
ಗೌರಿ ಲಂಕೇಶ್ ಹತ್ಯೆಗೆ ನೆರವು ಕೋರಿದ ಪ್ರವೀಣ್
ಕರೆ ಮಾಡಿದ ವ್ಯಕ್ತಿ ಕೆಲ ದಿನಗಳ ನಂತರ ನವೀನ್ ನನ್ನು ಭೇಟಿ ಆಗಿದ್ದಾನೆ. ಆ ವೇಳೆ ಮನೆಯಲ್ಲಿ ನವೀನ್ ನ ಪತ್ನಿ ಸಹ ಇದ್ದರು. ಆ ದಿನ ಮನೆಯಲ್ಲೇ ಉಳಿದುಕೊಂಡ ಪ್ರವೀಣ್, ಕೆಲವು ಗುಂಡುಗಳನ್ನು ಪಡೆದುಕೊಂಡಿದ್ದಾನೆ. ಆಗಸ್ಟ್ 19, 2017ರಂದು ಹಿಂದೂ ಜನಜಾಗೃತಿ ಸಮಿತಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪ್ರವೀಣ್ ಕೂಡ ಭಾಗವಹಿಸಿದ್ದಾನೆ. ಸಮಾವೇಶದ ಕೊನೆ ದಿನ ವಿಜಯನಗರ ಬಡಾವಣೆಯ ಉದ್ಯಾನವೊಂದಕ್ಕೆ ನವೀನ್ ನನ್ನು ಕರೆದುಕೊಂಡು ಹೋದ ಪ್ರವೀಣ್, ಗೌರಿಲಂಕೇಶ್ ಹತ್ಯೆಗೆ ನೆರವು ನೀಡುವಂತೆ ಕೇಳಿಕೊಂಡಿದ್ದಾಗಿ ವಿಶೇಷ ತನಿಖಾ ತಂಡಕ್ಕೆ ನವೀನ್ ಹೇಳಿದ್ದಾನೆ.
ಮಂಗಳೂರಿನ ಸಂಸ್ಥೆ ಆಶ್ರಮಕ್ಕೆ ನವೀನ್
ಗೌರಿ ಲಂಕೇಶ್ ಹಿಂದೂಗಳಿಗೆ ಹಾಗೂ ಹಿಂದೂ ದೇವತೆಗಳಿಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಆದ್ದರಿಂದ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಆ ನಂತರ ಸ್ಥಳೀಯ ಸಂಘಟನೆ ನಾಯಕರ ಆಹ್ವಾನದ ಮೇರೆಗೆ ಅದರ ಮರು ತಿಂಗಳ ಐದನೇ ತಾರೀಕು ಮಂಗಳೂರಿನಲ್ಲಿರುವ ಸಂಸ್ಥೆಯ ಆಶ್ರಮಕ್ಕೆ ನವೀನ್ ತೆರಳಿದ್ದಾನೆ. ಮರು ದಿನ ಟಿವಿಯಲ್ಲಿ ಸುದ್ದಿ ನೋಡಿದಾಗ ಗೊತ್ತಾಗಿದೆ, ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿದೆ. ಇನ್ನು ಮೇ ಮೂವತ್ತೊಂದರಂದು ಅಮೋಲ್ ಕಾಳೆಯನ್ನು ಪುಣೆಯಲ್ಲಿ ಬಂಧಿಸಲಾಗಿದೆ. ಅಮಿತ್ ದಿಗ್ವೇಕರ್ ಪಾಂಡಾದಿಂದ ಮತ್ತು ಮನೋಹರ್ ಎಡವೆ ವಿಜಯಪುರದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದಾರೆ.