ಅಂದು ಬಹುಮಾನ ಪಡೆದಿದ್ದ ಪೊಲೀಸ್ ಪೇದೆ ಇಂದು ಜೈಲಿಗೆ!
ಬೆಂಗಳೂರು, ನವೆಂಬರ್ 20 : ಉತ್ತಮ ಕೆಲಸಕ್ಕಾಗಿ ಮೇಲಾಧಿಕಾರಿಗಳಿಂದ ಬಹುಮಾನ ಪಡೆದಿದ್ದ ಪೊಲೀಸ್ ಪೇದೆ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದಾರೆ. ಬೆಂಗಳೂರಿನ ನಂದಿನಿ ಲೇಔಟ್ ಠಾಣೆ ಪೊಲೀಸರು ಪೇದೆಯನ್ನು ಬಂಧಿಸಿದ್ದಾರೆ.
ಚಂದ್ರಕುಮಾರ್ ಅಲಿಯಾಸ್ ಚಂದ್ರಶೇಖರ್ (36) ಬಂಧಿತ ಪೇದೆ. ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್ ಹೋಂ ಗಾರ್ಡ್ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.
ಸರಗಳ್ಳನನ್ನು ಹಿಡಿದಿದ್ದ ಚಂದ್ರಕುಮಾರ್ಗೆ ಸನ್ಮಾನ, ಉಡುಗೊರೆ
27 ವರ್ಷದ ಹೋಂ ಗಾರ್ಡ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಹಿಳೆ ಕೆಲಸ ಮಾಡುವ ಸ್ಥಳಕ್ಕೆ ಬಂದಿದ್ದ ಚಂದ್ರಶೇಖರ್ ಅವರ ನಂಬರ್ ಪಡೆದಿದ್ದರು. ಬಳಿಕ ನಿರಂತರವಾಗಿ ಕರೆಗಳನ್ನು ಮಾಡುತ್ತಿದ್ದರು.
ಸರಗಳ್ಳನನ್ನು ಹಿಡಿದ ಪೇದೆಗೆ ಒಂದು ತಿಂಗಳ ರಜೆ ಜೊತೆ ಹಲವು ಇನಾಮು
ಕಳೆದ ವಾರ ಬಲವಂತದಿಂದ ಹೋಂ ಗಾರ್ಡ್ಅನ್ನು ಮನೆಗೆ ಚಂದ್ರಶೇಖರ್ ಡ್ರಾಪ್ ಮಾಡಿದ್ದರು. ಮರುದಿನ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಆಕೆ ಕೆಲಸ ನಿರ್ವಹಿಸುವಾಗ ಆಕೆಯ ಮೈ ಮುಟ್ಟಿ ಮಾತನಾಡಿಸಿದ್ದರು.
ಬೇರೆ ಮನೆ ಮಾಡಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದ. ಚಂದ್ರಶೇಖರ್ ವರ್ತನೆ ಬಗ್ಗೆ ಹೋಂ ಗಾರ್ಡ್ ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ದೂರು ನೀಡಿದ್ದರು. ಇನ್ಸ್ಪೆಕ್ಟರ್ ಚಂದ್ರಶೇಖರ್ಗೆ ಎಚ್ಚರಿಗೆ ನೀಡಿದ್ದರು. ಅಮಾನತುಗೊಳಿಸಿ, ಇಲಾಖಾ ತನಿಖೆ ನಡೆಸುವ ಕುರಿತು ಎಚ್ಚರಿಸಿದ್ದರು.
ಆದರೆ, ಚಂದ್ರಶೇಖರ್ ಆಕೆಯ ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಹೋಂ ಗಾರ್ಡ್ ಮನೆಗೆ ತೆರಳಿ, ಅತ್ಯಾಚಾರ ನಡೆಸಿದ್ದಾರೆ. ಮಹಿಳೆ ಈ ಕುರಿತು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಚಂದ್ರಶೇಖರ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಹುಮಾನ ನೀಡಿದ್ದರು : ಪೇದೆ ಚಂದ್ರಶೇಖರ್ ಜೂನ್ ತಿಂಗಳಿನಲ್ಲಿ ಮೇಲಾಧಿಕಾರಿಗಳಿಂದ ಬಹುಮಾನ ಪಡೆದಿದ್ದರು. ಸರಗಳ್ಳ ಚಂದ್ರಕುಮಾರ್ ಬಂಧಿಸುವ ಕಾರ್ಯಾಚರಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.