ನಿಮ್ಮ ಪಕ್ಷದಲ್ಲಿಯೇ ಉಗ್ರರಿದ್ದಾರೆ: ಮೋದಿಗೆ ಎಚ್ಡಿಕೆ ತಿರುಗೇಟು
Recommended Video
ಬೆಂಗಳೂರು, ಮೇ 4: ಜೆಡಿಎಸ್ ಪರ ಪ್ರಚಾರಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರನ್ನು ಕರೆಸಿಕೊಳ್ಳುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಟೀಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ.
ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ನಿಮ್ಮ ಪಕ್ಷದಲ್ಲಿಯೇ ಉಗ್ರರಿದ್ದಾರೆ. ಆ ಬುದ್ಧಿವಂತಿಕೆ ನಿಮ್ಮ ಪಕ್ಷದಲ್ಲಿಯೇ ಇರುವುದು ಎಂದಿದ್ದಾರೆ.
ಮೋದಿಯವರು ಜೆಡಿಎಸ್ಸನ್ನು ವಾಚಾಮಗೋಚರವಾಗಿ ತೆಗಳಿದ್ದೇಕೆ?
ಜೆಡಿಎಸ್ ಉಗ್ರರಿಗೆ ಎಂದಿಗೂ ಉತ್ತೇಜನ ನೀಡುವುದಿಲ್ಲ. ಯಾವಾಗ ಉಗ್ರ ಚಟುವಟಿಕೆ ಮಾಡಬೇಕು ಎಂಬ ಬುದ್ಧಿವಂತಿಕೆ ನಮಗಿಲ್ಲ. ನಿಮ್ಮ ಪಕ್ಷದಲ್ಲಿಯೇ ಉಗ್ರರನ್ನು ಇಟ್ಟುಕೊಂಡಿದ್ದೀರಿ ಎಂದು ಮೋದಿ ಅವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.
ಗುರುವಾರ ಬೆಂಗಳೂರಿನ ಕೆಂಗೇರಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ಮೋದಿ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಕರ್ನಾಟಕದಲ್ಲಿ ಜೆಡಿಎಸ್ ಸೋಲುವುದು ಗ್ಯಾರಂಟಿ. ಅವರು ಭಯೋತ್ಪಾದಕರಿಗೆ ಬೆಂಬಲ ನೀಡುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಒವೈಸಿ ಅವರೊಂದಿಗಿನ ಜೆಡಿಎಸ್ ಮೈತ್ರಿಯನ್ನು ಟೀಕಿಸಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಕನಿಷ್ಠ ಮೂರನೇ ಸ್ಥಾನವನ್ನೂ ಪಡೆಯುವುದಿಲ್ಲ. ಅಂಥ ಪಕ್ಷಕ್ಕೆ ಮತ ನೀಡುವ ಮೂಲಕ ಅದನ್ನು ವ್ಯರ್ಥಮಾಡಿಕೊಳ್ಳಬೇಡಿ ಎಂದು ಮೋದಿ ಹೇಳಿದ್ದರು.