ಸಿದ್ರಾಮಣ್ಣ, BMW ಕಾರಿನಲ್ಲಿ ಬರೋ ಹೆಣ್ಣುಮಗಳು ಯಾರು?ಎಚ್ಡಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಳೆದ ಕೆಲವು ದಿನಗಳಿಂದ ಇನ್ನಿಲ್ಲದಂತೆ ಕಾಡುತ್ತಿರುವುದು ಎರಡು ವಿಚಾರ. ಒಂದೆಡೆ ಜೆಡಿಎಸ್ ಪಕ್ಷಕ್ಕೆ ಕಚೇರಿ ಜಾಗ ಮಂಜೂರು ಮಾಡುವ ವಿಚಾರ, ಇನ್ನೊಂದೆಡೆ ಬಿಜೆಪಿ ಅರ್ಕಾವತಿ ಡಿನೋಟಿಫಿಕೇಶನ್ ವಿಚಾರದಲ್ಲಿ ಸಿಎಂ ವಿರುದ್ದ ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿರುವುದು.
ಕಚೇರಿ ವಿವಾದವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದು, ವಿಷಯ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿರುವುದಕ್ಕೆ ಕಾರಣ.
ಪಕ್ಷಕ್ಕೊಂದು ಜಾಗ ನೀಡುವ ವಿಚಾರ ರಾಜಕೀಯ ಗುರು ದೇವೇಗೌಡ ಮತ್ತು ಶಿಷ್ಯ ಸಿದ್ದರಾಮಯ್ಯ ನಡುವಿನ ಹಳೆಯ ನೆನಪುಗಳನ್ನೆಲ್ಲಾ ಹೊತ್ತು ತರುತ್ತಿರುವುದು ಈ ವಿಷಯ ಇನ್ನಷ್ಟು ಗಂಭೀರವಾಗಿ ಸಾಗುವಂತಾಗಲು ಕಾರಣವಾಗಿದೆ. (ಗೌಡ್ರ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಇದೆಯೇ)
ಪಕ್ಷದ ಕಚೇರಿಯಲ್ಲಿ (ಜ 23) ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಪಕ್ಷಕ್ಕೆ ಜಾಗ ನೀಡುವ ವಿಚಾರದ ಬಗ್ಗೆ ಮಾತೆತ್ತದೇ, ಅರ್ಕಾವತಿ ಬಡಾವಣೆ ವಿಚಾರದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಭ್ರಷ್ಟಾಚಾರದ ವಿಚಾರದಲ್ಲಿ ಸರಕಾರದ ವಿರುದ್ದ ದಾಖಲೆ ಕಲೆಹಾಕುವಲ್ಲಿ ನಿಸ್ಸೀಮರಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ದ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಕೆಲವೊಂದು ಅಧಿಕಾರಿಗಳನ್ನು ಕಟ್ಟಿಕೊಂಡು ಸಿದ್ದರಾಮಯ್ಯ ಸರಕಾರ ಜನರ ಕಿವಿಗೆ ಹೂ ಮುಡಿಸಲು ಮುಂದಾಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಇವರೇ ಭ್ರಷ್ಟರಾಗಿರುವಾಗ ಯಡಿಯೂರಪ್ಪ ಬಗ್ಗೆ ಇವರು ಮಾತನಾಡುವುದು ಹಾಸ್ಯಾಸ್ಪದ ಅಲ್ಲದೇ ಇನ್ನೇನು ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. (ಏನಿದು ಅರ್ಕಾವತಿ ಬಡಾವಣೆ ವಿವಾದ)
ಕುಮಾರಸ್ವಾಮಿ ಉಲ್ಲೇಖಿಸಿರುವ BMW ಕಾರಿನಲ್ಲಿ ಬರುವ ಶಾರದಾದೇವಿ ಅನ್ನೋ ಮಹಿಳೆ ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ರಿಡು ಪ್ರಕರಣದ ಬಗ್ಗೆ ಕುಮಾರಸ್ವಾಮಿ
ರಿಡು ಪ್ರಕರಣದಲ್ಲಿ (ರಿ ಡಿನೋಟಿಫಿಕೇಶನ್ ಅಂತ ನಾನು ಹೇಳೋಕೆ ಹೋಗಲ್ಲ) ನಡೆದಿರತಕ್ಕಂತಹ ದೊಡ್ಡ ಮಟ್ಟದ ಅಕ್ರಮ ಏನಿದೆಯೋ, ಈ ಬಗ್ಗೆ ಮಾಧ್ಯಮದ ಮುಂದೆ ಹಲವಾರು ಮಾಹಿತಿಯನ್ನು ನೀಡಿದ್ದೇನೆ. ಕಾನೂನು ಸಚಿವರು ಕೆಲವೊಂದು ಮಾಹಿತಿಯನ್ನು ನೀಡಿದ್ದಾರೆ. ನನ್ನ ಮತ್ತು ಯಡಿಯೂರಪ್ಪ ಅವಧಿಯಲ್ಲಿ ಡಿನೋಟಿಫಿಕೇಶನ್ ಹೆಚ್ಚಾಗಿ ನಡೆದಿದೆ ಎಂದು ಜಯಚಂದ್ರ ಹೇಳಿದ್ದಾರೆ. ಸಚಿವರು ಮತ್ತು ಸಿಎಂ ಎದೆಮುಟ್ಟಿಕೊಂಡು ಹೇಳಲಿ ನನ್ನ ಅವಧಿಯಲ್ಲಿ ಹೆಚ್ಚಾಗಿ ಈ ಪ್ರಕರಣ ನಡೆದಿದೆಯೋ ಅಥವಾ ಸಿದ್ದರಾಮಯ್ಯ ಸರಕಾರದಲ್ಲಿ ಹೆಚ್ಚಾಗಿ ನಡೆದಿದೆಯೋ ಎಂದು ಕುಮಾರಸ್ವಾಮಿ ಸವಾಲೆಸೆದಿದ್ದಾರೆ.
ಜಯಚಂದ್ರ ನೇರ ಜವಾಬ್ದಾರರು
ಜಯಚಂದ್ರ ಅವರು ಕಾನೂನು ಸಚಿವರಾಗಿ ಈ ಸರಕಾರದ ಅಕ್ರಮದ ಬಗ್ಗೆ ನೇರವಾಗಿ ಜವಾಬ್ದಾರರಾಗುತ್ತಾರೆ. ಅರ್ಕಾವತಿ ವಿಚಾರದಲ್ಲಿ ನಾನು ಈಗಾಗಲೇ ನನ್ನ ನಿರ್ಧಾರವನ್ನು ಹೇಳಿದ್ದೇನೆ. ಬಿಡಿಎ (ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ) ತನ್ನ ರಿಜಿಸ್ಟರ್ಡ್ ಆಫೀಸ್ ಹೊರತಾಗಿ ಇನ್ನೆರಡು ಕಡೆ ಕಚೇರಿ ನಡೆಸುತ್ತಿದೆ. ಒಂದು ಬಾಲಬ್ರೂಯಿ ಬಂಗ್ಲೆಯಲ್ಲಿ ಇನ್ನೊಂದು ಎಂಜಿ ರಸ್ತೆಯ ಫ್ಲಾಟ್ ನಲ್ಲಿ - ಕುಮಾರಸ್ವಾಮಿ ಆರೋಪ.
ಶಾರದಾ ಪ್ರಸಾದ್
ದಾಖಲೆಗಳನ್ನು ಎಂಟ್ರಿ ಮಾಡಲು ಮಾಸಿಕ ಎಂಟು ಸಾವಿರ ರೂಪಾಯಿಯ ಹೊರಗುತ್ತಿಗೆಯ ಮೇಲೆ ಶಾರದಾ ಪ್ರಸಾದ್ ಅನ್ನೋ ಮಹಿಳೆಯನ್ನು ಮುಖ್ಯಮಂತ್ರಿ ಕಚೇರಿಯಿಂದ ನೇಮಿಸಲಾಗುತ್ತದೆ. ಆಕೆ ದಿನಾ ಬೆಳಗ್ಗೆ ಬರ್ತಾರೆ ಸಾಯಂಕಾಲ ಹೋಗ್ತಾರೆ. ಒಂದು ದಿನ ಜಾಗ್ವರ್ ಕಾರ್ ನಲ್ಲಿ ಬಂದರೆ ಇನ್ನೊಂದು ದಿನ BMW ಕಾರಿನಲ್ಲಿ ಬರುತ್ತಾರೆ - ಕುಮಾರಸ್ವಾಮಿ.
ಯಾರು ಈ ಶಾರದಾ ಪ್ರಸಾದ್?
ಇವರೇ ಈಗಾಗುತ್ತಿರುವ ಸಮಸ್ಯೆಗೆ ಮೂಲ ಕಾರಣ, ಬಿಡಿಎ ಕಚೇರಿ ಮುಖ್ಯಮಂತ್ರಿಗಳ ಸುಪರ್ದಿಗೆ ಬರುವ ನೇರ ಇಲಾಖೆ. ಯಾರು ಆ ಹೆಣ್ಣುಮಗಳು? ಯಾಕೆ ಅವರಿಗೆ ಸಿದ್ದರಾಮಯ್ಯ ಸಂಪೂರ್ಣ ಜವಾಬ್ದಾರಿ ಕೊಟ್ಟಿದ್ದಾರೆ? ಆಕೆ ಮಾಡಿದ ಡೇಟಾ ಎಂಟ್ರಿಯನ್ನು ಯಾರಾದರೂ ಚೆಕ್ ಮಾಡ್ತಾರಾ? ಮುಖ್ಯಮಂತ್ರಿಗಳೇ ಉತ್ತರ ಕೊಡಿ, ನಿಮಗೆ ಪುರುಷೊತ್ತು ಇಲ್ಲದಿದ್ದರೇ ಬಿಡಿಎ ಆಯುಕ್ತ ಶ್ಯಾಂ ಭಟ್ ಅವರಿಂದಾದರೂ ಉತ್ತರ ಕೊಡಿಸಿ - ಕುಮಾರಸ್ವಾಮಿ.
ದಾಖಲೆ ಸೃಷ್ಟಿ ಮಾಡಿದ್ದಾರೆ
ನಿವೃತ್ತ ತಹಶೀಲ್ದಾರ್ ಮತ್ತು ನಿವೃತ್ತ ಅಸಿಸ್ಟಂಟ್ ಕಮಿಷನರ್ ಮುಖಾಂತರ ಕಡತವನ್ನು ಸೃಷ್ಟಿ ಮಾಡಲಾಗುತ್ತದೆ. ಸರಕಾರ ಹಂತವಾಗಿ ತಾವು ಮಾಡಿರುವ ತಪ್ಪನ್ನು ಸರಿಪಡಿಸಲು ದಾಖಲೆಯನ್ನು ತಿರುಚಲಾಗುತ್ತಿದೆ. ಕೆಂಪಣ್ಣ ಅವರ ಅಧಿಕಾರ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ಕೆಂಪಣ್ಣ ಕಮಿಷನ್ ಮುಂದೆ ಯಾಕೆ ಕಡತವನ್ನು ಮುಂದಿಟ್ಟಿಲ್ಲ. ಪದೇ ಪದೇ ನನ್ನನ್ನು ಕೆಣಕಬೇಡಿ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಭೂಮಾಲೀಕರಿಗೆ NOC
ಬಿಡಿಎದಿಂದ ಭೂಮಾಲೀಕರಿಗೆ NOC ಕೊಡಬೇಕಾದರೆ ರಿಡು ಆದ ನಂತರ NOC ಕೊಟ್ಟಿದ್ದೀರಾ ಸಿದ್ದರಾಮಯ್ಯನವರೇ? ಜನರಿಗೆ ಸತ್ಯವನ್ನು ಹೇಳುವ ಶಕ್ತಿ ನಿಮಗೆ ಇದೆಯಾ? ಅಧಿಕಾರಿಗಳು ಕೊಟ್ಟ ಸೂಚನೆಗೆ ಸಹಿ ಹಾಕಿದ್ದೇನೆಂದು ನೀವು ಹೇಳ್ತೀರಲ್ಲಾ, ಕಾನೂನನ್ನು ಗಾಳಿಗೆ ತೂರಿ NOC ನೀಡಲು ಎಷ್ಟು ಹಣ ಫಿಕ್ಸ್ ಮಾಡಿದ್ರಿ. ನೀವು ಹೇಳಿದ ಕೆಲಸ ಮಾಡಲು ಒಬ್ಬರಿಗೆ ಎಂಎಲ್ಸಿ ಸ್ಥಾನ ಗಿಫ್ಟ್ ಕೊಟ್ಟಿದ್ದೀರಲ್ವಾ ಎಂದು ಕುಮಾರಸ್ವಾಮಿ, ಸರಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.
ಭಂಡ ಧೈರ್ಯದ ಸರಕಾರ
ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಎನ್ನುವಂತೆ ಭಂಡ ಧೈರ್ಯದಲ್ಲಿ ಅಕ್ರಮ ಸಂಪತ್ತಿನ ದಾಖಲೆಗಳನ್ನು ಕಾನೂನು ಬಾಹಿರ ಚಟುವಟಿಕೆ ನಡೆಸಿ ತಿರುಚಲಾಗುತ್ತಿದೆ? ನಾನು ಸುಳ್ಳು ಹೇಳಿಕೊಂದು ಹೆದರಿಕೊಂಡು ಕೂರುವವನಲ್ಲ. NOC ಕರ್ಮಕಾಂಡ ದೊಡ್ಡ ಮಟ್ಟದ ಹಗರಣ. ಸಿದ್ದರಾಮಯ್ಯನವರ ಸತ್ಯ, ಸ್ವಚ್ಚ ಆಡಳಿತದ ಮುಖವಾಡವನ್ನು ಸದ್ಯದಲ್ಲೇ ಹೊರಗೆಳೆಯುತ್ತೇನೆ - ಕುಮಾರಸ್ವಾಮಿ