ಬಿಬಿಎಂಪಿಯಲ್ಲಿ ಜೆಡಿಎಸ್ಗೆ ಸೆಡ್ಡು ಹೊಡೆಯಲಿದ್ದಾರೆ ಭಿನ್ನಮತೀಯರು
ಬೆಂಗಳೂರು, ಜುಲೈ 23 : ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಮತ ಹಾಕಿದ್ದ ಜೆಡಿಎಸ್ ಭಿನ್ನಮತೀಯ ಶಾಸಕರು, ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆಯಲ್ಲಿಯೂ ಪಕ್ಷಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಸೆಪ್ಟೆಂಬರ್ನಲ್ಲಿ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ.
2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದಾಗಿ, ಬಿಜೆಪಿಗೆ ಮೇಯರ್ ಮತ್ತು ಉಪ ಮೇಯರ್ ಸ್ಥಾನ ಕೈತಪ್ಪಿತು.[ಬಿಬಿಎಂಪಿಯಲ್ಲಿ ಮೈತ್ರಿ ಮುರಿಯುವ ಮಾತನಾಡಿದ ಕುಮಾರಸ್ವಾಮಿ!]
ಶಾಸಕರಾದ ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ) ಅವರು ಎರಡೂ ಪಕ್ಷಗಳ ನಡುವಿನ ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಈಗ ಈ ಮೂರು ಶಾಸಕರನ್ನು ಪಕ್ಷ ಅಮಾತನು ಮಾಡಿದೆ.[ಶಾಸಕರ ಅಮಾನತು : ಬಿಬಿಎಂಪಿ ಮೈತ್ರಿಗೆ ಧಕ್ಕೆ?]
ಆದರೆ, ಬಿಬಿಎಂಪಿಯಲ್ಲಿರುವ 14 ಜೆಡಿಎಸ್ ಕಾರ್ಪೊರೇಟರ್ಗಳ ಪೈಕಿ 11 ಜನರು ಈ ಶಾಸಕರ ಹಿಡಿತದಲ್ಲಿದ್ದಾರೆ. ಆದ್ದರಿಂದ, ಪಕ್ಷಕ್ಕೆ ಇಷ್ಟವಿಲ್ಲದಿದ್ದರೂ ಬಿಬಿಎಂಪಿಯಲ್ಲಿ ಮೈತ್ರಿ ಮುರಿಯಲು ಸಾಧ್ಯವಿಲ್ಲ. ಈಗಾಗಲೇ ಭಿನ್ನಮತೀಯರು ಮೇಯರ್ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.[ಜೆಡಿಯುನತ್ತ ಹೊರಟ JDS ಬಂಡಾಯ ಶಾಸಕರು?]
'5 ವರ್ಷಕ್ಕೆ ಮೈತ್ರಿ ಮುಂದುವರೆಯಲಿದೆ'
ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಬಿಬಿಎಂಪಿ ಮೈತ್ರಿ ಬಗ್ಗೆ ಮಾತನಾಡಿದ್ದು, 'ಬಿಬಿಎಂಪಿಯಲ್ಲಿ ಕಾಂಗ್ರೆಸ್ಗೆ ಬೆಂಬಲ ವಿಚಾರದಲ್ಲಿ ಎರಡನೇ ಮಾತಿಲ್ಲ. ದೇವೇಗೌಡರ ಸಮ್ಮುಖದಲ್ಲೇ ಆಗಿರುವ ಒಪ್ಪಂದದಂತೆ 5 ವರ್ಷ ಕಾಂಗ್ರೆಸ್ಸಿಗೆ ಬೆಂಬಲ ನೀಡಬೇಕು. ಅದರಂತೆ ಎರಡನೇ ಅವಧಿಗೂ ಮೈತ್ರಿ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.
ಮೈತ್ರಿ ಮುರಿಯುವ ಮಾತನಾಡಿದ ಎಚ್ಡಿಕೆ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಬಿಬಿಎಂಪಿಯಲ್ಲಿ ಮೈತ್ರಿ ಮುರಿಯುವ ಮಾತನಾಡಿದ್ದಾರೆ. 'ಎಲ್ಲಿ ಹೋದರು ಗುಂಡಿ, ಕಸದ ರಾಶಿ. ಯಾವ ಪುರುಷಾರ್ಥಕ್ಕೆ ಆಡಳಿತ ಮಾಡುತ್ತಿದ್ದೀರಿ. ಇಂತಹ ಆಡಳಿತ ನೋಡಿ ಸಾಕಾಗಿದೆ. ಇದು ಹಿಗೇಯೇ ಮುಂದುವರೆದರೆ ನೀಡಿರುವ ಬೆಂಬಲ ವಾಪಸ್ ಪಡೆಯಬೇಕಾಗುತ್ತದೆ' ಎಂದು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಶಾಸಕರ ಜೊತೆಗಿದ್ದಾರೆ ಬಿಬಿಎಂಪಿ ಸದಸ್ಯರು
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣ ಜೆಡಿಎಸ್ ಜಮೀರ್ ಅಹಮದ್ ಖಾನ್, ಕೆ.ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಪಕ್ಷದಿಂದ ಅಮಾತನು ಮಾಡಿದೆ. ಆದರೆ, ಬಿಬಿಎಂಪಿಯಲ್ಲಿರುವ ಜೆಡಿಎಸ್ ಸದಸ್ಯರು ಈ ಶಾಸಕರ ಜೊತೆ ಇದ್ದಾರೆ. ಆದ್ದರಿಂದ, ಜೆಡಿಎಸ್ ಮೈತ್ರಿ ಮುರಿಯಲು ಮುಂದಾದರೂ ಬಿಬಿಎಂಪಿ ಸದಸ್ಯರು ಕಾಂಗ್ರೆಸ್ ಜೊತೆ ಕೈ ಜೋಡಿಸಬಹುದು.
ಬಿಬಿಎಂಪಿಯಲ್ಲಿ ಬಲಾಬಲ
2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಜೆಡಿಎಸ್ ಕಾಂಗ್ರೆಸ್ ಮೈತ್ರಿಯಿಂದಾಗಿ, ಮೇಯರ್ ಸ್ಥಾನ ಕೈತಪ್ಪಿತು. ಕಾಂಗ್ರೆಸ್ನ ಮಂಜುನಾಥ ರೆಡ್ಡಿ ಅವರು ಮೇಯರ್ ಆಗಿ ಆಯ್ಕೆಯಾಗಿದ್ದರು. ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಅವರ ಪತ್ನಿ ಹೇಮಲತಾ ಅವರು ಉಪ ಮೇಯರ್ ಆಗಿದ್ದರು.
ಪಾಲಿಕೆ ಮೈತ್ರಿಗೆ ಧಕ್ಕೆಯಿಲ್ಲ
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಬಿಬಿಎಂಪಿ ಮೈತ್ರಿ ಮುರಿಯುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಒಪ್ಪಂದದಂತೆ 5 ವರ್ಷ ಕಾಂಗ್ರೆಸ್ಸಿಗೆ ಬೆಂಬಲ ನೀಡಬೇಕು. ಅದರಂತೆ ಬೆಂಬಲ ಕೊಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.